ವಿವಿ ಸಾಗರದಿಂದ ನಾಲೆಗಳಿಗೆ ನೀರು ಬಿಡಲು ಕ್ರಮ: ಶಾಸಕಿ ಪೂರ್ಣಿಮಾ
ಚಿತ್ರದುರ್ಗ, ಫೆಬ್ರವರಿ 26: ರೈತರ ಹೋರಾಟಗಳಿಗೆ ನನಗೆ ಬದ್ಧತೆ ಮತ್ತು ಕಾಳಜಿ ಇದೆ, ನಾನು ರೈತರ ಕೆಲಸದ ಬಗ್ಗೆ ಎಂದಿಗೂ ನಿರ್ಲಕ್ಷ್ಯ ತೋರುವುದಿಲ್ಲ ಎಂದು ಹಿರಿಯೂರು ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಹೇಳಿದರು.
ತಾಲೂಕು ಕಛೇರಿ ಮುಂಭಾಗದಲ್ಲಿ ವಾಣಿ ವಿಲಾಸ ಜಲಾಶಯದಿಂದ ಅಚ್ಚುಕಟ್ಟು ಪ್ರದೇಶಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ರೈತರಿಂದ ನಡೆಸುತ್ತಿರುವ ಎರಡನೇ ದಿನ ಹೋರಾಟ ಮುಂದುವರಿದ ಸ್ಥಳಕ್ಕೆ ಭೇಟಿ ನೀಡಿದ ಶಾಸಕಿ, ಪ್ರತಿಭಟನಾಗಾರರನ್ನು ಮನವೊಲಿಸಿ ಪ್ರತಿಭಟನೆಯನ್ನು ಹಿಂಪಡೆಯುವಂತೆ ಮಾಡಿದರು.
ರೈತರ ಕೂಗಿಗೆ ನಾನು ಸದಾ ಬದ್ಧನಾಗಿರುತ್ತೇನೆ, ಸಮ್ಮಿಶ್ರ ಸರ್ಕಾರ ಇದ್ದಾಗ ಭದ್ರಾ ಮೇಲ್ದಂಡೆ ಬಗ್ಗೆ ರೈತರ ನಿಯೋಗದೊಂದಿಗೆ ಅಧಿಕಾರಿಗಳು ಮತ್ತು ಮುಖ್ಯಮಂತ್ರಿ ಭೇಟಿ ಮಾಡಿ ಭದ್ರಾದಿಂದ ವಿವಿ ಸಾಗರಕ್ಕೆ ನೀರು ಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದರು. ನಿಮಗೆ ವಿವಿ ಸಾಗರದಿಂದ ನಾಲೆಗಳಿಗೆ ನೀರು ಕೊಡಬಾರದು ಎನ್ನುವ ಉದ್ದೇಶ ನನಗಿಲ್ಲ ಎಂದರು.

ಆರೋಗ್ಯ ಸಚಿವ ಬಿ.ಶ್ರೀರಾಮುಲು ನವರು ಜಿಲ್ಲಾಧಿಕಾರಿ ಜೊತೆ ದೂರವಾಣಿ ಮೂಲಕ ಮಾತನಾಡಿದ್ದು, ನೀರು ಹರಿಸುವಂತೆ ಸೂಚಿಸಿದ್ದಾರೆ. ನಾನು ಕೂಡ ಜಿಲ್ಲಾಧಿಕಾರಿ ಜೊತೆ ಮಾತುಕತೆ ನಡೆಸಿದ್ದೇನೆ ಎಂದು ತಿಳಿಸಿದರು. ಇಂದು ಸಂಜೆ ಜಿಲ್ಲಾಧಿಕಾರಿಗಳ ಜೊತೆ ಸಭೆಯಲ್ಲಿ ಚರ್ಚಿಸಿ ನೀರು ಹರಿಸಲು ದಿನಾಂಕ ನಿಗದಿಯನ್ನು ಸಂಜೆಯೊಳಗೆ ಮಾಡಲಾಗುವುದು ಎಂದು ಹೇಳಿದರು.
ಒಂದು ವೇಳೆ ದಿನಾಂಕ ನಿಗದಿ ಆಗದಿದ್ದರೆ ನಾನು ಕೂಡ ನಿಮ್ಮ ಜೊತೆಗೆ ಪ್ರತಿಭಟನೆ ಕೂರುತ್ತೆನೆಂದು ಶಾಸಕರು ರೈತರಿಗೆ ಭರವಸೆ ನೀಡಿದರು. ಹಾಗಾಗಿ ಹೋರಾಟ ಹಿಂಪಡೆಯಿರಿ ಎಂದಾಗ, ಇದಕ್ಕೆ ರೈತರು ಆಕ್ಷೇಪ ವ್ಯಕ್ತಪಡಿಸಿದರು. ಸಂಜೆಯೊಳಗೆ ನೀರು ಹರಿಸಲು ದಿನಾಂಕ ನಿಗದಿ, ಇಲ್ಲವಾದರೆ ಶುಕ್ರವಾರ ಹಿರಿಯೂರು ಬಂದ್ ಮಾಡಲಾಗುವುದು ಎಂದು ರೈತರು ಪಟ್ಟುಹಿಡಿದರು. ಸಂಜೆಯೊಳಗೆ ದಿನಾಂಕ ನಿಗದಿ ಮಾಡಲಾಗುವುದು ಎಂದಾಗ ಶಾಸಕರ ಭರವಸೆಯೊಂದಿಗೆ ರೈತರು ಪ್ರತಿಭಟನೆ ಹಿಂಪಡೆದರು.

ಪ್ರತಿಭಟನಾ ರೈತರು ಜಿಲ್ಲಾಧಿಕಾರಿ ರೈತರ ವಿರೋಧಿಯಾಗಿದ್ದರೆ. ರೈತರ ಬಗ್ಗೆ ಎಳ್ಳಷ್ಟೂ ಕಾಳಜಿ ಅವರಿಗಿಲ್ಲ, ನಮ್ಮ ಜಿಲ್ಲೆಯಲ್ಲಿ ಅವರು ಕೆಲಸ ಮಾಡಲು ಯೋಗ್ಯರಿಲ್ಲ ಎಂದು ರೈತರು ಆರೋಪಿಸಿದರು. ಬರದ ನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಅಂತಹ ರೈತರ ವಿರೋಧಿ ಜಿಲ್ಲಾಧಿಕಾರಿ ನಮಗೆ ಬೇಡ, ಅವರನ್ನು ಕೂಡಲೇ ವರ್ಗಾವಣೆ ಮಾಡಿ, ಬೆಂಗಳೂರಿನಲ್ಲಿ ಯಾವುದಾದರೂ ಇಲಾಖೆಗೆ ಸೇರಿಸಿಕೊಳ್ಳಿ ನಮಗೆ ಅವರು ಬೇಡ. ರೈತರ ಬಗ್ಗೆ ಕಾಳಜಿ ಇರುವ ಜಿಲ್ಲಾಧಿಕಾರಿ ಬೇಕು ಎಂದು ಶಾಸಕಿಗೆ ಮನವಿ ಮಾಡಿದರು
ನೀರಾವರಿ ಇಲಾಖೆಯಲ್ಲಿರುವ ಲೋಪದೋಷಗಳನ್ನು ಸರಿಪಡಿಸಬೇಕು, ಅಲ್ಲಿರುವ ಅಧಿಕಾರಿಗಳಿಗೆ ನೀರಾವರಿ ಬಗ್ಗೆ ಏನು ಗೊತ್ತಿಲ್ಲ ಎಂದು ರೈತರು ಆರೋಪಿಸಿದರು. ಶಾಸಕರು ರೈತರಿಗೆ ಜ್ಯೂಸ್ ಕೊಡುವ ಮೂಲಕ ಹೋರಾಟವನ್ನು ಅಂತಿಮಗೊಳಿಸಿದರು.












Click it and Unblock the Notifications