ನಾಯಕನಹಟ್ಟಿ: ಕೊನೆಗೂ ಬಿಜೆಪಿ ಸೇರಿದ ಕಾಂಗ್ರೆಸ್ ಮಾಜಿ ಶಾಸಕ ತಿಪ್ಪೇಸ್ವಾಮಿ
ಚಿತ್ರದುರ್ಗ, ಫೆಬ್ರವರಿ, 26: ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ನಾಯಕನಹಟ್ಟಿಯಲ್ಲಿ ರಾಜಕೀಯ ವಿಚಾರಕ್ಕೆ ಕಾಂಗ್ರೆಸ್, ಬಿಜೆಪಿ ನಡುವೆ ಗಲಾಟೆ ನಡೆದಿತ್ತು. ಇದೀಗ ಇದೇ ಸ್ಥಳದಲ್ಲೇ ಬದ್ಧವೈರಿಗಳಿಬ್ಬರೂ ಒಂದಾಗಿರುವ ಘಟನೆ ನಡೆದಿದೆ. ಹಾಗಾದರೆ ಒಂದಾಗಿರುವ ಆ ಬದ್ಧ ವೈರಿಗಳು ಯಾರು ಎಂದು ಇಲ್ಲಿ ತಿಳಿಯಿರಿ.
ಶ್ರೀರಾಮುಲು ವಿರುದ್ಧ ತೊಡೆ ತಟ್ಟಿ ನಿಂತಿದ್ದ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ನೇರ್ಲಗುಂಟೆ ತಿಪ್ಪೇಸ್ವಾಮಿ ಅವರು ಜಿಲ್ಲೆಯ ಹಿರಿಯ ಬಿಜೆಪಿ ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ ಸಮ್ಮುಖದಲ್ಲಿ ರಾಜಿಯಾಗಿದ್ದಾರೆ. ಹಾಗೆಯೇ ತಿಪ್ಪೇಸ್ವಾಮಿ ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಬಿಜೆಪಿ ಸೇರ್ಪಡೆಯಾಗಿದ್ದಾರೆ.

ಬಿಜೆಪಿ ಸೇರ್ಪಡೆಯಾದ "ಕೈ" ಮಾಜಿ ಶಾಸಕ
ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ನಾಯಕನಹಟ್ಟಿ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಮುಂಭಾಗ ಭೇಟಿಯಾಗಿ ಕೊರಳಿಗೆ ಪುಷ್ಪ ಮಾಲೆ ಧರಿಸಿಕೊಂಡು ಇಬ್ಬರು ನಾಯಕರು ಕೈ ಕೈ ಹಿಡಿದು ರಾಜೀಯಾದರು. ರಾಜಿ ಬಳಿಕ ನಾಯಕರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಒಳಗೆ ತೆರಳಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ನೂರಾರು ಬೆಂಬಲಿಗರು ಉಪಸ್ಥಿತರಿದ್ದರು.
ಕಾಂಗ್ರೆಸ್ ವಿರುದ್ಧ ಬಿ.ಸಿ. ಪಾಟೀಲ್ ವಾಗ್ದಾಳಿ
ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭರವಸೆ ನೀಡಿರುವ ಗೃಹಲಕ್ಷ್ಮೀ ಹಾಗೂ ಗೃಹಜ್ಯೋತಿ ಯೋಜನೆಯ ವಿರುದ್ಧ ಕೃಷಿ ಸಚಿವ ಬಿ.ಸಿ. ಪಾಟೀಲ್ ವ್ಯಂಗ್ಯವಾಡಿದರು.
ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳ ಸೇರಿ ಅನೇಕ ಕೆಲಸ ಹೇಳದೆ ಮಾಡಿದ್ದೇವೆ ಎಂದು ಇತ್ತೀಚೆಗಷ್ಟೇ ಹೇಳಿದ್ದರು.

"ಆಡದೆ ಕೊಡುವವನು ಉತ್ತಮ, ಆಡಿ ಕೊಡುವವ ಮಧ್ಯಮ, ಆಡಿಯೂ ಕೊಡದವ ಅಧಮ", ಕಾಂಗ್ರೆಸ್ ಪಕ್ಷದವರು ಅಧಮರು ಆಗುತ್ತಾರೆಂದು ವಚನದ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಟಾಂಗ್ ನೀಡಿದ್ದಾರೆ.
ಕಾಂಗ್ರೆಸ್ ನಾಯಕರು ಗ್ಯಾರಂಟಿ ಕಾರ್ಡ್ ಬಿಡುಗಡೆ ಮಾಡಿದ್ದಾರೆ. ಆದರೆ ಜನರಿಗೆ ಯೋಜನೆ ಕೊಡುವ ಯಾವುದೇ ಗ್ಯಾರಂಟಿ ಇಲ್ಲ. ಅಲ್ಲದೇ ಪುಕ್ಕಟೆ ಕಾರ್ಡ್ ಬಿಡುಗಡೆ ಮಾಡುವುದು ದೊಡ್ಡ ವಿಷಯ ಅಲ್ಲ, ನುಡಿದಂತೆ ನಡೆಯಬೇಕು. ಕಾಂಗ್ರೆಸ್ಸಿಗರಿಗೆ ನುಡಿದಂತೆ ನಡೆಯಲಾಗದು ಎಂದು ಕುಟುಕಿದರು.












Click it and Unblock the Notifications