ಚಿತ್ರದುರ್ಗ : ರೈಲು ನಿಲ್ದಾಣದಲ್ಲಿ ಆರ್ಪಿಎಫ್ ಅಧಿಕಾರಿ ಸಿಬಿಐ ಬಲೆಗೆ
ಚಿತ್ರದುರ್ಗ, ಆಗಸ್ಟ್ 28 : ರೈಲು ನಿಲ್ದಾಣದಲ್ಲಿ ಟೀ ವ್ಯಾಪಾರಿಯಿಂದ ಲಂಚ ಪಡೆಯುತ್ತಿದ್ದ ಆರ್ಪಿಎಫ್ ಅಧಿಕಾರಿಯನ್ನು ಸಿಬಿಐ ಬಂಧಿಸಿದೆ. ಪ್ರತಿ ತಿಂಗಳು 40 ಸಾವಿರ ರೂ. ಲಂಚ ನೀಡುವಂತೆ ಅಧಿಕಾರಿ ಕಿರುಕುಳ ನೀಡುತ್ತಿದ್ದ ಎಂಬ ಆರೋಪವಿದೆ.
ರೈಲ್ವೆ ಭದ್ರತಾ ದಳದ ಅಧಿಕಾರಿ ಗುರುಸ್ವಾಮಿ ಸಿಬಿಐ ಬಲೆಗೆ ಬಿದ್ದವರು. ರೈಲ್ವೆ ನಿಲ್ದಾಣದ ಕಚೇರಿಯಲ್ಲಿ ಟೀ ವ್ಯಾಪಾರಿ ಶಿವಗಂಗಮ್ಮ ಎಂಬುವವರಿಂದ ಲಂಚ ಸ್ವೀಕಾರ ಮಾಡುವಾಗ ಬುಧವಾರ ಸಿಬಿಐ ಬಂಧಿಸಿದೆ.
ಚಿತ್ರದುರ್ಗ ರೈಲು ನಿಲ್ದಾಣದಲ್ಲಿ ಟೀ ಮಾರುವ ಗುತ್ತಿಗೆಯನ್ನು ಶಿವಗಂಗಮ್ಮ ಪಡೆದಿದ್ದಾರೆ. ನಿಯಮ ಉಲ್ಲಂಘನೆ ಮಾಡಿದ್ದೀರಿ ಎಂದು ಗುರುಸ್ವಾಮಿ ಆರೋಪ ಮಾಡುತ್ತಿದ್ದು, ಪ್ರತಿ ತಿಂಗಳು ಲಂಚ ನೀಡುವಂತೆ ಪೀಡಿಸುತ್ತಿದ್ದ.
ಪ್ರತಿ ತಿಂಗಳು 40 ಸಾವಿರ ರೂ. ಲಂಚ ನೀಡಬೇಕು ಎಂದು ದೂರವಾಣಿ ಕರೆ ಮಾಡಿ ಗುರುಸ್ವಾಮಿ ಬೇಡಿಕೆ ಇಟ್ಟಿದ್ದ. ಈ ಕರೆಯನ್ನು ರೆಕಾರ್ಡ್ ಮಾಡಿಕೊಳ್ಳಲಾಗಿತ್ತು. ಶಿವಗಂಗಮ್ಮ ಸಹೋದರ ಈ ಕುರಿತು ಗುರುಸ್ವಾಮಿ ವಿರುದ್ಧ ದೂರು ನೀಡಿದ್ದರು.
ಬುಧವಾರ ಸಂಜೆ ಸಿಬಿಐ ಅಧಿಕಾರಿಗಳು ಲಂಚ ಸ್ವೀಕಾರ ಮಾಡುವಾಗಲೇ ದಾಳಿ ನಡೆಸಿ ಗುರುಸ್ವಾಮಿಯನ್ನು ಬಂಧಿಸಿದ್ದಾರೆ. ಹೆಚ್ಚಿನ ವಿಚಾರಣೆ ಮುಂದುವರೆದಿದೆ.