ಚಿಕ್ಕಮಗಳೂರು; ಅಕ್ರಮವಾಗಿ ಮರ ಕಡಿತ, ಮೂವರು ಅಧಿಕಾರಿಗಳು ಅಮಾನತು
ಚಿಕ್ಕಮಗಳೂರು, ಜನವರಿ 10: ಚಿಕ್ಕಮಗಳೂರಿನ ಭದ್ರಾ ಅಭಯಾರಣ್ಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮರ ಕಡಿತ ಮಾಡಿದ ಪ್ರಕರಣ ಸಂಬಂಧ ಮೂವರು ಅರಣ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ.
ಜಿಲ್ಲೆಯ ಭದ್ರಾ ಅಭಯಾರಣ್ಯ ವ್ಯಾಪ್ತಿಯ ತರೀಕೆರೆ ತಾಲೂಕಿನ ತಣಗೀಬೈಲು, ಅಯ್ಯನ ಕೆರೆ, ಗುರುಪುರ ಗುಡ್ಡದ ಬೀರನ ಹಳ್ಳಿ ಪ್ರದೇಶದಲ್ಲಿ ಅಕ್ರಮವಾಗಿ ಸಾಗುವಾನಿ, ಬೀಟೆ, ತೇಗದ ಮರಗಳನ್ನು ಕಡಿತಲೆ ಮಾಡಲಾಗಿತ್ತು. ಇದರಿಂದ ಲಕ್ಷಾಂತರ ರೂಪಾಯಿ ನಷ್ಟ ವಾಗಿದೆ.

ಅಭಯಾರಣ್ಯದೊಳಗೆ ಅಕ್ರಮ ಪ್ರವೇಶ ಸಾಧ್ಯವಿಲ್ಲ. ಆದರೆ ಲಕ್ಷಾಂತರ ರೂಪಾಯಿ ಮೌಲ್ಯದ ಮರಗಳ ಕಡಿದಿದ್ದು ಹೇಗೆ? ಎಂಬುದು ಎಲ್ಲರ ಪ್ರಶ್ನೆಯಾಗಿದೆ. ಈ ಪ್ರಕರಣದ ಹಿಂದೆ ಅರಣ್ಯಾಧಿಕಾರಿಗಳ ಸಹಾಯವಿದೆ ಎಂಬ ಆರೋಪವೂ ಕೇಳಿ ಬಂದಿತ್ತು.
ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಮರಗಳನ್ನು ಅಕ್ರಮವಾಗಿ ಕಡಿದು ಸಾಗಿಸಲಾಗಿದೆ ಎಂದು ಪರಿಸರವಾದಿಗಳು ಆರೋಪಿಸಿ ದ್ದರು. ಈ ಹಿನ್ನಲೆಯಲ್ಲಿ ಎಚ್ಚೆತ್ತ ಅರಣ್ಯ ಇಲಾಖೆ ಫಾರೆಸ್ಟ್ ಗಾರ್ಡ್ ಸದ್ದಾಂ ಹುಸೇನ್, ಅರುಣ್ ಹಾಗೂ ಡಿಆರ್ಎಫ್ಓ ಸುನೀಲ್ ಅಮಾನತುಗೊಳಿಸಿದೆ.
ಗಾಂಧಿ ಪ್ರತಿಮೆಗೆ ಮನವಿ ಸಲ್ಲಿಸಿದ ರೈತ ಮುಖಂಡ: ತಮ್ಮ ಮನವಿಗೆ ಯಾರು ಸ್ಪಂದಿಸದ ಹಿನ್ನೆಲೆಯಲ್ಲಿ ರೈತ ಮುಖಂಡರೊಬ್ಬರು ಚಿಕ್ಕಮಗಳೂರು ನಗರದ ಡಿಸಿ ಕಚೇರಿಯ ಮುಂದಿನ ಮಹಾತ್ಮ ಗಾಂಧಿ ಪ್ರತಿಮೆಗೆ ಮನವಿಯನ್ನು ಸಲ್ಲಿಸಿದ್ದಾರೆ.
ರಾಜ್ಯ ರೈತ ಸಂಘದ ಉಪಾಧ್ಯಕ್ಷ ಮಂಜುನಾಥ್ ಕಂದಾಯ ಇಲಾಖೆಯ ಪಹಣಿ ತಿದ್ದುಪಡಿ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಿದರು. ಆದರೆ ಯಾರೂ ಸಹ ಅದನ್ನು ಪರಿಗಣಿಸಿಲ್ಲ. ಆದ್ದರಿಂದ ಜಿಲ್ಲಾಡಳಿತದ ಬಗ್ಗೆ ಅಸಮಾಧಾನಗೊಂಡ ರೈತ ಮುಖಂಡ ಮಹಾತ್ಮ ಗಾಂಧೀಜಿ ಪ್ರತಿಮೆಗೆ ಮನವಿ ಪತ್ರ ಸಲ್ಲಿಸಿದರು.
ಆದರೆ ಗಾಂಧಿ ಪ್ರತಿಮೆ ಬಳಿ ತೆರಳಲು ಮಂಜುನಾಥ್ಗೆ ಪೊಲೀಸರು ಅವಕಾಶ ಕೊಡದ ಕಾರಣ ಕೆಲಕಾಲ ಹೈಡ್ರಾಮ ಸಹ ನಡೆಯಿತು. ಕೊನೆಗೆ ಕೆಲಕಾಲ ಗಾಂಧಿ ಪ್ರತಿಮೆ ಬಳಿ ನಿಂತು ಸಾಂಕೇತಿಕವಾಗಿ ಪ್ರತಿಭಟನೆ ಮಾಡಲು ಅನುವು ಮಾಡಿಕೊಡಲಾಯಿತು.
ಈ ವೇಳೆ ಮಾತನಾಡಿದ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಂಜುನಾಥ್, "ಪಹಣಿ ದೋಷಮುಕ್ತ ರಾಜ್ಯ ಮಾಡುತ್ತೇವೆ ಎನ್ನುತ್ತಾರೆ ಕಂದಾಯ ಸಚಿವ ಕೃಷ್ಣ ಬೈರೇಗೌಡ. ಆದರೆ ಅದು ಸಾಧ್ಯವಿಲ್ಲ, ಅಧಿಕಾರಿಗಳು ಅದಕ್ಕೆ ಬಿಡುವುದಿಲ್ಲ" ಎಂದರು.












Click it and Unblock the Notifications