ಮತ್ತೆ ರಸ್ತೆಗಿಳಿಯಲಿದೆ ಮಲೆನಾಡ ಜೀವನಾಡಿ ಸಹಕಾರ ಸಾರಿಗೆ ಬಸ್
ಚಿಕ್ಕಮಗಳೂರು, ಸೆಪ್ಟೆಂಬರ್ 22 : ಮಲೆನಾಡಿನ ಜನರ ಜೀವನಾಡಿ ಸಹಕಾರ ಸಾರಿಗೆ ನಷ್ಟದ ಸುಳಿಗೆ ಸಿಲುಕಿ ಬಸ್ ಸಂಚಾರ ಸ್ಥಗಿತಗೊಳಿಸಿತ್ತು. ವಿಜಯದಶಮಿ ದಿನದಿಂದ ಬಸ್ ಪುನಃ ರಸ್ತೆಗೆ ಇಳಿಯಲಿದೆ. ಉದ್ಯಮಿಯೊಬ್ಬರು ಸಾರಿಗೆ ಬಸ್ಗಳ ಸಂಚಾರ ಪುನಃ ಆರಂಭಿಸಲಿದ್ದಾರೆ.
ಮಲೆನಾಡಿನ ಕುಗ್ರಾಮಗಳನ್ನು ಸಂಪರ್ಕಿಸುತ್ತಿದ್ದ ಸಹಕಾರ ಸಾರಿಗೆ ಬಸ್ಗಳು ಸಂಚಾರ ನಿಲ್ಲಿಸಿ ವರ್ಷಗಳು ಕಳೆಯುತ್ತಾ ಬಂದಿದೆ. ಸುಮಾರು 300ಕ್ಕೂ ಅಧಿಕ ಕಾರ್ಮಿಕರು ಅತಂತ್ರಗೊಂಡಿದ್ದಾರೆ. ಸುಮಾರು 76 ಬಸ್ಗಳಿವೆ.
ಮೂಲತಃ ಹೊಸನಗರದ ನಿವಾಸಿ, ಪ್ರಸ್ತುತ ಬೆಂಗಳೂರಿನಲ್ಲಿರುವ ಉದ್ಯಮಿ ಮಹೇಂದ್ರ ಅವರು ಸಾರಿಗೆ ಸಂಸ್ಥೆಗೆ ಜೀವ ತುಂಬಲು ಮುಂದಾಗಿದ್ದಾರೆ. ಅಚ್ಚರಿಯ ಸಂಗತಿ ಎಂದರೆ ಸಾರಿಗೆ ಬಸ್ನಲ್ಲಿ ಸಂಚಾರ ನಡೆಸಿದ ವ್ಯಕ್ತಿಯೇ ಈಗ ಅದೇ ಸಂಸ್ಥೆಗೆ ಬಂಡವಾಳ ಹೂಡುತ್ತಿದ್ದಾರೆ.
ಚಿಕ್ಕಮಗಳೂರು, ಕೊಪ್ಪ, ತೀರ್ಥಹಳ್ಳಿ, ಶೃಂಗೇರಿ ಭಾಗದಲ್ಲಿ ಸಹಕಾರ ಸಾರಿಗೆ ಬಸ್ ಚಿರಪರಿಚಿತ. ವಿಜಯದಶಮಿ ದಿನದಿಂದ ಬಸ್ ಸಂಚಾರ ಆರಂಭಿಸಲಾಗುತ್ತದೆ ಎಂದು ಉದ್ಯಮಿ ಮಹೇಂದ್ರ ಅವರು ಘೋಷಣೆ ಮಾಡಿದ್ದಾರೆ.

ಸಂಸ್ಥೆ ಮುಚ್ಚಿ ಹೋಗಬಾರದು
ಸಹಕಾರ ಸಾರಿಗೆ ಸಂಸ್ಥೆ ಮುಚ್ಚಿ ಹೋಗಬಾರದು ಎಂದು ಅದರ ಭಾರ ಹೊರುತ್ತಿದ್ದೇನೆ. 76 ಬಸ್ಗಳ ಸಂಚಾರ ಸಹಕಾರ ಸಾರಿಗೆ ಹೆಸರಿನಲ್ಲಿಯೇ ಮುಂದುವರೆಯಲಿದೆ. ವಿಜಯದಶಮಿಯಿಂದ ಬಸ್ ಸಂಚಾರ ಆರಂಭಿಸಲು ತೀರ್ಮಾನಿಸಿದೆ ಎಂದು ಉದ್ಯಮಿ ಮಹೇಂದ್ರ ಹೇಳಿದ್ದಾರೆ.

ನಷ್ಟದಲ್ಲಿರುವ ಸಂಸ್ಥೆ
2017ರ ಜನವರಿ 3ರಂದು ಬೆಳ್ಳಿಹಬ್ಬ ಆಚರಿಸಿಕೊಂಡ ಸಹಕಾರ ಸಾರಿಗೆ ಸಂಸ್ಥೆ ನಷ್ಟದಲ್ಲಿದೆ. ಕಾರ್ಮಿಕರ ವೇತನ, ಭತ್ಯೆ, ಬೋನಸ್ ಸೇರಿದಂತೆ ಸವಲತ್ತುಗಳನ್ನು ನೀಡಿ ವರ್ಷಗಳೇ ಕಳೆದಿವೆ. ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಸಂಸ್ಥೆ ಕಳೆದ ವರ್ಷ ಬಸ್ ಸಂಚಾರವನ್ನು ನಿಲ್ಲಿಸಿತ್ತು.

ಜನರ ಅವಲಂಬನೆ ಕಡಿಮೆ
ಮಲೆನಾಡು ಭಾಗದಲ್ಲಿ ಖಾಸಗಿ ಬಸ್ಗಳ ಅಬ್ಬರ ಹೆಚ್ಚಿದೆ. ಈಗ ಕೆಎಸ್ಆರ್ಟಿಸಿ ಬಸ್ಗಳು ಸಹ ರಸ್ತೆಗೆ ಇಳಿದಿವೆ. ಉಳಿದಂತೆ ಪ್ರತಿ ಮನೆಯಲ್ಲಿಯೂ ಕಾರು, ಜೀಪು, ಬೈಕ್ಗಳು ಸಾಮಾನ್ಯವಾಗಿವೆ. ಇದರಿಂದಾಗಿ ಬಸ್ ಮೇಲಿನ ಅವಲಂಬನೆ ಕಡಿಮೆ ಆಯಿತು. ನಿರ್ವಹಣಾ ವೆಚ್ಚ, ಇಂಧನ ಬೆಲೆಗಳು ಹೆಚ್ಚುತ್ತಾ ಹೋದಂತೆ ಸಹಕಾರ ಸಾರಿಗೆ ಸಂಸ್ಥೆ ನಷ್ಟ ಅನುಭವಿಸಿತು.

ಕಾರ್ಮಿಕರೇ ಕಟ್ಟಿದ ಸಂಸ್ಥೆ
ಶಂಕರ್ ಟ್ರಾನ್ಸ್ಪೋರ್ಟ್ ಮಾಲೀಕರ ಬಳಿ ಕಾರ್ಮಿಕರು ವೇತನ ಹೆಚ್ಚಿಸಲು ಕೇಳಿ 72 ದಿನ ಮುಷ್ಕರ ನಡೆಸಿದರು. ಬೇಡಿಕೆಗೆ ಒಪ್ಪದ ಮಾಲೀಕರು ಸಂಸ್ಥೆಯನ್ನು ಮುಚ್ಚಿದರು. ಆಗ ಅತಂತ್ರವಾದ ಕಾರ್ಮಿಕರು ಬಿ. ಕೆ. ಸುಂದರೇಶ್ ನೇತೃತ್ವದಲ್ಲಿ ಅಂದಿನ ಜಿಲ್ಲಾಧಿಕಾರಿ ಡಾ. ಎಸ್. ಸುಬ್ರಮಣ್ಯ ನೆರವಿನೊಂದಿಗೆ 1991ರ ಮಾರ್ಚ್ 8ರಂದು ಸಹಕಾರ ಸಾರಿಗೆ ಎಂಬ ಸಂಸ್ಥೆ ಆರಂಭಿಸಿದರು. 123 ಕಾರ್ಮಿಕರು ಶಂಕರ್ ಟ್ರಾನ್ಸ್ಪೋರ್ಟ್ ನೀಡಿದ್ದ 12 ಲಕ್ಷ ಪರಿಹಾರದ ಹಣವನ್ನು ಬಂಡವಾಳ ಮಾಡಿಕೊಂಡು ಅದೇ ಕಂಪನಿಯ 6 ಹಳೆ ಬಸ್ನೊಂದಿಗೆ ಸಹಕಾರ ಸಾರಿಗೆ ಹೆಸರಿನಲ್ಲಿ ಬಸ್ ಸೇವೆ ಆರಂಭಿಸಿದರು.
Recommended Video

ದೊಡ್ಡದಾಗಿ ಬೆಳೆದ ಸಂಸ್ಥೆ
ಸಹಕಾರ ಸಾರಿಗೆ ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ ಭಾಗದಲ್ಲಿ ಚಿರಪರಿಚಿತವಾಯಿತು. ಕುಗ್ರಾಮವನ್ನು ತಲುಪಿತು, ಜನರ ವಿಶ್ವಾಸ ಪಡೆಯಿತು. 1998ರಲ್ಲಿ ಕೊಪ್ಪದಲ್ಲಿ ದೊಡ್ಡ ಕಚೇರಿಯನ್ನು ನಿರ್ಮಾಣ ಮಾಡಲಾಯಿತು. 6 ಬಸ್ಗಳ ಜೊತೆ ಆರಂಭವಾದ ಬಸ್ ಸೇವೆ ಬಳಿಕ 76 ಬಸ್ ಮಟ್ಟಕ್ಕೆ ಬೆಳೆದಿದ್ದು, ದೊಡ್ಡ ಸಾಧನೆಯೇ ಸರಿ.












Click it and Unblock the Notifications