Bengaluru Airport: ಹಿರಿಯೂರು-ಚಿತ್ರದುರ್ಗ ಸಮೀಪದಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಪ್ಲಾನ್?
ಚಿತ್ರದುರ್ಗ, ಡಿಸೆಂಬರ್, 04: ಮಧ್ಯ ಕರ್ನಾಟಕದ ಬಯಲು ಸೀಮೆ ಎಂದೇ ಕರೆಯಲ್ಪಡುವ ಕೋಟೆ ನಾಡು ಚಿತ್ರದುರ್ಗ ಜಿಲ್ಲೆ ಇದೀಗ ಹಂತ-ಹಂತವಾಗಿ ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿದೆ. ಇದರ ಮಧ್ಯೆ ಹಿರಿಯೂರು ಅಥವಾ ಚಿತ್ರದುರ್ಗ ಆಸುಪಾಸಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸರ್ಕಾರ ಚಿಂತನೆ ನಡೆಸುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ.
ಅಂದಹಾಗೆ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಜಲಾಶಯಕ್ಕೆ ಭದ್ರಾ ನೀರು ಹರಿಸುವ ಯೋಜನೆ, ಚಳ್ಳಕೆರೆಯ ನಾಯಕನಹಟ್ಟಿ ಬಳಿ ಡಿಆರ್ಡಿಓ ಪ್ರಾಜೆಕ್ಟ್, ಚಿತ್ರದುರ್ಗ ಮೂಲಕ (ತುಮಕೂರು- ಚಿತ್ರದುರ್ಗ- ದಾವಣಗೆರೆ) ನೇರ ರೈಲು ಸಂಪರ್ಕ ಯೋಜನೆ, ಚಿತ್ರದುರ್ಗದಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣ ಮಂಜೂರು ಸೇರಿದಂತೆ ಜಿಲ್ಲೆ ಹಂತ ಹಂತವಾಗಿ ಅಭಿವೃದ್ಧಿಯ ವೇಗವನ್ನು ಹೆಚ್ಚಿಸಿಕೊಳ್ಳುವತ್ತ ಸಾಗುತ್ತಿದೆ.

ಇದರ ಮಧ್ಯೆ ಈಗಾಗಲೇ ತುಮಕೂರು- ಚಿತ್ರದುರ್ಗ- ದಾವಣಗೆರೆ ನಡುವೆ ನೇರ ರೈಲು ಕಾಮಗಾರಿ ಚುರುಕು ಪಡೆದುಕೊಂಡಿದ್ದು, ಒಂದೆರಡು ವರ್ಷಗಳಲ್ಲಿ ಪ್ರಯಾಣಿಕರಿಗೆ ರೈಲು ಸೇವೆ ಸಂಚಾರ ಸಿಗಲಿದೆ. ಇದರ ಮಧ್ಯೆ ಲಡ್ಡು ಬಂದು ಬಾಯಿಗೆ ಬಿತ್ತು ಎಂಬ ಗಾದೆ ಮಾತಿನಂತೆ ಚಿತ್ರದುರ್ಗ ಅಥವಾ ಹಿರಿಯೂರು ಆಸುಪಾಸಿನಲ್ಲಿ ವಿಮಾನ ನಿಲ್ದಾಣ ಆರಂಭಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚಿಂತನೆಗಳು ನಡೆಯುತ್ತಿವೆ.
ಸಂಭಾವ್ಯ ಬೆಂಗಳೂರು ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ತುಮಕೂರು-ಚಿತ್ರದುರ್ಗ ನಡುವೆ ಸ್ಥಳ ಹುಡುಕಾಟ ಕೆಲಸಗಳು ಪ್ರಾರಂಭವಾಗಿವೆ ಎಂಬ ಮಾಹಿತಿ ಹರಿದಾಡುತ್ತಿದೆ. ಹೊಸ ವಿಮಾನ ನಿಲ್ದಾಣಕ್ಕೆ ಸೂಕ್ತ ಸ್ಥಳ ಗುರುತಿಸುವ ಪ್ರಕ್ರಿಯೆ ಆರಂಭಿಕ ಹಂತದಲ್ಲಿದೆ ಎಂದು ಹೇಳಲಾಗುತ್ತಿದೆ.
ಒಂದೇ ನಗರದಲ್ಲಿ ಅನೇಕ ವಿಮಾನ ನಿಲ್ದಾಣಗಳನ್ನು ನಿರ್ಮಿಸಿರುವ ಮುಂಬೈ ಹಾಗೂ ಗೋವಾದಂತಹ ನಗರಗಳನ್ನು ನಿದರ್ಶನವಾಗಿ ತೆಗೆದುಕೊಳ್ಳಬಹುದು. ಆದರೆ, ಪ್ರಸ್ತುತ ವಿಮಾನ ನಿಲ್ದಾಣವಿರುವ 150 ಕಿಲೋ ಮೀಟರ್ ಅಂತರದಲ್ಲಿ ಏರ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಮಾರ್ಗಸೂಚಿಗಳ ಪ್ರಕಾರ, ಯಾವುದೇ ಗ್ರೀನ್ಫೀಲ್ಡ್ ವಿಮಾನ ನಿಲ್ದಾಣ ಸ್ಥಾಪನೆಯನ್ನು ಅನುಮತಿಸಲಾಗುವುದಿಲ್ಲ.
ಆಗೊಮ್ಮೆ, ಆ ಅಂತರದೊಳಗೆ ಎರಡನೇ ವಿಮಾನ ನಿಲ್ದಾಣವನ್ನು ನಿರ್ಮಿಸಿದರೆ, ಎರಡು ವಿಮಾನ ನಿಲ್ದಾಣಗಳ ಮಧ್ಯೆ ಏರ್ ಟ್ರಾಫಿಕ್ ಸೇರಿದಂತೆ ವಿವಿಧ ತೊಂದರೆಗಳು ಬರುತ್ತಿವೆ. ಇಂತಹ ಸಮಸ್ಯೆಯನ್ನು ನಿಭಾಯಿಸಿ, ಬೆಂಗಳೂರು ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗುವ ನಿಟ್ಟಿನಲ್ಲಿ ಹೊಸ ಏರ್ಪೋರ್ಟ್ ನಿರ್ಮಾಣಕ್ಕೆ ತುಮಕೂರು - ಚಿತ್ರದುರ್ಗ ನಡುವಿನ ಮಾರ್ಗವೇ ಸೂಕ್ತ ಸ್ಥಳವಾಗಿದೆ ಎಂದು ತಿಳಿದುಬಂದಿದೆ.
ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್ (ಬಿಐಎಎಲ್)ನೊಂದಿಗೆ 60 ವರ್ಷಗಳ ಗುತ್ತಿಗೆ ವಿಸ್ತರಣೆ ಚರ್ಚೆಯ ಸಂದರ್ಭದಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಾಣ ಸಂಬಂಧ ನಿರ್ಧಾರವನ್ನು ತಿಳಿಸಲಾಗಿದೆ ಎಂದು ತಿಳಿದುಬಂದಿದೆ. ಸರ್ಕಾರದ ಪ್ರಸ್ತಾವನೆಗೆ ಬಿಐಎಎಲ್ ಕೂಡ ಆಸಕ್ತಿ ತೋರಿಸಿದೆ ಎಂಬುದು ಗೊತ್ತಾಗಿದೆ.
ಎಚ್ಎಎಲ್ನಲ್ಲಿ ಹಳೆಯ ವಿಮಾನ ನಿಲ್ದಾಣವನ್ನು ಪುನರಾರಂಭಿಸುವುದಕ್ಕೆ ಆರಂಭದಲ್ಲಿ ಪರಿಗಣಿಸಲಾಗಿತ್ತು. ಆದರೆ, ನಾನಾ ಕಾರಣಗಳಿಗೆ ಅದನ್ನು ಕೈ ಬಿಡಲಾಯಿತು. ಎರಡನೇ ವಿಮಾನ ನಿಲ್ದಾಣ ನಿರ್ಮಾಣ ಮಾಡಬೇಕಾದರೆ, ರಾಜ್ಯ ಸರ್ಕಾರ ಹಲವು ಸವಾಲುಗಳನ್ನು ಎದುರಿಸಬೇಕಾಗಿದೆ. ನಿಲ್ದಾಣಕ್ಕೆ ಸೂಕ್ತ ಸ್ಥಳವನ್ನು ಹುಡುಕಾಟ ನಡೆಸಬೇಕು. ಒಂದೊಮ್ಮೆ ಕೃಷಿ ಜಮೀನು ಇದ್ದರೆ ಅವುಗಳನ್ನು ಸ್ವಾಧೀನಪಡಿಸಿಕೊಳ್ಳಬೇಕು.
ಇತ್ತೀಚೆಗೆ, ಸ್ಟಾರ್ ಏರ್ ಶಿವಮೊಗ್ಗದ ಕುವೆಂಪು ವಿಮಾನ ನಿಲ್ದಾಣದಿಂದ ಹೈದರಾಬಾದ್, ತಿರುಪತಿ ಮತ್ತು ಗೋವಾಕ್ಕೆ ವಿಮಾನ ಸೇವೆಯನ್ನು ಆರಂಭಿಸಿದೆ. ಹೊಸ ಎಂಬ್ರಾರ್ ಇ175 ವಿಮಾನದೊಂದಿಗೆ ಈ ಸೇವೆಯನ್ನು ಒದಗಿಸುತ್ತಿದೆ. ಈ ವಿಮಾನ ಎರಡು ದರ್ಜೆಯ ಆಸನ ವ್ಯವಸ್ಥೆಯನ್ನು ಹೊಂದಿದೆ. ಅವುಗಳೆಂದರೆ, 12 - ಲಗ್ಸುರಿ ಬ್ಯುಸಿನೆಸ್ ಕ್ಲಾಸ್, 64 - ಎಕಾನಾಮಿಕ್ ಕ್ಲಾಸ್. ಇವು ಹೆಚ್ಚು ವಿಶಾಲವಾಗಿದ್ದು, ವಿಮಾನದಲ್ಲಿ ಊಟದ ವ್ಯವಸ್ಥೆಯೂ ಇದೆ.
ಶಿವಮೊಗ್ಗದಿಂದ ವಿವಿಧ ಸ್ಥಳಗಳಿಗೆ ವಿಮಾನಯಾನ ಸೇವೆ ಆರಂಭ ಆಗುವುದರಿಂದ ಉತ್ತರ ಕನ್ನಡ, ಚಿತ್ರದುರ್ಗ, ದಾವಣಗೆರೆ ಹಾಗೂ ಹಾವೇರಿ ಜಿಲ್ಲೆಗಳ ಜನರಿಗೆ ಭಾರೀ ಅನುಕೂಲ ಆಗುತ್ತದೆ. ಸೋಗಾನೆಯಲ್ಲಿರುವ ಕುವೆಂಪು ವಿಮಾನ ನಿಲ್ದಾಣ ಶಿವಮೊಗ್ಗ ನಗರದಿಂದ 8.8 ಕಿ.ಮೀ. ಹಾಗೂ ಭದ್ರಾವತಿಯಿಂದ 8.2 ಕಿ.ಮೀ ದೂರದಲ್ಲಿದೆ. ಬೋಯಿಂಗ್ 737 ಮತ್ತು ಏರ್ಬಸ್ A320 ನಂತಹ ದೊಡ್ಡ ವಿಮಾನಗಳನ್ನು ಇಲ್ಲಿ ಲ್ಯಾಂಡ್ ಮಾಡಬಹುದು.
ಒಟ್ಟಾರೆಯಾಗಿ ಕೋಟೆ ನಾಡು ಚಿತ್ರದುರ್ಗ ಜಿಲ್ಲೆ ಹಿಂದುಳಿದ ಜಿಲ್ಲೆಯಾಗಿ ಹಣೆಪಟ್ಟಿ ಕಟ್ಟಿಕೊಂಡಿತ್ತು. ಇದೀಗ ಜಿಲ್ಲೆ ಹಂತ-ಹಂತವಾಗಿ ಅಭಿವೃದ್ಧಿಯ ವೇಗವನ್ನು ಹೆಚ್ಚಿಸುತ್ತಾ ಮುನ್ನುಗ್ಗುತ್ತಿದೆ ಎಂದರೆ ತಪ್ಪಾಗಲಾರದು.












Click it and Unblock the Notifications