ಕಾಂಗ್ರೆಸ್ ಬಿ. ಫಾರಂ ನನ್ನ ಜೇಬಿನಲ್ಲಿದೆ, ಕಾರ್ಯಕರ್ತರೇ ಹೆದರಬೇಡಿ, ಟಿಕೆಟ್ ನಂದೆ: ಡಿ. ಸುಧಾಕರ್
ಕಾಂಗ್ರೆಸ್ ಬಿ. ಫಾರಂ ನನ್ನ ಜೇಬಿನಲ್ಲಿದೆ ಎಂದು ಮಾಜಿ ಸಚಿವ ಡಿ. ಸುಧಾಕರ್ ಹೇಳಿದ್ದಾರೆ. ಇದೀಗ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದೆ.
ಚಿತ್ರದುರ್ಗ, ಮಾರ್ಚ್, 13: ಜಿಲ್ಲೆಯ ಹಿರಿಯೂರು ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಟಿಕೆಟ್ಗೆ ಪೈಪೋಟಿ ಶುರುವಾಗಿದೆ. ಈ ನಡುವೆಯೇ ಬಿ. ಫಾರಂ ನನ್ನ ಜೇಬಿನಲ್ಲಿದೆ, ಕಾರ್ಯಕರ್ತರೇ ಹೆದರಬೇಡಿ. ಟಿಕೆಟ್ ನಂದೇ ಎಂದು ಮಾಜಿ ಸಚಿವ ಡಿ.ಸುಧಾಕರ್ ಹೇಳಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.
ಹಿರಿಯೂರು ತಾಲೂಕಿನ ವದ್ದಿಕೆರೆ ಗ್ರಾಮದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಡಿ. ಸುಧಾಕರ್, "ಕಾಂಗ್ರೆಸ್ ಪಕ್ಷ ನನ್ನದು. ಕಾರ್ಯಕರ್ತರೇ ಹೆದರಬೇಡಿ. ವದ್ದಿಕೆರೆ ಸಿದ್ದಪ್ಪ, ಸೂರ್ಯ, ಚಂದ್ರ ಇರುವುದು ಎಷ್ಟು ಸತ್ಯವೋ, ಡಿ. ಸುಧಾಕರ್ಗೆ ಕಾಂಗ್ರೆಸ್ ಟಿಕೆಟ್ ಸಿಗುವುದು ಅಷ್ಟೇ ಸತ್ಯ ಎಂದಿದ್ದಾರೆ.
ಟಿಕೆಟ್ ಮತದಾರರ ಬಳಿ ಇದೆ. ಕಾಂಗ್ರೆಸ್ ಟಿಕೆಟ್ ಬಿ. ಫಾರಂ ಜನರ ಮಧ್ಯೆ ಇದೆ. ಹಾಗಾಗಿ ಹೆದರುವ ಪ್ರಶ್ನೆಯೇ ಇಲ್ಲ. ಎಲ್ಲಿ ಕೆಲಸ ಇದೆ, ಎಲ್ಲಿ ಸೇವೆ ಇದೆಯೋ ಅಲ್ಲಿ ಭಗವಂತ ಇದ್ದಾನೆ ಎಂದಿದ್ದಾರೆ. ಟಿಕೆಟ್ ಇಲ್ಲದಿದ್ದರೆ ಬೆಂಗಳೂರಿನಲ್ಲಿ ಕುಳಿತುಕೊಳ್ಳಬಹುದಿತ್ತು. ಟಿಕೆಟ್ ಜನರ ಮಧ್ಯೆ ಇರುವುದರಿಂದ ನಾನು ನಿಮ್ಮ ಜೊತೆಗಿದ್ದೇನೆ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಯಾರು ಚಿಂತಿಸುವ ಅಗತ್ಯವಿಲ್ಲ. ನಮ್ಮದು ಏನಿದ್ದರೂ ಗೆಲುವಿನ ಕಡೆ ಗಮನ ಕೊಡುವುದು ಅಷ್ಟೇ ಎಂದರು.

ಹಿರಿಯೂರು ಕ್ಷೇತ್ರದಲ್ಲೂ "ಕೈ" ಜಯ ಸಾಧಿಸಲಿದೆ
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ. ಹಿರಿಯೂರು ಕ್ಷೇತ್ರದಲ್ಲಿ ಸಹ ಕಾಂಗ್ರೆಸ್ ಜಯ ಸಾಧಿಸಲಿದೆ ಎಂದು ಸುಧಾಕರ್ ವಿಶ್ವಾಸ ವ್ಯಕ್ತಪಡಿಸಿದರು. ಕಳೆದ ಚುನಾವಣೆಯಲ್ಲಿ ಸೋಲು ಕಂಡಿದ್ದ ಡಿ. ಸುಧಾಕರ್ ಈ ಬಾರಿ ಕ್ಷೇತ್ರವನ್ನು ಹಿಡಿತಕ್ಕೆ ತೆಗೆದುಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಅದರಂತೆಯೇ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ ಮತಪ್ರಚಾರ ನಡೆಸುತ್ತಿದ್ದಾರೆ.

ತಮಗೆ ಬೆಂಬಲ ಕೋರುವುದಾಗಿ ಮನವಿ
ಈಗಾಗಲೇ ಒಂದೊಂದೇ ಸಮುದಾಯದವರ ಜೊತೆ ಸಭೆ ನಡೆಸಿ, ಬೆಂಬಲ ಕೋರಿದ್ದಾರೆ. ಇನ್ನು ಹಿರಿಯೂರು ನಗರದಲ್ಲಿ ಪ್ರತಿಯೊಂದು ವಾರ್ಡ್ಗಳ ಮನೆ ಮನೆ ಪ್ರಚಾರ ಕೈಗೊಂಡಿದ್ದಾರೆ. ಉಳಿದಂತೆ ಗ್ರಾಮೀಣ ಪ್ರದೇಶಗಳಲ್ಲೂ ಕೂಡ ಭರ್ಜರಿ ಪ್ರಚಾರವನ್ನು ಆರಂಭಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಕಟ್ಟಾ ಬೆಂಬಲಿಗ ಆಗಿರುವ ಸುಧಾಕರ್ ಅವರು, ಟಿಕೆಟ್ ನನ್ನದೇ ಎಂದು ಹೇಳುವ ಮೂಲಕ ಕಾರ್ಯಕರ್ತರಿಗೆ ಧೈರ್ಯ ತುಂಬಿ ಮುನ್ನುಗ್ಗುತ್ತಿದ್ದಾರೆ.

ಕಾಡುಗೊಲ್ಲರ ಹಟ್ಟಿಗಳಿಗೆ ಪದೇ ಪದೇ ಭೇಟಿ
ಹಿರಿಯೂರು ಕ್ಷೇತ್ರದಲ್ಲಿ ಅಭ್ಯರ್ಥಿ ಗೆಲುವಿಗೆ ಕಾಡುಗೊಲ್ಲ ಸಮುದಾಯದ ಮತಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಆದ್ದರಿಂದ ಸುಧಾಕರ್ ಕಾಡುಗೊಲ್ಲ ಸಮುದಾಯದ ಮೇಲೆ ಅಪಾರವಾದ ನಂಬಿಕೆ ಇಟ್ಟುಕೊಂಡಿದ್ದಾರೆ. ಕಾಡುಗೊಲ್ಲರ ಹಟ್ಟಿಗಳಿಗೆ ಭೇಟಿ ನೀಡಿ ಕಾರ್ಯಕರ್ತರನ್ನು ಪಕ್ಷಕ್ಕೆ ಬರಮಾಡಿಕೊಳ್ಳುತ್ತಿದ್ದಾರೆ. ಅಲ್ಲದೆ ಸುಧಾಕರ್ ಭೇಟಿ ನೀಡಿರುವ ಪ್ರತಿಯೊಂದು ಗ್ರಾಮಗಳಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ ಎನ್ನಲಾಗಿದೆ.

ಅಭಿವೃದ್ಧಿ ಕಾರ್ಯಗಳ ಮುಂದುವರಿಕೆ
2008ರಲ್ಲಿ ಅಮೋಘ ಗೆಲುವು ಹಿರಿಯೂರು ಕ್ಷೇತ್ರಕ್ಕೆ ಆಗಿತ್ತು. 2008ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಅಮೋಘ ಗೆಲುವು ಸಾಧಿಸಿ, ಮೊದಲ ಬಾರಿಗೆ ಸಮ್ಮಿಶ್ರ ಸರ್ಕಾರದಲ್ಲಿ ಸಮಾಜ ಕಲ್ಯಾಣ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ಬದಲಾದ ಬೆಳವಣಿಗೆಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಸಚಿವ ಸ್ಥಾನ ತಪ್ಪಿ ಹೋಯ್ತು ಎಂದು ಎದೆಗುಂದದೇ ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿ ಕಾರ್ಯಕಗಳನ್ನು ಮಾಡುವ ಮೂಲಕ ಗುರುತಿಸಿಕೊಂಡಿದ್ದರು.
ನಂತರ 2013ರಲ್ಲಿ ಮಾಜಿ ಸಚಿವ ಎ. ಕೃಷ್ಣಪ್ಪ ವಿರುದ್ಧ ಜಯಭೇರಿ ಬಾರಿಸಿ ಮರು ಆಯ್ಕೆಯಾದರು. ಕ್ಷೇತ್ರದಲ್ಲಿ ಶಿಕ್ಷಣ, ಆರೋಗ್ಯ, ಕೃಷಿಗೆ ಹೆಚ್ಚಿನ ಆದ್ಯತೆ ನೀಡಿದ್ದರು. ಕೋಟಿಗಟ್ಟಲೇ ಅನುದಾನ ತಂದು ಕ್ಷೇತ್ರವನ್ನು ಅಭಿವೃದ್ಧಿಯತ್ತ ಕೊಂಡೊಯ್ದಿದ್ದರು. 2016-2017ರಲ್ಲಿ ತಾಲೂಕಿನಲ್ಲಿ ಬರಗಾಲ ಬಂದಂತಹ ಸಂದರ್ಭದಲ್ಲಿ ಉಡುವಳ್ಳಿ ಕೆರೆಯಲ್ಲಿ ಮೇವು ಬೆಳೆದು ತಾಲೂಕಿನ ಪಶುಗಳಿಗೆ ಉಚಿತವಾಗಿ ವಿತರಿಸಿದ್ದರು. ಹೀಗೆ ತಮ್ಮ ಕ್ಷೇತ್ರದಲ್ಲಿ ಜನಮನ್ನಣೆಯನ್ನು ಪಡೆಯುತ್ತಾ ಬಂದಿದ್ದಾರೆ.












Click it and Unblock the Notifications