ಹಿರಿಯೂರು: ಬಬ್ಬೂರು ಗ್ರಾಮದಲ್ಲಿ ಮಳೆಗಾಗಿ ವಿಶೇಷ ಪೂಜೆ
ಹಿರಿಯೂರು, ಸೆಪ್ಟೆಂಬರ್, 25: ಮಳೆಗಾಗಿ ಜನರು ವಿಶಿಷ್ಟ ಪೂಜೆಯ ಮೊರೆ ಹೋದ ಘಟನೆ ಹಿರಿಯೂರು ತಾಲೂಕಿನ ಬಬ್ಬೂರು ಗ್ರಾಮದಲ್ಲಿ ನಡೆದಿದೆ.
ತಾಲೂಕಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಅಂದಾಜಿಗೂ ಮೀರಿ ಬರಗಾಲ ಈ ವರ್ಷ ಕಂಡಿದ್ದು, ಆಗಸ್ಟ್, ಸೆಪ್ಟೆಂಬರ್ನಲ್ಲಿ ಒಂದೆರಡು ಬಾರಿ ಅಲ್ಪ ಮಳೆಯಾಗಿದೆ. ಇದನ್ನು ಬಿಟ್ಟರೆ ತಾಲೂಕಿನಲ್ಲಿ ಯಾವುದೇ ರೀತಿಯ ದಾಖಲೆ ಮಳೆ ಬಂದಿಲ್ಲ. ಮಳೆ ಇಲ್ಲದ ಕಾರಣ ಈಗಾಗಲೇ ಕಡ್ಲೆಗಿಡಗಳು ಒಣಗಿ ನಿಂತಿದ್ದು, ರೈತರ ಜಮೀನುಗಳಲ್ಲಿ ಬೇರೆ ಬೆಳೆಗಳು ಸಹ ಉಳಿಯುವ ಲಕ್ಷಣಗಳು ಕಾಣುತ್ತಿಲ್ಲ. ರೈತರು ಹಿಂಗಾರು ಮಳೆಯ ಆಸೆಯನ್ನು ಕೈಬಿಡಲಾಗಿದ್ದು, ವರುಣ ದೇವನ ಕೃಪೆಗಾಗಿ ಬಬ್ಬೂರು ಗ್ರಾಮಸ್ಥರು ಪುರದ ಮಠದ ಶ್ರೀ ಬಸವೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ತಾಲೂಕಿನ ಮೇಲೆ ವರುಣದೇವ ಮುನಿಸಿಕೊಂಡು ಬರಗಾಲ ಬಂದಾಗ ದೇವರಿಗೆ ಎಡೆ ಪೂಜೆ ಅರ್ಪಿಸಿದರೆ ಮಳೆ ಬರುತ್ತದೆ ಎಂಬ ನಂಬಿಕೆ ಬಬ್ಬೂರು ಗ್ರಾಮಸ್ಥರಲ್ಲಿದೆ. ಹಾಗಾಗಿ ಗ್ರಾಮಸ್ಥರು ಮಳೆ ಕೈ ಕೊಟ್ಟ ಸಂದರ್ಭದಲ್ಲಿ ಎಲ್ಲರೂ ಒಂದೆಡೆ ಸೇರಿ ಮಾತುಕತೆ ನಡೆಸಿ ಈ ವಿಶೇಷ ಆಚರಣೆ ಕೈಗೊಳ್ಳುತ್ತಾರೆ.
ಗ್ರಾಮಸ್ಥರೆಲ್ಲರೂ ಮಾತುಕತೆ ನಡೆಸಿ ಏಡಿಗೆ ಪೂಜೆ ಮಾಡಲು ತೀರ್ಮಾನಿಸುತ್ತಾರೆ.ಯಾವುದೇ ಜಾತಿ, ಧರ್ಮ, ಬೇಧವಿಲ್ಲದೆ ನಡೆಯುವ ಈ ಪೂಜೆ ವಿಶೇಷವಾದುದಾಗಿದೆ. ಗ್ರಾಮದ ಪ್ರತಿಯೊಬ್ಬರ ಮನೆಯಲ್ಲಿ ತಯಾರಿಸಿದ ಸಿಹಿ ಅಡುಗೆಯನ್ನು ಕೋಡಿ ಮಲ್ಲಪ್ಪ ದೇವಾಲಯದ ಬಳಿ ಸಂಗ್ರಹಿಸಲಾಗುತ್ತದೆ. ಇದನ್ನು ಊರಿನಿಂದ 4 ಕಿಲೋ ಮೀಟರ್ ದೂರದಲ್ಲಿರುವ ಪುರದ ಮಠದ ಬಸವೇಶ್ವರ ದೇವಾಲಯಕ್ಕೆ ಕೊಂಡೊಯ್ದು ಅಲ್ಲಿ ದೇವರಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಿ ಪ್ರಸಾದ ವಿತರಣೆ ಮಾಡಲಾಗುತ್ತದೆ. ಪೂಜೆ ಸಲ್ಲಿಸಿದ ಮೇಲೆ ಮಳೆ ಬರುತ್ತದೆ ಎಂಬ ನಂಬಿಕೆ ಮೊದಲಿನಿಂದಲೂ ಗ್ರಾಮಸ್ಥರಲ್ಲಿದೆ.
ಇನ್ನು ಈ ಆಚರಣೆ ಕುರಿತು ಪ್ರಗತಿಪರ ರೈತ ಎಂ.ಟಿ.ಸುರೇಶ್ ಮಾತನಾಡಿ, ತಾಲೂಕಿನಲ್ಲಿ 2017 ಮತ್ತು 2018ರಲ್ಲಿ ಮಳೆ ಇಲ್ಲದೆ ಬರಗಾಲ ಆವರಿಸಿತ್ತು. ಏಡಿಗೆ ಪೂಜೆ ಸಲ್ಲಿಸಿದ ಮೇಲೆ ತಾಲೂಕಿನಲ್ಲಿ ಉತ್ತಮ ಮಳೆ ಬಂದಿತ್ತು. ಅದರಲ್ಲೂ ವಿವಿ ಸಾಗರ ಡ್ಯಾಂಗೆ ನೀರು ಹರಿದು ಬಂದಿತ್ತು. ಅದೇ ರೀತಿ ಮಳೆ ಪೂಜೆ ಸಲ್ಲಿಸಿದರೆ ಈಗಲೂ ಮಳೆ ಬರಬಹುದು ಎನ್ನುವ ನಂಬಿಕೆ ಇಲ್ಲಿನ ಜನರದ್ದಾಗಿದೆ.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯ ಮುಖಂಡರುಗಳಾದ ಜಿ.ಪಿ. ಶ್ರೀಧರ್, ಕಾಂತರಾಜು, ಸಂತೋಷ್, ಪ್ರಭು ಪ್ರಸಾದ್, ಬಸವರಾಜ್, ಭರತ್, ಪ್ರಭು, ಪ್ರಶಾಂತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.












Click it and Unblock the Notifications