ವಿವಿ ಸಾಗರ ಡ್ಯಾಂ ಪುನರ್ ನವೀಕರಣಕ್ಕೆ 19 ಕೋಟಿ ಅನುದಾನ
ಚಿತ್ರದುರ್ಗ, ಡಿಸೆಂಬರ್ 09; ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ತಾಲ್ಲೂಕಿನ ವಾಣಿವಿಲಾಸ ಪುರ ಬಳಿ ಇರುವ ಮಾರಿಕಣಿವೆ ಜಲಾಶಯಕ್ಕೆ ಬುಧವಾರ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಹಾಗೂ ಕೇಂದ್ರೀಯ ವಾಟರ್ ಕಮಿಷನ್ ಸಮಿತಿಯವರು ಭೇಟಿ ನೀಡಿ ಜಲಾಶಯ ವೀಕ್ಷಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, "ಕೇಂದ್ರೀಯ ವಾಟರ್ ಕಮಿಷನ್ ಮತ್ತು ವಿಶ್ವಬ್ಯಾಂಕ್ ನೆರವಿನೊಂದಿಗೆ ವಾಣಿ ವಿಲಾಸ ಜಲಾಶಯದ ಪುನರ್ ನವೀಕರಣದ ಹಾಗೂ ಅಭಿವೃದ್ಧಿ ಕಾಮಗಾರಿಗಳಿಗೆ 19 ಕೋಟಿ ಹಾಗೂ ಗಾಯಿತ್ರಿ ಜಲಾಶಯಕ್ಕೆ 12.5 ಕೋಟಿ ಅನುದಾನ ಮಂಜೂರು ಮಾಡಲಾಗಿದೆ" ಎಂದರು.
"ಡ್ಯಾಂ ಪುನರ್ ನವೀಕರಣದ ಅಭಿವೃದ್ಧಿ ಕಾಮಗಾರಿ ಉದ್ದೇಶದಿಂದ ಈ ಯೋಜನೆ ಅಡಿಯಲ್ಲಿ 11 ಸಾವಿರ ಕೋಟಿ ಅನುದಾನವಿದ್ದು, ರಾಜ್ಯಕ್ಕೆ 105 ಕೋಟಿ ಅನುದಾನ ಸಿಗಲಿದೆ. ಈ ಯೋಜನೆ ಅಡಿಯಲ್ಲಿ ಜಲಾಶಯವನ್ನು ನವೀಕರಣ ಮಾಡುವ ಉದ್ದೇಶದಿಂದ, ಡ್ಯಾಂ ಸುರಕ್ಷಿತ ಪರೀಕ್ಷೆ, ನೂತನ ನೀರು ಬಿಡುವ ತೂಬುಗಳ ಅಳವಡಿಕೆ, ಜಲಾಶಯದ ಪಕ್ಕದಲ್ಲಿರುವ ಉತ್ತರೆ ಗುಡ್ಡ ಹಾಗೂ ಚತ್ರಿಗುಡ್ಡದಲ್ಲಿ ಉದ್ಯಾನವನ, ನಾಲೆಗಳ ದುರಸ್ತಿ ಕಾರ್ಯ, ಡ್ಯಾಂ ನಲ್ಲಿ ವಿದ್ಯುತ್ ದೀಪಾಲಂಕಾರ" ಮುಂತಾದ ಕಾಮಗಾರಿ ಕೈಗೊಳ್ಳಲಾಗುತ್ತದೆ.

"ಅಣೆಕಟ್ಟಿಗೆ ತಲುಪುವ ರಸ್ತೆ ಅಭಿವೃದ್ಧಿ, ಹಿನ್ನೀರಿನಲ್ಲಿ ಜಲಸಹಾಸ ಕ್ರೀಡೆಗಳು, ಜಲಾಶಯದ ಕೆಳಭಾಗದಲ್ಲಿರುವ ಪುರಾತನ ಕಣಿವೆ ಮಾರಮ್ಮ ಹಾಗೂ ದಡದಲ್ಲಿರುವ ಹಾರನಕಣಿವೆ ಶ್ರೀ ರಂಗನಾಥ ಸ್ವಾಮಿ ದೇವಾಲಯ ಜೀರ್ಣೋದ್ಧಾರ ಹೀಗೆ ಹತ್ತು ಹಲವು ಅಭಿವೃದ್ಧಿ ಕಾರ್ಯಗಳಿಗೆ ಕೇಂದ್ರ ಸರ್ಕಾರದಿಂದ 19 ಕೋಟಿ ಅನುದಾನ ಮಂಜೂರು ಮಾಡಲಾಗಿದೆ. ಇನ್ನೂ ಐದಾರು ಕೋಟಿ ಹೆಚ್ಚು ಹಣ ಮಂಜೂರು ಮಾಡಲಾಗುತ್ತದೆ" ಎಂದು ಸಚಿವರು ಮಾಹಿತಿ ನೀಡಿದರು.
63 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ವಿವಿ ಸಾಗರ ಡ್ಯಾಂಗೆ ದಾಖಲೆ ಮಟ್ಟದಲ್ಲಿ ನೀರು ಹರಿದು ಬಂದಿದ್ದು, ಜಲಾಶಯದ ಬಗ್ಗೆ ಸಚಿವರು ನೀರಾವರಿ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಮುಖ್ಯ ಇಂಜಿನಿಯರ್ ರಾಘವನ್, ನೋಡೆಲ್ ಅಧಿಕಾರಿ ಮಾಧವನ್, ನೀರಾವರಿ ಇಲಾಖೆ ಅಧಿಕಾರಿಗಳಾದ ಕೃಷ್ಣಮೂರ್ತಿ, ಪರುಶುರಾಮ್, ನಿಜುಗೌಡ ಮುಂತಾದವರು ಸಚಿವರ ಜೊತೆಗಿದ್ದರು.
ನೀರಿನ ಮಟ್ಟ 125 ಅಡಿ : ವಾಣಿ ವಿಲಾಸ ಜಲಾಶಯ ನೀರಿನ ಮಟ್ಟ ಗುರುವಾರ 125 ಅಡಿ ತಲುಪಿದೆ. 1958 ರಲ್ಲಿ 124.25 ಅಡಿ ನೀರು ಸಂಗ್ರಹವಾಗಿತ್ತು. 63 ವರ್ಷಗಳ ಬಳಿಕ ಜಲಾಶಯಕ್ಕೆ ದಾಖಲೆ ಮಟ್ಟದಲ್ಲಿ ನೀರು ಹರಿದು ಬಂದಿದೆ. ಇನ್ನು 5.2 ಅಡಿ ನೀರು ಡ್ಯಾಂಗೆ ಹರಿದು ಬಂದರೆ ಕೋಡಿ ಬೀಳುವುದು ಖಚಿತವಾಗಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಹೆಚ್ಚು ಮಳೆಯಾಗಿ ಅಲ್ಲಿನ ಕೆರೆ, ಕಟ್ಟೆಗಳು ಈಗಾಗಲೇ ತುಂಬಿದ್ದು ಇದರಿಂದ ವೇದಾವತಿ ನದಿಯಲ್ಲಿ ನೀರಿನ ಹರಿವು ಪ್ರಮಾಣ ಹೆಚ್ಚಿರುತ್ತದೆ. ಆದ್ದರಿಂದ ಸಾರ್ವಜನಿಕರು ನದಿಗೆ ಇಳಿಯಬಾರದು ಎಂದು ಚಿತ್ರದುರ್ಗ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಎಚ್ಚರಿಕೆ ನೀಡಿದ್ದಾರೆ.
ಕೆರೆ, ಕಟ್ಟೆಗಳು ತುಂಬಿದ್ದು ಅಲ್ಲಿನ ಹೆಚ್ಚುವರಿ ನೀರು ಹಾಗೂ ಭದ್ರಾ ಮೇಲ್ದಂಡೆ ಯೋಜನೆಯಡಿ ಬಿಡುಗಡೆ ಮಾಡುವ ನೀರು ಸಹ ಈ ನದಿ ಪಾತ್ರದಲ್ಲಿಯೇ ಹರಿಯುವುದರಿಂದ ಸಹಜವಾಗಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಿರುತ್ತದೆ.












Click it and Unblock the Notifications