'ತೋಟಯ್ಯ' ಎಂದು ಹೆಸರಿಟ್ಟುಕೊಂಡು ತೋಟಗಾರಿಕೆ ಇಲಾಖೆಯಲ್ಲೇ ಲಂಚ: ಎಸಿಬಿ ಬಲೆಗೆ
ಚಿತ್ರದುರ್ಗ, ಆಗಸ್ಟ್ 4 : ಕೋಟೆ ನಾಡು ಚಿತ್ರದುರ್ಗದಲ್ಲಿ ಗುರುವಾರ ಚಿತ್ರದುರ್ಗದ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದಿದ್ದಾರೆ.
ಸಹಾಯಕ ನಿರ್ದೇಶಕ ಎ.ಡಿ. ತೋಟಯ್ಯ ಎಸಿಬಿ ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿಯಾಗಿದ್ದಾರೆ. ಕೃಷಿ ಹೊಂಡ ಕಾಮಗಾರಿ ಸಹಾಯಧನ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ತೋಟಗಾರಿಕೆ ಅಧಿಕಾರಿ 2.80 ಲಕ್ಷ ರೂ ಮೊತ್ತದ ಚೆಕ್ ನೀಡಲು ಶೇ. 50% ಲಂಚಕ್ಕೆ ಡಿಮ್ಯಾಂಡ್ ಮಾಡಿ, ಲಂಚ ಸ್ವೀಕರಿಸುವ ವೇಳೆ ಎಸಿಬಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ. ತೋಟಯ್ಯರನ್ನ ವಶಕ್ಕೆ ಪಡೆದಿರುವ ಎಸಿಬಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
ತೋಟಯ್ಯ ಅರಬಗಟ್ಟ ಗ್ರಾಮದ ಕೃಷ್ಣ ನಾಯ್ಕ್ ಎಂಬುವವರಿಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಕೃಷ್ಣಾನಾಯ್ಕ್ ಈ ವಿಚಾರವಾಗಿ ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದರು. ದೂರು ಆಧರಿಸಿ ಚಿತ್ರದುರ್ಗದ ಎಸಿಬಿ DYSP ಉಮೇಶ್ ಈಶ್ವರ್ ನಾಯ್ಕ್, CPI ಪ್ರಭು ಬಿ.ಸೂರಿನ್, ಉಮೇಶ್ ನೇತೃತ್ವದಲ್ಲಿ ದಾಳಿ ನಡೆಸಿದ್ದರು.

ಕಾಂಗ್ರೆಸ್ ಪ್ರತಿಭಟನೆ:
ಮುರುಘಾ ಮಠಕ್ಕೆ ರಾಹುಲ್ ಗಾಂಧಿ ಭೇಟಿ ನೀಡಿದ್ದ ಸಂದರ್ಭದಲ್ಲಿ ಪಾಸ್ ನೀಡುವ ವಿಚಾರದಲ್ಲಿ ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ್ದಾರೆ.
ನಿಷ್ಠಾವಂತ ಕಾರ್ಯಕರ್ತರಿಗೆ ಪಾಸ್ ನೀಡದೇ ತಾರತಮ್ಯ ಮಾಡಲಾಗಿದೆ ಎಂದು ರಾಜ್ಯ ನಾಯಕತು ಹಾಗೂ ಜಿಲ್ಲಾ ಘಟಕದ ಅಧ್ಯಕ್ಷ-ಕಾರ್ಯಾಧ್ಯಕ್ಷರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ತಾಜ್ಪೀರ್ ಹಾಗೂ ಕಾರ್ಯಾಧ್ಯಕ್ಷ ಕೆ.ಎಂ.ಹಾಲಸ್ವಾಮಿ ಅವರು ಸ್ಥಳಕ್ಕೆ ಧಾವಿಸಿ ಕಾರ್ಯಕರ್ತರ ಮನವೊಲಿಸಲು ಪ್ರಯತ್ನಿಸಿದರು. ಕಚೇರಿಯ ಬೀಗ ತೆರೆದು ಚರ್ಚೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವ ಇಂಗಿತ ವ್ಯಕ್ತಪಡಿಸಿದರು. ಇದಕ್ಕೆ ಕಾರ್ಯಕರ್ತರು ಒಪ್ಪದೇ ಇದ್ದಾಗ ವಾಗ್ವಾದ ನಡೆಯಿತು.












Click it and Unblock the Notifications