ಚಿಕ್ಕಮಗಳೂರಿನಲ್ಲಿ ಮಳೆಗೆ ಮತ್ತೆ ನಾಲ್ವರ ಬಲಿ
ಚಿಕ್ಕಮಗಳೂರು, ಆಗಸ್ಟ್ 10: ಚಿಕ್ಕಮಗಳೂರಿನಲ್ಲಿ ಮಳೆಗೆ ಮತ್ತೆ ನಾಲ್ವರು ಬಲಿಯಾಗಿದ್ದು, ಒಟ್ಟು ಸಾವಿಗೀಡಾದವರ ಸಂಖ್ಯೆ 6ಕ್ಕೆ ಏರಿದೆ.
ಮೂಡಿಗೆರೆ ತಾಲ್ಲೂಕಿನ ಜಾವಳಿ ಬಳಿ ಯುವಕ ಸಂತೋಷ್ ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿ ನೀರು ಪಾಲಾಗಿದ್ದಾನೆ. ಕೂದುವಳ್ಳಿ ಸಮೀಪ ಹಳ್ಳ ದಾಟುವ ವೇಳೆ ಚಂದ್ರೇಗೌಡ ಎಂಬ ರೈತ ಕೊಚ್ಚಿ ಹೋಗಿ ಸಾವನ್ನಪ್ಪಿದ್ದಾರೆ. ಮತ್ತಿಘಟ್ಟ ಗ್ರಾಮದಲ್ಲಿ ಗುಡ್ಡ ಕುಸಿದು ಶೇಷಮ್ಮ ಎಂಬ ಮಹಿಳೆ ಹಾಗೂ ಅವರ ಮಗ 35 ವರ್ಷದ ಸತೀಶ್ ಸಾವನ್ನಪ್ಪಿದ್ದು, ಒಂದೇ ದಿನದಲ್ಲಿ ಒಟ್ಟು ನಾಲ್ವರು ಮಳೆಗೆ ಬಲಿಯಾಗಿದ್ದಾರೆ.
ಮತ್ತಿಘಟ್ಟದಲ್ಲಿ ನಿನ್ನೆ ಮಳೆಗೆ ಗುಡ್ಡ ಕುಸಿದಿದ್ದು, ಮಣ್ಣಿನಡಿ ಶೇಷಮ್ಮ ಸಿಲುಕಿಕೊಂಡಿದ್ದರು. ಅವರೊಂದಿಗೆ ಅವರ ಮಗನೂ ಇದ್ದು, ಆತ ಕೂಡ ಸಾವನ್ನಪ್ಪಿದ್ದಾನೆ. ಶೇಷಮ್ಮ ಅವರ ಮೃತದೇಹ ಮೊದಲು ದೊರೆತಿದ್ದು, ಮಗನ ದೇಹಕ್ಕಾಗಿ ಶೋಧ ಕಾರ್ಯ ನಡೆಸಿದ್ದರು. ನಂತರ ಮಗನ ಮೃತದೇಹವೂ ಪತ್ತೆಯಾಗಿದೆ. ಈವರೆಗೂ ಚಿಕ್ಕಮಗಳೂರಿನಲ್ಲಿ ಮಳೆಯಿಂದ ಸಾವನ್ನಪ್ಪಿರುವವರ ಸಂಖ್ಯೆ 6ಕ್ಕೆ ಏರಿದೆ.

ಮಳೆ ಮುಂದುವರೆಯುತ್ತಿದ್ದು, ಜನರನ್ನು ಕಾಪಾಡಲು ಪ್ರಯತ್ನಗಳೂ ನಡೆಯುತ್ತಿವೆ. ಮಲೆಮನೆ, ಬಾಳೂರು, ಚನ್ನಹಡ್ಲು ಗ್ರಾಮಗಳ ಸುತ್ತಮುತ್ತ ಹಲವು ಮನೆಗಳು ಕುಸಿತವಾಗಿದ್ದು, ಗ್ರಾಮಸ್ಥರು ಜೀವ ಕೈಯಲ್ಲಿ ಹಿಡಿದು ಬದುಕುತ್ತಿದ್ದಾರೆ.












Click it and Unblock the Notifications