ಕಲುಷಿತ ನೀರು ಸೇವನೆ ಪ್ರಕರಣ: ಮೃತರ ಕುಟುಂಬಸ್ಥರ ಸಂಪೂರ್ಣ ಜವಾಬ್ದಾರಿ ನಮ್ಮದು: ಸಿಎಂ ಭರವಸೆ
ಚಿತ್ರದುರ್ಗ, ಅಕ್ಟೋಬರ್, 06: ಇಂದು ಕವಾಡಿಗರಹಟ್ಟಿಗೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿದ್ದು, ಈ ವೇಳೆ ಮಾತನಾಡಿದ ಅವರು, ಕವಾಡಿಗರಹಟ್ಟಿಯಲ್ಲಿ ಆಗಸ್ಟ್ 1ರಂದು ಕಲುಷಿತ ನೀರು ಸೇವಿಸಿ 200ಕ್ಕೂ ಅಧಿಕ ಮಂದಿ ಅಸ್ವಸ್ಥರಾಗಿದ್ದರು. ಇಲ್ಲಿ ಎಲ್ಲರೂ ಬಡತನದಲ್ಲಿ ಇದ್ದವರು. ಈ ವಿಷಯ ತಿಳಿದು ಎಲ್ಲರಿಗೂ ಫೋನ್ ಮಾಡಿದ್ದೆ ಎಂದರು.
ಶುದ್ದ ಕುಡಿಯುವ ನೀರು ನೀಡುವುದು ಸರ್ಕಾರದ ಜವಬ್ದಾರಿ. ಕೂಡಲೇ ಡಿಸಿ ಶಾಸಕರು, ಸಚಿವರು ಸ್ಥಳಕ್ಕೆ ಬಂದು ಸಮಸ್ಯೆ ಆಲಿಸಿದ್ದಾರೆ. 6 ಮಂದಿ ಕಲುಷಿತ ನೀರು ಕುಡಿದು ಮೃತಪಟ್ಟಿದ್ದಾರೆ. ಶುದ್ದ ನೀರು ನೀಡಲು ಆಗಿಲ್ಲ ಎಂಬುದು ಊಹಿಸಲು ಆಗಲ್ಲ. ಸರ್ಕಾರದಿಂದ ಪರಿಹಾರ ಘೋಷಣೆಗೆ ಸೂಚನೆ ನೀಡಿದ್ದೆ. ನಗರಸಭೆಯಿಂದ ಕೂಡಾ ಪರಿಹಾರ ನೀಡಿದ್ದೇವೆ. ಡಿಸಿ ಜೊತೆಗೆ ಸಭೆ ನಡೆಸಿ ಕೂಡಲೇ ಕುಡಿಯುವ ನೀರು ಸಮಸ್ಯೆ ಆಗದಂತೆ ಸೂಚನೆ ನೀಡಿದ್ದೇನೆ. ಇನ್ನುಮುಂದೆ ಕಲುಷಿತ ನೀರು ಕೊಟ್ಟರೆ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಆಗುತ್ತದೆ ಎಂದರು.

ಕಲುಷಿತ ನೀರು ಸೇವನೆ ಮಾಡಿ 6 ಜನ ಮೃತಪಟ್ಟಿದ್ದು, ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬಯಸುವೆ. ಅಲ್ಲದೆ ಮೃತರ 3 ಹೆಕ್ಟೇರ್ ಜಮೀನು ಹಾಗೂ ಅಭಿವೃದ್ಧಿಗಾಗಿ 4 ಕೋಟಿ ಹಣ ನೀಡಿದ್ದೇವೆ. ಉದ್ಯೋಗವನ್ನೂ ನೀಡುತ್ತೇವೆ. ಹಾಗೂ ಮನೆಯನ್ನೂ ಕೂಡ ನಾವೇ ಕಟ್ಟಿಸುತ್ತೇವೆ. ಒಟ್ಟಿನಲ್ಲಿ ಮೃತರ ಕುಟುಂಬದ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಳ್ಳುತ್ತದೆ ಎಂದರು.
ರಾಜ್ಯದಲ್ಲಿ ಈ ಬಾರಿ ಬರಗಾಲ ಆವರಿಸಿದೆ. 122 ವರ್ಷಗಳ ಬಳಿಕ ಇಂತಹ ಬರಗಾಲ ಬಂದಿದೆ. 195 ತಾಲೂಕುಗಳನ್ನು ಬರ ಪೀಡಿತ ತಾಲೂಕುಗಳೆಂದು ಘೋಷಣೆ ಮಾಡಿದ್ದೇವೆ. ಇನ್ನೊಂದು ಸುತ್ತಿನ ಸಭೆಯನ್ನೂ ಕೂಡ ಮಾಡುತ್ತಿದ್ದೇವೆ. ರಾಜ್ಯದಲ್ಲಿ 30 ಕೋಟಿ ನಷ್ಟ ಆಗಿದೆ. ಎನ್ಡಿಆರ್ಎಫ್ ನಾರ್ಮ್ಸ್ ಪ್ರಕಾರ ಪರಿಹಾರಕ್ಕೆ ಕೇಂದ್ರಕ್ಕೆ ಪತ್ರ ಬರೆದಿದ್ದಿದ್ದು, ಕೇಂದ್ರದಿಂದ ರಾಜ್ಯಕ್ಕೆ ತಜ್ಞರ ತಂಡ ಆಗಮಿಸಿದೆ ಎಂದರು.
ಅನೇಕ ರಾಜ್ಯಗಳಲ್ಲಿ ಈ ಬಾರಿ ಮಳೆ ಕೈಕೊಟ್ಟಿದ್ದು, ದೇಶದಲ್ಲೇ ಬರಗಾಲ ಆವರಿಸಿದೆ. ಆದ್ದರಿಂದ ರಾಜ್ಯದಲ್ಲಿ ಜನ ಗುಳೆ ಹೋಗದಂತೆ ಸಭೆ ನಡೆಸಿ ಸೂಚನೆ ನೀಡಿದ್ದೇವೆ. ಅನ್ನ ಭಾಗ್ಯ ಅಕ್ಕಿ ನೀಡಿದ್ದೇವೆ, ಗೃಹ ಜ್ಯೋತಿ ನೀಡಿದ್ದೇವೆ. 1 ಕೋಟಿ 10 ಲಕ್ಷ ಜನರಿಗೆ 2 ಸಾವಿರ ಹಣ ಹಾಕಿದ್ದೇವೆ. ಇನ್ನೂ ಕೆಲವರಿಗೆ ಬ್ಯಾಂಕ್ ಸಮಸ್ಯೆಯಿಂದ ಹಣ ಬಂದಿಲ್ಲ. ಹಾಗೆಯೇ ಶಕ್ತಿ ಯೋಜನೆ ಮೂಲಕ ಬಸ್ ಪ್ರಯಾಣವನ್ನು ಉಚಿತವಾಗಿ ನೀಡಿದ್ದೇವೆ. ಈ ಯೋಜನೆಯಿಂದ ರಾಜ್ಯದಲ್ಲಿ 50-60 ಲಕ್ಷ ಮಹಿಳೆಯರು ಒಂದು ದಿನಕ್ಕೆ ಉಚಿತ ಪ್ರಯಾಣ ಮಾಡುತ್ತಿದ್ದಾರೆ ಎಂದರು.












Click it and Unblock the Notifications