ವಿಡಿಯೋ: ಸರ್ಕಾರಿ ಶಾಲೆಯ ನೂತನ ಕಲಿಕಾ ಪ್ರಯೋಗ, ವರ್ಣಮಾಲೆಗೆ ಗಾದೆ ಮಾತು
ಚಿತ್ರದುರ್ಗ, ಡಿಸೆಂಬರ್ 28: ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವರೇ ಹೆಚ್ಚು, ಆದರೆ ಸರ್ಕಾರಿ ಶಾಲೆಗಳಲ್ಲಿನ ರಚನಾತ್ಮಕ ಶಿಕ್ಷಣ, ವಿದ್ಯಾರ್ಥಿಗಳಿಗೆ ಕಲಿಸುವ ಲೌಖಿಕ ಜ್ಞಾನ, ಖಾಸಗಿ ಶಾಲೆಗಳಲ್ಲಿ ಸಿಕ್ಕುವುದು ಅಪರೂಪ. ಇದಕ್ಕೆ ಉದಾಹರಣೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಸರ್ಕಾರಿ ಶಾಲೆ.
ಚಳ್ಳಕೆರೆ ತಾಲ್ಲೂಕಿನ ಕುದಾಪುರ ಲಂಬಾಣಿಹಟ್ಟಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ವರ್ಣಮಾಲೆಯ ಪ್ರತಿ ಅಕ್ಷರಕ್ಕೊಂದು ಗಾದೆ ಮಾತು ಹೇಳುತ್ತಾರೆ. ಗಾದೆ ಮಾತು ಹೇಳುವ ಅವರ ಕ್ರಿಯೆ ವರ್ಣಮಾಲೆ ಗ್ರಹಿಕೆ, ಭಾಷೆ ಬಳಕೆ, ಭಾಷಾ ಸಂಸ್ಕೃತಿ, ಗ್ರಾಮ್ಯ ಸಂಸ್ಕೃತಿ ಹಲವು ರಚಾನತ್ಮಕ ವಿಷಯಗಳನ್ನು ಒಳಗೊಂಡಿವೆ.
"ಅ - ಅತಿ ಆಸೆ ಗತಿಗೆಡಿಸಿತು", "ಆ- ಆಪತ್ತಿಗೆ ಆದವನೆ ನೆಂಟ", "ಟ- ಟಗರು ಕೊಬ್ಬಿದೆಂತಲ್ಲ ಕಟುಕನಿಗೆ ಲಾಭ" ಈಗೆ ಅಕ್ಷರಗಳಿಗೆ ಒಂದೊಂದು ಗಾದೆ ಮಾತನ್ನ ಹೇಳುತ್ತಾ ಹೋಗುತ್ತಾರೆ. ಇದೇ ಶಾಲೆಯ ವಿನಯ್ ಪ್ರಸಾದ್ ಎಂಬ ವಿದ್ಯಾರ್ಥಿ ಸರಗಾವಾಗಿ ಎಲ್ಲ ಅಕ್ಷರಗಳಿಗೂ ಒಂದೊಂದು ಗಾದೆ ಹೇಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಲಂಬಾಣಿಹಟ್ಟಿ ಸರ್ಕಾರಿ ಪ್ರಾಥಮಿಕ ಶಾಲೆ ಒಟ್ಟು 25 ವಿದ್ಯಾರ್ಥಿಗಳಿದ್ದು, ಮುಖ್ಯ ಶಿಕ್ಷಕ ಕೃಷ್ಣರೆಡ್ಡಿ ಹಾಗೂ ಸಹ ಶಿಕ್ಷಕಿ ಕೆ. ಸುಜತಾ ಮಕ್ಕಳಿಗೆ ಬೋಧಿಸುತ್ತಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಸಹ ಶಿಕ್ಷಕಿ ಸುಜಾತ, ಶಾಲೆಯ ಮಕ್ಕಳ ಕಲಿಕೆಯ ಸರ್ವತೋಮುಖ ಅಭಿವೃದ್ದಿಗೆ ನಾವೊಂದು ಹೊಸ ಪ್ರಯತ್ನ ಮಾಡಿದ್ದೇವೆ. ನಾವು ಪ್ರತಿವರ್ಷ ವರ್ಷಕ್ಕೊಂದು ಗಾದೆ ಮಾತು ಎಂಬ ವಿನೂತನ ಪ್ರಯೋಗ ಮಾಡುತ್ತೆವೆ, ಶಾಲೆಯ ಎಲ್ಲ ಮಕ್ಕಳು ಈ ರೀತಿ ಹೇಳುತ್ತಾರೆ ಎಂದು ತಿಳಿಸಿದರು.
ಗಾದೆ ಮಾತುಗಳು ನಿಧಾನಕ್ಕೆ ಮರೆಯಾಗುತ್ತಿರುವ ಸಮಯದಲ್ಲಿ ಈ ಶಾಲೆ ವಿದ್ಯಾರ್ಥಿಗಳು ವರ್ಣಮಾಲೆ ಅಕ್ಷರಗಳ ಮೂಲಕ ಗಾದೆ ಮಾತುಗಳನ್ನು ಉಳಿಸುವ, ಪಸರಿಸುವ ಕಾರ್ಯ ಮಾಡುತ್ತಿದ್ದಾರೆ.












Click it and Unblock the Notifications