ಹಿರಿಯೂರು ನಗರಸಭೆಯಲ್ಲಿ ಭಷ್ಟಾಚಾರ; ಮಾಜಿ ಸದಸ್ಯರ ಆರೋಪ
ಚಿತ್ರದುರ್ಗ, ಅಕ್ಟೋಬರ್ 05; ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರ ಸಭೆಯಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ ಎಂದು ಮಾಜಿ ನಗರಸಭಾ ಸದಸ್ಯ ಜಿ. ಪ್ರೇಮ್ ಕುಮಾರ್ ಗಂಭೀರ ಆರೋಪ ಮಾಡಿದ್ದಾರೆ. ಅದರಲ್ಲೂ ನಗರಸಭೆ ಅಧ್ಯಕ್ಷರ ತಮ್ಮ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಒಂದು ಎಕೆರೆ ಜಮೀನಿನ ಭೂ ಪರಿವರ್ತನೆಗೆ ಅರ್ಜಿ ಸಲ್ಲಿಸಿದರೆ ಲಂಚದ ದುಡ್ಡು ಕೊಟ್ಟಿಲ್ಲ ಎಂದು ಕಡತವನ್ನು ಬಾಕಿ ಇಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
ಚಿತ್ರದುರ್ಗದ ಪತ್ರಿಕಾ ಭವನದಲ್ಲಿ ಮಾತನಾಡಿದ ಜಿ. ಪ್ರೇಮ್ ಕುಮಾರ್, "ನನ್ನ ತಂದೆ ಗೋಪಾಲಪ್ಪ ಎಂಬುವರ ಹೆಸರಿನಲ್ಲಿರುವ ಭೂಮಿಯ ಪರಿವರ್ತನೆಗೆ ಯಾವುದೇ ಅಡ್ಡಯಿಲ್ಲದ ಪ್ರಮಾಣ ಪತ್ರಗಳನ್ನು ಕಡತದೊಂದಿಗೆ ಸೇರಿಸಿ ಪೌರಾಯುಕ್ತರ ಮುಂದೆ ಇಟ್ಟಾಗ ಅವರು ಅದನ್ನು ಸಾಮಾನ್ಯ ಸಭೆಯಲ್ಲಿಗೆ ಚರ್ಚೆಗೆ ತಂದಿದ್ದಾರೆ. ಆದರೆ ಅಲ್ಲಿ ಸದಸ್ಯರೆಲ್ಲರೂ ಸೇರಿ ಒಂದಾಗಿ ಅರ್ಜಿಯನ್ನು ತಿರಸ್ಕರಿಸಿದ್ದಾರೆ" ಎಂದು ದೂರಿದರು.
"ಕಡತ ತಿರಸ್ಕರಿಸಿದ್ದು ಏಕೆ ಎಂದು ಕಾರಣ ಕೇಳಿದರೆ ನನಗೆ ತಿಳಿದುಬಂದ ಪ್ರಕಾರ ಅಲ್ಲಿ ಕೆಲ ಸದಸ್ಯರ ಗುಂಪು 40 ಸಾವಿರ ಲಂಚ ನೀಡಿದರೆ ಮಾತ್ರ ಸುಸೂತ್ರವಾಗಿ ಕೆಲಸ ಮಾಡಿಕೊಡುತ್ತಾರೆ ಇಲ್ಲವಾದರೆ ಇಲ್ಲ, ಯಾವುದಾದರೂ ತಾಂತ್ರಿಕ ಸಮಸ್ಯೆಯ ಕಾರಣವೊಡ್ಡಿ ಕಡತವನ್ನು ಹಾಗೆಯೇ ಬಾಕಿ ಇಡುತ್ತಾರೆ. ಇದು ನಗರಸಭೆಯ ಆಡಳಿತ ವೈಖರಿ ಮತ್ತು ಭ್ರಷ್ಟಾಚಾರ" ಎಂದು ಆರೋಪಿಸಿದರು.

"ನಗರಸಭೆಯಲ್ಲಿನ ಅವ್ಯವಹಾರದ ಬಗ್ಗೆ ದೂರನ್ನು ಪ್ರಾದೇಶಿಕ ಆಯುಕ್ತರ ಗಮನಕ್ಕೆ ತರಲಾಗಿತ್ತು. 14/7/2021ರಲ್ಲಿನಡೆದ ನಡಾವಳಿಯೆಲ್ಲವನ್ನೂ ರದ್ದು ಮಾಡಿ ಆಡಳಿತ ಮಂಡಳಿಯವರು ತಪ್ಪುಮಾಡಿದ್ದೀರಿ ನೀವು ಈ ರೀತಿ ಮಾಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ. ಇನ್ನು ಮುಂದೆ ಈ ರೀತಿ ತಪ್ಪುಮಾಡಿದರೆ ನಗರಸಭೆಯನ್ನು ಸೂಪರ್ ಸೀಡ್ ಮಾಡಲಾಗುತ್ತದೆ ಎಂದು ಹೇಳಿ ಕಳುಹಿಸಿದ್ದಾರೆ" ಎಂದರು.
"ಆದರೆ ನಂತರ ನಡೆದ ಸಾಮಾನ್ಯ ಸಭೆಯಲ್ಲಿಯೂ ಕೂಡ ಅದೇ ಚಾಳಿಯನ್ನು ಸದಸ್ಯ ಹಾಗೂ ಆಡಳಿತ ಮಂಡಳಿಯೂ ಮುಂದುವರೆಸಿದೆ. ನನ್ನ ಒಂದು ಎಕೆರೆ ಜಾಗಕ್ಕೆ ಲಂಚ ಜೊತೆಯಲ್ಲಿ ಅಜೆಂಡಾದಲ್ಲಿ ಇರದ ವಿಚಾರಗಳಿಗೆ ಅನುಮೋದನೆ ನೀಡಿದ್ದಾರೆ. ಆಡಳಿತ ಪಕ್ಷದ ಸದ್ಯರಾಗಿರುವ ಸುಮಿತ್ರ ಅವರ ಮೂರು ಎಕೆರೆ ಜಮೀನಿಗೆ ಅಕ್ರಮವಾಗಿ ಕಾನೂನು ಬಾಹಿರವಾಗಿ ಅನುಮೋದನೆ ನೀಡಿದ್ದಾರೆ" ಎಂದು ದೂರಿದರು.
"ಹಿರಿಯೂರಿನ ಪಾರ್ಕ್ಗೆ ಮಹಾನಗರ ಯೋಜನೆಯಲ್ಲಿ ಬಯಲು ಪ್ರದೇಶಕ್ಕೆ ಮೀಸಲಾದ ಜಾಗವನ್ನು ಯಾವುದೇ ಕಾರಣಕ್ಕೂ ಭೂ ಪರಿವರ್ತನೆ ಮಾಡಿಕೊಡಲು ಬರುವುದಿಲ್ಲ. ಆದರೂ ನಿಯಮಗಳನ್ನು ಗಾಳಿಗೆ ತೂರಿ ಸಭೆಯಲ್ಲಿ ಅಕ್ರಮಗಳು ನಡೆಯುತ್ತಿವೆ. ಆಡಳಿತ ವರ್ಗದವರು ಕಾನೂನು ಬಾಹಿರವಾಗಿ ಪಾರ್ಕ್, ಮಹಾ ಯೋಜನೆಯ ನಿವೇಶನಗಳನ್ನು ದುಡ್ಡು ತೆಗೆದುಕೊಂಡು ಮಾಡಿ ಕೊಡುತ್ತಿದ್ದಾರೆ. ದುಡ್ಡು ಕೊಟ್ಟರೆ ಏನು ಬೇಕಾದರೂ ಮಾಡುವ ಹಂತವನ್ನು ತಲುಪಿದ್ದಾರೆ. ವಿರೋಧ ಪಕ್ಷದ ಆಕ್ಷೇಪಣೆಯನ್ನು ಸೌಜನ್ಯಕ್ಕಾಗಿಯಾದರೂ ಕೇಳವುದಿಲ್ಲ, ಲೇಔಟ್ ವಿನ್ಯಾಸಗಳನ್ನು ಭೂ ಪರಿವರ್ತೆಯನ್ನು ಮಾಡಿಕೊಡಲು ನೇರವಾಗಿ ಹಣದ ಬೇಡಿಕೆಯನ್ನು ಇಡುತ್ತಾರೆ. ಇಂತಹ ಭ್ರಷ್ಟಾಚಾರವನ್ನು ಹಿರಿಯೂರಿನ ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ಹಾಗೂ ಕೇಂದ್ರ ಮಂತ್ರಿಯಾಗಿರುವ ಎ. ನಾರಾಯಣಸ್ವಾಮಿ ತಡೆಗಟ್ಟಬೇಕು" ಎಂದು ಆಗ್ರಹಿಸಿದರು.

ತಮ್ಮನ ಹಸ್ತಕ್ಷೇಪ ಇಲ್ಲ: "ನಾವು ಯಾವುದೇ ತಪ್ಪು ಮಾಡಿಲ್ಲ, ಯಾರಿಂದಲೂ ದುಡ್ಡು ಪಡೆದಿಲ್ಲ, ಯಾವ ಭ್ರಷ್ಟಾಚಾರ ಮಾಡಿಲ್ಲ, ಯಾರಿಂದಲೂ ಹಣ ಪಡೆಯುವುದು ಇಲ್ಲ" ಎಂದು ನಗರಸಭೆ ಅಧ್ಯಕ್ಷೆ ಶಂಶುನ್ನಿಸಾ ಮಾಜಿ ಸದಸ್ಯರ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.
"ಆರೋಪ ಸತ್ಯಕ್ಕೆ ದೂರವಾದದ್ದು, ಸುಳ್ಳು ಆರೋಪ ಮಾಡುತ್ತಿದ್ದಾರೆ ಮಾಡಲಿ ಬಿಡಿ. ನಾನು ಗೆದ್ದು ಅಧ್ಯಕ್ಷೆ ಆಗಿದ್ದೇನೆ. ನಾನು ಆಡಳಿತ ನಡೆಸುತ್ತೇನೆ. ನನ್ನ ಆಡಳಿತದಲ್ಲಿ ತಮ್ಮನ ಹಸ್ತಕ್ಷೇಪ ಇಲ್ಲ. ನನ್ನ ಆಡಳಿತದಲ್ಲಿ ತಮ್ಮ ಭಾಗಿಯಾಗಿಲ್ಲ. ನನ್ನ ಅಧಿಕಾರದ ವಿಚಾರದಲ್ಲಿ ನನಗೂ ಹಾಗೂ ತಮ್ಮನಿಗೂ ಸಂಬಂಧ ಇಲ್ಲ, ಇದು ರಾಜಕೀಯ ಪ್ರೇರಿತ ಆರೋಪವಾಗಿದೆ" ಎಂದರು.
"ನಾನು ಯಾರ ಕಡೆಯಿಂದಲೂ ಹಣ ಪಡೆದಿಲ್ಲ. ಒಂದು ನಾನು ವೇಳೆ ದುಡ್ಡು ಪಡೆದಿದ್ದಾರೆ ದಾಖಲೆ ತೋರಿಸಲಿ. ನಮಗೂ 21 ಜನ ಸದಸ್ಯರ ಟೀಂ ಇದೆ. ನಾವೆಲ್ಲರೂ ಕುಳಿತು ಚರ್ಚೆ ಮಾಡುತ್ತೇವೆ. ಪ್ರೇಮ್ ಕುಮಾರ್ ಜಾಗವನ್ನು ಭೂ ಪರಿವರ್ತನೆ ಮಾಡಿಕೊಡಲು ಸರಿಯಾದ ದಾಖಲೆಗಳನ್ನು ಒದಗಿಸಿಲ್ಲ. ಅವರ ಜಾಗ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಇರುವುದರಿಂದ ಎನ್ಓಸಿ ಪಡೆದಿರುವುದಿಲ್ಲ. ಹಾಗಾಗಿ ಅವರ ಭೂ ಪರಿವರ್ತನೆಯ ಕಡತ ತಡೆ ಹಿಡಿಯಲಾಗಿದೆ" ಎಂದು ಅಧ್ಯಕ್ಷೆ ಶಂಶುನ್ನಿಸಾ ಸ್ಪಷ್ಟಪಡಿಸಿದರು.












Click it and Unblock the Notifications