ಅಂದು ನಿಮಗೆ ಮೀಟರ್ ಇರಲಿಲ್ವಾ? ಸಿದ್ದರಾಮಯ್ಯಗೆ ಸಿ.ಟಿ.ರವಿ ಪ್ರಶ್ನೆ
ಚಿಕ್ಕಮಗಳೂರು, ಆ 22: "ರಾಷ್ಟ್ರೀಯ ಸ್ವಯಂಸೇವಕ ಸಂಘ ಕಲಿಸಿ ಕೊಡುವುದು ದೇಶಭಕ್ತಿ ಮತ್ತು ಸಂಸ್ಕಾರವನ್ನು. ಅಲ್ಲಿ ಬೆಳೆದಿದ್ದರಿಂದಲೇ ನಾವಿಂದು ರಾಜಕೀಯವಾಗಿ ನೆಲೆ ಕಂಡಿದ್ದು" ಎಂದು ಕನ್ನಡ, ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಇಲಾಖೆಯ ಸಚಿವ ಸಿ.ಟಿ.ರವಿ ಹೇಳಿದ್ದಾರೆ.
ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಒಬ್ಬ ನಕಲಿ ಶ್ಯಾಮ ಮತ್ತು ಸಂಘ ಪರಿವಾರದ ಸದಸ್ಯರು ಕೊಲೆ ಆರೋಪಿಗಳು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಟ್ವೀಟ್ ಗೆ ಸಚಿವ ರವಿ ಪ್ರತಿಕ್ರಿಯೆ ನೀಡುತ್ತಾ, ಮೇಲಿನ ಹೇಳಿಕೆಯನ್ನು ನೀಡಿದ್ದಾರೆ.
"ಐದು ವರ್ಷ ಮುಖ್ಯಮಂತ್ರಿಯಾಗಿದ್ದವರು ನೀವು, ಸಂಘ ಪರಿವಾರದವರು ಆರೋಪಿಗಳೆಂದಾದರೆ, ಸಂಘಟನೆಯನ್ನು ಯಾಕೆ ನೀವು ನಿಷೇಧಿಸಲಿಲ್ಲ. ಯಾಕೆ ಆವಾಗ ನಿಮಗೆ ಮೀಟರ್ ಇರಲಿಲ್ಲವೇ"ಎಂದು ಸಿ.ಟಿ.ರವಿ ಪ್ರಶ್ನಿಸಿದ್ದಾರೆ.
ನಳಿನ್ ಕುಮಾರ್ ಕಟೀಲ್ ಗೆ ಸಿದ್ದರಾಮಯ್ಯ ಕೇಳಿದ ಪ್ರಶ್ನೆಗಳು ಅಂತಿಂತವಲ್ಲ
"ನೀವು ರಾಜ್ಯದ ಹಿರಿಯ ಮುಖಂಡರು, ಪ್ರಬುದ್ದತೆಯನ್ನು ಬೆಳೆಸಿಕೊಳ್ಳಿ"ಎಂದು ಸಿದ್ದರಾಮಯ್ಯನವರಿಗೆ ಬುದ್ದಿಮಾತು ಹೇಳಿದ ಸಿ.ಟಿ.ರವಿ, "ಟೀಕೆ ಮಾಡುವವರನ್ನೆಲ್ಲಾ ಹತ್ಯೆ ಮಾಡುವುದಾಗಿದ್ದರೆ, ಜನ ಭೂಮಿಯಲ್ಲಿ ಇರುತ್ತಿದ್ದರಾ'ಎಂದು ರವಿ ಪ್ರಶ್ನಿಸಿದ್ದಾರೆ.
"ನಾನಿಂದು ಸಚಿವನಾಗಿದ್ದೇನೆ, ಮೋದಿಯವರು ಪ್ರಧಾನಿಯಾಗಿದ್ದಾರೆ. ಇದಕ್ಕೆಲ್ಲಾ ಕಾರಣ ನಮ್ಮ ಸಂಘಟನೆ. ನಿಮ್ಮ ರಾಜಕೀಯ ತೆವಲಿಗೆ ಆರ್ ಎಸ್ ಎಸ್ ಮೇಲೆ ಗೂಬೆ ಕೂರಿಸಬೇಡಿ"ಎಂದು ಸಚಿವ ರವಿ, ಸಿದ್ದರಾಮಯ್ಯ ವಿರುದ್ದ ಕಿಡಿಕಾರಿದ್ದಾರೆ.
"2013-18ರ ಅವಧಿಯಲ್ಲಿ 24 ಹಿಂದುಗಳ ಹತ್ಯೆಯಾಗಿದೆ ಎಂದು ಹೇಳಿದ್ದೀರಿ. ಕೋಮುಸಂಘರ್ಷದಲ್ಲಿ ಹತ್ಯೆಗೀಡಾದವರು 24 ಅಲ್ಲ, ಹಿಂದು-ಮುಸ್ಲಿಮ್ ಸೇರಿ ಒಟ್ಟು 45. ಈ ಪ್ರಕರಣಗಳನ್ನು ದಾಖಲೆ ಸಮೇತ ವಿವರಿಸಿ ನಮ್ಮ ಪಕ್ಷ ಪ್ರಕಟಿಸಿದ ಪುಸ್ತಕವನ್ನು ಓದಿ ನಿಮ್ಮ ಮನಸಾಕ್ಷಿಯನ್ನು ಪ್ರಶ್ನಿಸಿಕೊಳ್ಳಿ" ಎಂದು ಸಿದ್ದರಾಮಯ್ಯ, ನಳಿನ್ ಕಟೀಲ್ ಗೆ ತಿರುಗೇಟು ನೀಡಿದ್ದರು.