ಹಿರಿಯೂರು ನಗರಕ್ಕೆ ಬೇಕೆ ಬೇಕಿದೆ ಪ್ರಯಾಣಿಕರ ತಂಗುದಾಣ
ಚಿತ್ರದುರ್ಗ, ಜೂನ್.28: ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಹಿರಿಯೂರು ವೇದಾವತಿ ಮತ್ತು ಸುವರ್ಣ ಮುಖಿ ನದಿಯ ತಪ್ಪಲಿನಲ್ಲಿದ್ದು, ರಾಜ್ಯದ ನಾಲ್ಕು ದಿಕ್ಕಿಗೆ ಹಿರಿಯೂರಿನಿಂದ ಪ್ರಯಾಣಿಸಬಹುದಾಗಿದೆ.
ಚಿತ್ರದುರ್ಗ, ದಾವಣಗೆರೆ, ತುಮಕೂರು, ಬೆಂಗಳೂರು, ಮೈಸೂರು, ಹಾಸನ, ಬಳ್ಳಾರಿ, ಹೊಸಪೇಟೆ, ಹೊಸದುರ್ಗ , ದಾವಣಗೆರೆ ಮತ್ತು ಬೆಂಗಳೂರು ಮಧ್ಯೆ ಎನ್. ಎಚ್ - 4 ರಸ್ತೆ, ಬೀದರ್ ಮತ್ತು ಶ್ರೀರಂಗಪಟ್ಟಣ ರಸ್ತೆ ಹಿರಿಯೂರು ನಗರದ ಮೂಲಕ ಹಾದು ಹೋಗಿದೆ.
ಹೀಗಾಗಿ ಇಲ್ಲಿ ಪ್ರತಿನಿತ್ಯ ಸಾವಿರಾರು ಪ್ರಯಾಣಿಕರು ಸಂಚರಿಸುತ್ತಾರೆ. ಈ ಹಿನ್ನೆಲೆಯಲ್ಲಿ ಹಿರಿಯೂರು ನಗರಕ್ಕೆ ಹೈಟೆಕ್ ತಂಗುದಾಣದ ಅವಶ್ಯಕತೆಯಿದೆ ಎನ್ನುವುದು ಪ್ರತಿಯೊಬ್ಬ ಪ್ರಯಾಣಿಕರ ಅಭಿಪ್ರಾಯ.

ಕೂರುವುದಕ್ಕೂ ಜಾಗವಿಲ್ಲ
ಪ್ರತಿನಿತ್ಯ ನಗರಕ್ಕೆ ಸಾವಿರಾರು ಮಂದಿ ಆಗಮಿಸುತ್ತಿದ್ದು, ಕೆಲಸ ಮುಗಿಸಿ ಒಂದಿಷ್ಟು ವಿಶ್ರಾಂತಿ ಪಡೆಯಲು ಅಥವಾ ತಮ್ಮ ಊರುಗಳಿಗೆ ತೆರಳಲು ಬಸ್ ಗೆ ಕಾದು ಕುಳಿತುಕೊಳ್ಳಬೇಕಾದ ಅನಿವಾರ್ಯ ಬರುತ್ತದೆ. ಆದರೆ ಇಲ್ಲಿ ಸ್ವಲ್ಪ ಸಮಯದವರೆಗೆ ಕುರೋಣವೆಂದರೂ ಒಂದೊಳ್ಳೆಯ ತಂಗುದಾಣವೇ ಇಲ್ಲ.
ಪ್ರಯಾಣಿಕರು ದಣಿವಾರಿಸಿಕೊಳ್ಳಲು ಅಥವಾ ಮಳೆ , ಗಾಳಿ, ಬಿಸಿಲು ಬಂತೆಂದರೆ ಅಂಗಡಿ ಮುಂಗಟ್ಟುಗಳು, ಹೋಟೆಲ್ ಗಳು, ಫುಟ್ ಪಾತ್ ಅಂಗಡಿಗಳ ಮೊರೆ ಹೋಗುವ ಸ್ಥಿತಿ ಉಂಟಾಗಿದೆ. ಪ್ರಯಾಣಿಕರ ಸಮಸ್ಯೆ ಕೇಳುವವರೇ ಇಲ್ಲದಂತಾಗಿದೆ.
ತಾತ್ಕಾಲಿಕವಾಗಿ ನಿರ್ಮಿಸಿರುವ ಹಿರಿಯೂರು ಖಾಸಗಿ ತಂಗುದಾಣದಲ್ಲಿ ಕೇವಲ ಬೆರೆಳಣಿಕೆಯಷ್ಟು ಪ್ರಯಾಣಿಕರಿಗೆ ಮಾತ್ರ ಸ್ಥಳವಕಾಶವಿದೆ.

ಆಸನಗಳ ವ್ಯವಸ್ಥೆಯಿಲ್ಲ
ಪ್ರಸ್ತುತ ಹಿರಿಯೂರಿನ ಮಧ್ಯ ಭಾಗದಲ್ಲಿರುವ ತಂಗುದಾಣ ಪಿಡಬ್ಲ್ಯೂಡಿ, ನಗರಸಭೆ, ನೆಹರು ಮಾರುಕಟ್ಟೆ, ಹುಳಿಯಾರು ಸರ್ಕಲ್ ಗೆ ಹೊಂದಿಕೊಂಡಿದ್ದು, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ಮೈಸೂರು ಹಾಗೂ ಹಿರಿಯೂರಿನ ಸುತ್ತಮುತ್ತ ಹಳ್ಳಿಗಳಿಗೆ ಹೋಗುವ ಪ್ರಯಾಣಿಕರು ಬಸ್ ಕಾಯುವಾಗ ನಿಂತುಕೊಳ್ಳಬೇಕಾದ ಅನಿವಾರ್ಯ ಎದುರಾಗುತ್ತದೆ. ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆಯೇ ಇಲ್ಲ.

ಟ್ರಾಫಿಕ್ ಕಿರಿ ಕಿರಿ ತಪ್ಪಿದ್ದಲ್ಲ
ಅಡ್ಡ ದಿಡ್ಡಿ ಚಲಿಸುವ ವಾಹನಗಳು, ನಿಯಮ ಪಾಲಿಸದೆ ಎಲ್ಲೆಂದರಲ್ಲಿ ಅಲ್ಲೇ ನಿಲ್ಲಿಸುವ ಬಸ್ಸುಗಳು, ಆಟೋಗಳು , ಟ್ಯಾಕ್ಸಿ , ಮತ್ತು ಫುಟ್ ಪಾತ್ ವ್ಯಾಪಾರಸ್ಥರ ತಳ್ಳ ಗಾಡಿಗಳು, ಬೀದರ್ ಮತ್ತು ಶ್ರೀರಂಗಪಟ್ಟಣ ರಸ್ತೆ ಅಗಲೀಕರಣ ಆಗದೇ ಇರುವುದರಿಂದ ಸಂಚಾರ ದಟ್ಟಣೆ ಉಂಟಾಗಿ ಪ್ರಯಾಣಿಕರು ಭಯಂಕರ ಕಿರಿ ಕಿರಿ ಅನುಭವಿಸುತ್ತಿದ್ದಾರೆ.
ರಸ್ತೆ ದಾಟುವಾಗ ಕೂಡ ತನ್ನ ಜೀವವನ್ನು ಕೈಯ್ಯಲ್ಲಿ ಹಿಡಿದು ನಡೆಯಬೇಕಾದ ಪರಿಸ್ಥಿತಿ ಉಂಟಾಗಿದೆ.

ಭರವಸೆ ನೀಡಿದ ನಗರಸಭೆ ಅಧ್ಯಕ್ಷ
ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಮುಂಭಾಗ ಮತ್ತು ನೆಹರು ಮಾರುಕಟ್ಟೆ ಮುಂಭಾಗದಲ್ಲಿ ಖಾಸಗಿ ಬಸ್ ನಿಲ್ಲಲು ಅನುವು ಮಾಡಿಕೊಡಲಾಗಿದೆ. ಪ್ರಯಾಣಿಕರಿಗೆ ಸೂಕ್ತವಾದ ತಂಗುದಾಣ ಅವಶ್ಯಕತೆಯಿದ್ದು, ಶಾಸಕರು ನಗರಸಭೆಗೆ ಆಗಮಿಸಿದಾಗ ಈ ಕುರಿತು ಚರ್ಚಿಸಿ, ಹಿರಿಯೂರಿನಲ್ಲಿ ಒಂದು ಸುಸಜ್ಜಿತವಾದ ತಂಗುದಾಣ ನಿರ್ಮಿಸಲು ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದರು.












Click it and Unblock the Notifications