'ಜೆಡಿಎಸ್ ನಾಯಕರು ನನ್ನನ್ನು ಸಂಪರ್ಕಿಸಿಲ್ಲ'
ಜನಾರ್ದನಸ್ವಾಮಿ ಅವರು ಬಿಜೆಪಿ ತೊರೆದು ಜೆಡಿಎಸ್ ಸೇರುತ್ತಾರೆ. ಜೆಡಿಎಸ್ ಟಿಕೆಟ್ ಪಡೆದು ಮುಂದಿನ ಲೋಕಸಭೆ ಚುನಾವಣೆಯನ್ನು ಎದುರಿಸುತ್ತಾರೆ ಎಂಬ ಸುದ್ದಿ ನನ್ನ ಕಿವಿಗೂ ಬಿದ್ದಿದೆ. ಆದರೆ, ನಾನು ಬಿಜೆಪಿ ತೊರೆದು ಜೆಡಿಎಸ್ ಸೇರುವ ವದಂತಿ ಸತ್ಯಕ್ಕೆ ದೂರವಾದ ಮಾತು ಎಂದು ಚಿತ್ರದುರ್ಗದ ಬಿಜೆಪಿ ಸಂಸದ ಜನಾರ್ದನ ಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ನಾನು ಬಿಜೆಪಿ ಬಿಡುವಂಥ ಪರಿಸ್ಥಿತಿ ಏನು ನಿರ್ಮಾಣವಾಗಿಲ್ಲ. ನನಗೆ ಪಕ್ಷದಿಂದ ಯಾವುದೇ ರೀತಿಯಿಂದಲೂ ಅಸಮಾಧಾನವೇನೂ ಇಲ್ಲ ಎಂದು ಹೇಳಿದ್ದಾರೆ. ಲೋಕಸಭಾ ಸದಸ್ಯನಾಗಿ ಕ್ಷೇತ್ರದ ಅಭಿವೃದ್ಧಿಗೆ ಶಕ್ತಿಮೀರಿ ಶ್ರಮಿಸಿದ್ದೇನೆ ಎಂದು ಜನಾರ್ದನ ಸ್ವಾಮಿ ಹೇಳಿದ್ದಾರೆ.
ಬಿಜೆಪಿ ಟಿಕೆಟ್ ಯಾರಿಗೆ? : ಮುಂಬರುವ ಚುನಾವಣೆಯಲ್ಲಿ ಯಾರಿಗೆ ಟಿಕೆಟ್ ನೀಡಬೇಕು ಎಂಬುದನ್ನು ಪಕ್ಷದ ವರಿಷ್ಠರು ನಿರ್ಧರಿಸಲಿದ್ದಾರೆ. ಪಕ್ಷ ನೀಡುವ ಯಾವುದೇ ಹುದ್ದೆಯನ್ನು ನಿಭಾಯಿಸಲು ನಾನು ಸಿದ್ಧ. ಜೆಡಿಎಸ್ ನಾಯಕರು ಪಕ್ಷ ಸೇರುವ ವಿಚಾರದಲ್ಲಿ ಇದುವರೆವಿಗೂ ನನ್ನನ್ನು ಸಂಪರ್ಕಿಸಿಲ್ಲ. ಈ ರೀತಿಯ ಸುದ್ದಿಯನ್ನು ನನ್ನ ಕ್ಷೇತ್ರ ಜನತೆ ನಂಬುವುದಿಲ್ಲ ಎಂಬ ವಿಶ್ವಾಸವಿದೆ ಎಂದಿದ್ದಾರೆ.
ಅಮೆರಿಕದ ಪ್ರತಿಷ್ಠಿತ ಸಾಫ್ಟ್ ವೇರ್ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿದ್ದು, ತಿಂಗಳಿಗೆ ಲಕ್ಷಾಂತರ ರುಪಾಯಿ ಸಂಬಳದ ಕೆಲಸವನ್ನು ಬಿಟ್ಹಾಕಿ ಜನಸೇವೆ ಮಾಡಲು ಭಾರತಕ್ಕೆ ಬಂದ ಜನಾರ್ದನ ಸ್ವಾಮಿ ಅವರು ಬಿಜೆಪಿ ಟಿಕೆಟ್ ಪಡೆದು ಚಿತ್ರದುರ್ಗ ಲೋಕಸಭೆ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದಿದ್ದರು.
ಹುಟ್ಟೂರಿನ ಅಭಿವೃದ್ಧಿಗೆ ಏನಾದರೂ ಸೇವೆ ಮಾಡಬೇಕು ಎಂಬ ಏಕೈಕ ಹಂಬಲದೊಂದಿಗೆ ಚಿತ್ರದುರ್ಗದ ಕಳ್ಳಹಟ್ಟಿ ಗ್ರಾಮದ ಜನಾರ್ದನಸ್ವಾಮಿ ಅವರು ಸಮಗ್ರ ಗ್ರಾಮೀಣಾಭಿವೃದ್ಧಿಗೆ ಮತ್ತು ಶಿಕ್ಷಣಾಭಿವೃದ್ಧಿಗೆ ಹೊಸ ಕಾಯಕಲ್ಪ ನೀಡಬೇಕು ಎಂದು ದೃಢ ನಿಲುವು ಹೊಂದಿದ್ದಾರೆ. ಆದರೆ, ಎಲ್ಲವೂ ರಾತ್ರಿ ಕಳೆದು ಬೆಳಗ್ಗೆ ಆಗುವುದರಲ್ಲಿ ಸಾಧ್ಯವಿಲ್ಲ ಎಂಬ ಅರಿವು ಹೊಂದಿದ್ದಾರೆ.