ಸಿದ್ದರಾಮಯ್ಯನವರ ಭಾವನಾತ್ಮಕ ಮಾತಿಗೆ ರಾಜ್ಯದ ಜನ ಮರಳಾಗಲ್ಲ: ಬೊಮ್ಮಾಯಿ
ಚಿಕ್ಕಮಗಳೂರು, ನವೆಂಬರ್ 15: ನನ್ನ ಆರೋಗ್ಯ ಸರಿ ಇಲ್ಲ. ನಾನು ಮುಖ್ಯಮಂತ್ರಿಯಾಗಬೇಕು ಅಂದರೆ ನೀವು ಮತ ಹಾಕಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯನವರು ಭಾವನಾತ್ಮಕವಾಗಿ ಮಾತನಾಡುತ್ತಿದ್ದಾರೆ. 2013 ರಲ್ಲೂ ಇದೇ ರೀತಿ ಹೇಳಿದ್ದರು. ಆದರೆ ಅವರ ಆಡಳಿತದಲ್ಲಿ ಕೊಲೆ ಸುಲಿಗೆಗಳೇ ನಡೆದವು. ಈಗ ಅವರ ಮಾತನ್ನು ಕೇಳುವ ಸ್ಥಿತಿಯಲ್ಲಿ ರಾಜ್ಯದ ಜನತೆ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಕಡೂರಿನಲ್ಲಿ ಜನಸಂಕಲ್ಪ ಯಾತ್ರೆಗೆ ಆಗಮಿಸಿದ ವೇಳೆ ಮಾತನಾಡಿದ ಸಿಎಂ , ಸಿದ್ದರಾಮಯ್ಯ ಆರೋಗ್ಯ ಸರಿ ಇಲ್ಲ ಎಂದು ಮತ ಕೇಳುತ್ತಿದ್ದಾರೆ. ಅವರು ನೂರು ವರ್ಷ ಕಾಲ ಬದುಕಲಿ ಎಂದು ಪ್ರಾರ್ಥನೆ ಮಾಡುತ್ತೇನೆ. ಆದರೆ ನಾಡಿನ ಜನತೆಗೆ ಅವರು 2013ರಲ್ಲೂ ಹೇಳಿದ್ದರು. ಜನ ಅವರ ಮಾತನ್ನು ನಂಬಿ ಮತ ಹಾಕಿದ್ದರು. ಆದರೆ ಜನರಿಗೆ ಮತಕ್ಕೆ ಬೆಲೆ ಸಿಗಲಿಲ್ಲ. ಹಲವಾರು ಕೊಲೆ, ಸುಲಿಗೆ ಪ್ರಕರಣ ಹೆಚ್ಚಾಗಿದ್ದವು. ಕಾನೂನು ಸುವ್ಯವಸ್ಥೆ ಹಾಳಾಗಿತ್ತು. ಯಾವುದೇ ಅಭಿವೃದ್ಧಿ ಯೋಜನೆ ಜಾರಿ ಮಾಡಲಿಲ್ಲ ಎಂದರು.
ಸಿಹಿ ಸುದ್ದಿ: 6-8ನೇ ತರಗತಿ ಮಕ್ಕಳಿಗೆ ಇನ್ಮುಂದೆ ಪ್ರಾಥಮಿಕ ಶಿಕ್ಷಕರಿಂದ ಪಾಠ
ಅದೇ ಕಾರಣಕ್ಕೆ 2018ರಲ್ಲಿ ಅವರನ್ನು ಜನ ಸೋಲಿಸಿ ವಿರೋಧ ಪಕ್ಷದಲ್ಲಿ ಕೂರಿಸಿದ್ದಾರೆ. ಇದೀಗ ಮತ್ತೆ ತಮ್ಮ ಜನರ ಮುಂದೆ ಅದೇ ರೀತಿ ಹೇಳುತ್ತಿದ್ದಾರೆ. ಆದರೆ ಜನರು ನಂಬುವ ಸ್ಥಿತಿಯಲ್ಲಿಲ್ಲ. ಒಂದು ಬಾರಿ ನಂಬಿ ಸಿಎಂ ಮಾಡಿದ್ದು, ಅವರು ಯಾವ ರೀತಿ ಕಾರ್ಯಕ್ರಮ ನೀಡಿದ್ದಾರೆ ಎಂಬುವುದನ್ನು ನೋಡಿದ್ದಾರೆ. ಕರ್ನಾಟಕದ ಜನ ಎಲ್ಲವನ್ನೂ ವಿಶ್ಲೇಷಣೆ ಮಾಡಿ ಮತ ಹಾಕುತ್ತಾರೆ ಎಂದು ತಿಳಿಸಿದರು.
ಜನಸಂಕಲ್ಪ ಯಾತ್ರೆ ವಿಜಯ ಯಾತ್ರೆಯಾಗುತ್ತಿದೆ
ಮಲೆನಾಡಿನ ಪ್ರದೇಶದಲ್ಲಿ 3ನೇ ಚರಣ ಜನಸಂಕಲ್ಪ ಯಾತ್ರೆ ನಡೆಯುತ್ತಿದೆ. ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲೂ ಈ ಯಾತ್ರೆ ನಡೆಸಲು ನಿರ್ಧರಿಸಿದ್ದೇವೆ. ಮೊದಲು ಕಲ್ಯಾಣ ಕರ್ನಾಟಕದಲ್ಲಿ ಶುರು ಮಾಡಿದೆವು, ನಂತರ ಮುಂಬೈ ಕರ್ನಾಟಕದಲ್ಲೂ ಉತ್ತಮ ಬೆಂಬಲ ಸಿಕ್ಕಿದೆ. ಇದೀಗ ಮಲೆನಾಡಿನಲ್ಲೂ ಬಹಳ ದೊಡ್ಡ ಬೆಂಬಲ ಸಿಗುತ್ತಿದೆ. ಈ ಜನಸಂಕಲ್ಪ ಯಾತ್ರೆ ವಿಜಯಸಂಕಲ್ಪ ಯಾತ್ರೆ ಯಾಗಿ ಪರಿವರ್ತನೆಯಾಗುತ್ತಿದೆ ಎಂದರು.
ಎಲೆಚುಕ್ಕಿ ರೋಗ ಹರಡುವಿಕೆ ತಡೆಯುವುದಕ್ಕೆ ಆಧ್ಯತೆ
ಮಲೆನಾಡಿನ ಪ್ರಮುಖ ಬೆಳೆಯಾದ ಅಡಿಕೆಗೆ ಎಲೆ ಚುಕ್ಕಿ ರೋಗ ಕಾಣಿಸಿಕೊಂಡಿರುವುದರ ಬಗ್ಗೆ ಕೈಗೊಂಡಿರುವ ಕ್ರಮದ ಬಗ್ಗೆ ಮಾತನಾಡಿ, ಈಗಾಗಲೆ ವಿಶ್ವವಿದ್ಯಾಲಯ ತಂಡ, ಕೇಂದ್ರ ತಂಡಗಳು ಇಲ್ಲಿಗೆ ಬಂದು ಎಲೆಚುಕ್ಕಿ ರೋಗದ ಪರೀಕ್ಷೆ ಮಾಡಿವೆ. ಸರಕಾರ ಕೂಡ ಔಷಧ ಸಿಂಪಡಿಸಲು 10 ಕೋಟಿ ರೂ. ಬಿಡುಗಡೆ ಮಾಡಿದೆ. ರೋಗ ಹೆಚ್ಚು ಹರಡದಂತೆ ತಡೆಯುವುದು ನಮ್ಮ ತಕ್ಷಣದ ಕೆಲಸವಾಗಿದೆ.
ಔಷಧ ಸಂಶೋಧನೆಗೆ ಸರ್ಕಾರದಿಂದ ಸಂಪೂರ್ಣ ನೆರವು
ಈ ರೋಗಕ್ಕೆ ಮೂಲ ಕಾರಣವೇನು, ಏಕೆ ಬಂದಿದೆ ಎಂಬುದನ್ನು ವಿಜ್ಞಾನಿಗಳು ಹೇಳಿದರೆ ಅದಕ್ಕೆ ಏನು ಚಿಕಿತ್ಸೆ ಹೇಳುತ್ತಾರೋ ಅದನ್ನು ಮಾಡಲು ಸಿದ್ಧರಿದ್ದೇವೆ. ಇದನ್ನು ಸರಕಾರ ಬಹಳ ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಅಡಿಕೆ ಬಹಳ ದೊಡ್ಡ ಪ್ರಮಾಣದಲ್ಲಿ ವ್ಯಾಪಾರ ವ್ಯವಹಾರ ನಡೆಯುವ ಬೆಳೆ, ರಾಜ್ಯಕ್ಕೂ ಆದಾಯ ತಂದುಕೊಡುವುದರಿಂದ ಗಂಭೀರವಾಗಿ ಪರಿಗಣಿಸಿದ್ದೇವೆ. ಅದಕ್ಕಾಗಿ ನಿರಂತರವಾಗಿ ವಿಜ್ಞಾನಿಗಳ ಜೊತೆಗೆ ಸಂರ್ಪಕದಲ್ಲಿದ್ದೇವೆ. ಈ ರೋಗಕ್ಕೆ ಏನು ಕಾರಣ, ಔಷಧಿ ಏನು, ನಿವಾರಣೆ ಹೇಗೆ ಎಂಬುದರ ಬಗ್ಗೆ ಚರ್ಚೆ ಮಾಡಿದ್ದು, ಇದಕ್ಕೆ ಎಷ್ಟೇ ಖರ್ಚಾದರೂ ಸರಕಾರ ಕ್ರಮ ಕೈಗೊಳ್ಳಲು ಸಿದ್ದವಿದೆ ಎಂದರು.
ಒಂದು ತಿಂಗಳಲ್ಲೆ ಪರಿಹಾರ
ಪ್ರವಾಹ ಸಂದರ್ಭದಲ್ಲಿ ಕೇಂದ್ರದ ಪರಿಹಾರದ ಜೊತೆ ಅದರ ಎರಡು ಪಟ್ಟು ಕೊಡಬೇಕೆಂದು ತೀರ್ಮಾನಿಸಿದ್ದೆ, ನೀಡಿದ್ದೇವೆ. ಮೊದಲು ಬೆಳೆ ನಾಶವಾಗಿ ವರ್ಷಗಟ್ಟಲೇ ಹಣ ಬರುತ್ತಿರಲಿಲ್ಲ. ಈಗ ಒಂದೂವರೆ ತಿಂಗಳಲ್ಲಿ ಜನರಿಗೆ ಪರಿಹಾರ ಬರುತ್ತಿದೆ. ಇದೀಗ ರಾಜ್ಯದ 17 ಲಕ್ಷ ರೈತರಿಗೆ ನಾನಾ ರೀತಿ ಅನುಕೂಲ ಮಾಡಿದ್ದೇವೆ. ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಈ ಭಾಗ ಸೇರಿರಲಿಲ್ಲ. ಸ್ವತಃ ಸಿ.ಟಿ.ರವಿ ಎಷ್ಟೆ ಪ್ರಯತ್ನ ಮಾಡಿದರೂ ಆಗಿರಲಿಲ್ಲ. ಇದೀಗ ನಮ್ಮ ಸರಕಾರದಿಂದ ಆಗುತ್ತಿದೆ. ಯೋಜನೆಗೆ ಮೊದಲ ಹಂತದಲ್ಲಿ 480 ರೂಟಿ ರೂ ಬಿಡುಗಡೆಯಾಗಿದ್ದು, ಕಾಮಗಾರಿ ನಡೆಯುತ್ತಿದೆ. 2-3ನೇ ಹಂತದಲ್ಲಿ 600 ಕೋಟಿ ರೂ ವೆಚ್ಚದಲ್ಲಿ ಕಾಮಗಾರಿ ನಡೆಯಲಿದೆ ಎಂದರು.