ಚಿಕ್ಕಮಗಳೂರಿನಲ್ಲಿ ಆರ್ಭಟಿಸುತ್ತಿದೆ ಮುಂಗಾರು ಮಳೆ
ಚಿಕ್ಕಮಗಳೂರು, ಜೂನ್ 12: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮಳೆ ಅಬ್ಬರ ಹೆಚ್ಚಾಗಿದ್ದು, ಜಿಲ್ಲೆಯ ಹಲವೆಡೆ ಭಾರೀ ಗಾಳಿ ಸಹಿತ ಧಾರಾಕಾರ ಮಳೆ ಸುರಿದಿದೆ. ಬಾಳೆಹೊನ್ನೂರು, ಮೂಡಿಗೆರೆ ಸೇರಿದಂತೆ ಜಿಲ್ಲಾದ್ಯಂತ ಬೆಳಗ್ಗಿನಿಂದಲೂ ತುಂತುರು ಮಳೆಯಾಗುತ್ತಿದೆ.
ಮಳೆಯ ರಭಸಕ್ಕೆ ಚಾರ್ಮಾಡಿಯಲ್ಲಿ ರಸ್ತೆಗೆ ಅಡ್ಡಲಾಗಿ ದೊಡ್ಡ ಮರ ಬಿದ್ದಿದ್ದು, ಟ್ರಾನ್ಸ್ ಫಾರ್ಮರ್ ನೆಲಕ್ಕುರುಳಿದೆ. ಇದರಿಂದ ನಿನ್ನೆ ರಾತ್ರಿಯಿಡೀ ಸಂಚಾರ ಅಸ್ತವ್ಯಸ್ತವಾಗಿದೆ. ಚಿಕ್ಕಮಗಳೂರು-ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗದಲ್ಲಿ ಘಟನೆ ನಡೆದಿದ್ದು, ಸುಮಾರು 4 ಗಂಟೆಗಳ ಪ್ರಯಾಣಿಕರು ಪರದಾಡುವಂತಾಯಿತು.

ಬಾಳೆಹೊನ್ನೂರಿನ ಕಣತಿ ಬಳಿಯೂ ರಸ್ತೆಗೆ ಬೃಹತ್ ಗಾತ್ರದ ಮರವೊಂದು ಉರುಳಿದ್ದು, ಬಾಳೆಹೊನ್ನೂರು -ಚಿಕ್ಕಮಗಳೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಕಳೆದ ಒಂದು ಗಂಟೆಯಿಂದಲೂ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಸ್ಥಳೀಯರು, ಅರಣ್ಯ ಸಿಬ್ಬಂದಿಗಳಿಂದ ಮರ ತೆರವು ಕಾರ್ಯ ಆರಂಭವಾಗಿದೆ.












Click it and Unblock the Notifications