ಮುಚ್ಚುವ ಹಂತದಲ್ಲಿ ಸಹಕಾರ ಸಾರಿಗೆ ಸಂಸ್ಥೆ:ಕೃಪೆ ತೋರಲಿದೆಯಾ ಸರ್ಕಾರ?
ಚಿಕ್ಕಮಗಳೂರು, ಮೇ 03:ಜಪಾನ್ ಮೆಚ್ಚಿಕೊಳ್ತು. ಮಂಗಳೂರು ವಿವಿ ಪ್ರಾಧ್ಯಾಪಕರು ಡಾಕ್ಟರೇಟ್ ಪಡೆದ್ರು. ಮಣಿಪಾಲ್ ಸ್ನಾತಕೋತ್ತರ ಪದವಿಗೆ ಪಠ್ಯವೇ ಆಯ್ತು. ಕೊಲ್ಲಾಪುರ ಶಿವಾಜಿ ವಿವಿ ಪಿಎಚ್ಡಿ ಕೊಡ್ತು. ಕಾರ್ಮಿಕರೇ ಕಟ್ಟಿ ಕಾರ್ಮಿಕರೇ ಮಾಲೀಕರಾಗಿ 30 ವರ್ಷ ಹಳ್ಳಿಗರ ಮನಮುಟ್ಟಿದ ಸಹಕಾರ ಸಂಸ್ಥೆಯ ಸಾಧನೆಗಳಿವು.
ಅಂದು ಅನಭಿಶಕ್ತ ದೊರೆಯಂತೆ ಮೆರೆದ ಸಹಕಾರ ಸಂಸ್ಥೆಯಲ್ಲೀಗ ಅಸಹಕಾರ. ಸಂಬಳ ಕೊಡೋಕು ಆಗ್ದೆ ಮುಚ್ಚುವ ಹೊಸ್ತಿಲಲ್ಲಿದೆ. ಕಾರ್ಮಿಕರ ಮನವಿಗೆ ಸರ್ಕಾರದ ಬಳಿಯೂ ಉತ್ತರವಿಲ್ಲ. ಈ ಸಂಸ್ಥೆ ಮುಚ್ಚಿದ್ರೆ, ಮಲೆನಾಡು ಮುಳುಗುತ್ತೆ. ಯಾಕೆ ಅನ್ನೋ ಕುತೂಹಲಕ್ಕೆ ಈ ಸ್ಟೋರಿ ನೋಡಿ...
ಚಿಕ್ಕಮಗಳೂರಿನ ಸಹಕಾರ ಸಾರಿಗೆ ಬಸ್ಸಿನ ಚಕ್ರಗಳು ಕಾಫಿನಾಡು ಸೇರಿ ಮಂಗಳೂರು, ಉಡುಪಿ, ಶಿವಮೊಗ್ಗದ ಬೆಟ್ಟಗುಡ್ಡಗಳ ಬಹುತೇಕ ಗ್ರಾಮವನ್ನು ಕಂಡಿವೆ. ಮಲೆನಾಡ ಕುಗ್ರಾಮಗಳ ಮನೆ-ಮನ ಬೆಸೆದೆ ಪರಿಗೆ ಏಷ್ಯಾದಲ್ಲೇ ಬೆಸ್ಟ್ ಸಹಕಾರ ಸಂಸ್ಥೆ ಎಂಬ ಹೆಗ್ಗಳಿಕೆ ಗಳಿಸಿದೆ.
ಕಾರ್ಮಿಕರೇ ಕಟ್ಟಿ, ಕಾರ್ಮಿಕರೇ ಮಾಲೀಕರಾಗಿ 6 ಬಸ್ ನಿಂದ 76 ಬಸ್ ಗೆ ತಂದಿದ್ದಾರೆ. ರಾಜ್ಯಕ್ಕೆ ಕೆ.ಎಸ್.ಆರ್.ಟಿ.ಸಿ. ಮಲೆನಾಡಿಗೆ ಸಹಕಾರ ಸಾರಿಗೆ. ಯಾಕಂದ್ರೆ, ಸ್ವಾತಂತ್ರ್ಯ ಹೋರಾಟಗಾರರು, ಕರ್ನಾಟಕ ಏಕೀಕರಣಕ್ಕೆ ಹೋರಾಡಿದವರು, ವಿದ್ಯಾರ್ಥಿಗಳು, ಸಂಸ್ಥೆಯ ಕಾರ್ಮಿಕ ಮಕ್ಕಳು, ವಿಕಲಚೇತನರು, ಹಿರಿಯ ನಾಗರಿಕರಿಗೆ ಶೇ.50 ರಿಯಾಯಿತಿ ಕೊಟ್ಟು, ದಟ್ಟಕಾನನ, ಕಲ್ಲು-ಮಣ್ಣಿನ ದುರ್ಗಮ ಹಾದಿಯಲ್ಲೂ ಲಕ್ಷಾಂತರ ಮಕ್ಕಳ ಭವಿಷ್ಯ ರೂಪಿಸಿದ ಹೆಗ್ಗಳಿಕೆ ಈ ಸಂಸ್ಥೆಯದ್ದು.

ಸಂಬಳ ನೀಡೋಕು ಆಗ್ತಿಲ್ಲ
ಸಹಕಾರ ಸಂಸ್ಥೆ ಈಗ ಸರ್ಕಾರದ ನೀತಿ-ನಿರ್ಧಾರಗಳು, ಡೀಸೆಲ್ ಬೆಲೆ, ವಿಮೆ-ಟ್ಯಾಕ್ಸ್ ಮಧ್ಯೆ ಸಂಬಳ ನೀಡೋಕು ಆಗ್ದೆ ಬಾಗಿಲು ಹಾಕುವ ಹೊಸ್ತಿಲಲ್ಲಿದೆ. ಸಹಕಾರ ಕೋರಿ ಸರ್ಕಾರದ ಕದ ಬಡಿದ್ರು ಉಪಯೋಗವಿಲ್ಲ.

ಕಾರ್ಮಿಕರು ಕಟ್ಟಿದ ಸಂಸ್ಥೆ
1990ರಲ್ಲಿ ಶಂಕರ್ ಟ್ರಾನ್ಸ್ ಪೋರ್ಟ್ ಮುಚ್ಚಿದ ಬಳಿಕ ಅಲ್ಲಿದ್ದ ಕಾರ್ಮಿಕರು ತಮಗೆ ಬಂದ ಪರಿಹಾರದ ಹಣದಿಂದಲೇ ಕಟ್ಟಿಕೊಂಡ ಸಂಸ್ಥೆ. ಅಂದಿನಿಂದ ಈ ಬಸ್ ಮಲೆನಾಡ ಮನೆ-ಮನಗಳ ಮಧ್ಯೆ ಬಾಂಧವ್ಯ ಬೆಸೆದಿತ್ತು. ಆದರೆ ಇಂದು ಅವನತಿಯ ಅಂಚಿನಲ್ಲಿದೆ. ತಿಂಗಳಿಗೆ ಡೀಸೆಲ್ ನಿಂದ 24 ಲಕ್ಷ ನಷ್ಟವಾದ್ರೆ, ವರ್ಷಕ್ಕೆ ಒಂದೂವರೆ ಕೋಟಿ ಟ್ಯಾಕ್ಸ್, ಜೊತೆಗೆ, ರಿಯಾಯಿತಿ ಪಾಸ್ ನ ಹೊರೆ. ಹಾಗಾಗಿ ಡೀಸೆಲ್ ಸಬ್ಸಿಡಿ, ಟ್ಯಾಕ್ಸ್ ಕಡಿತ ಹಾಗೂ ಪಾಸ್ ಗಳ ಉಳಿಕೆ ಹಣವನ್ನು ನೀಡುವಂತೆ ಸರ್ಕಾರದ ಸಹಾಯ ಹಸ್ತವನ್ನು ಎದುರು ನೋಡ್ತಿದೆ.

ಬೀದಿಗೆ ಬರೋದು ಗ್ಯಾರಂಟಿ
ಗಮನಿಸಬೇಕಾದ ವಿಷಯವೆಂದರೆ ಡೀಸೆಲ್ ದರ ಹೆಚ್ಚಾದಾಗ್ಲೂ ಸಹಕಾರ ಸಾರಿಗೆ ಟಿಕೆಟ್ ದರ ಏರಿಸಿಲ್ಲ. ಸರ್ಕಾರ ಈ ಸಂಸ್ಥೆಗೆ ಸ್ಪಂದಿಸದಿದ್ರೆ, ಏಷ್ಯಾ ಖಂಡದಲ್ಲೇ ಮಾದರಿಯಾಗಿದ್ದ ಇದು ಬಾಗಿಲು ಹಾಕಿ, 300ಕ್ಕೂ ಅಧಿಕ ಕಾರ್ಮಿಕರು ಬೀದಿಗೆ ಬರೋದು ಗ್ಯಾರಂಟಿ.

ನೆರವಿನ ಹಸ್ತ ನೀಡಬೇಕಾಗಿದೆ
ದಿವಂಗತ ಸಹಕಾರ ಸಚಿವ ಮಹದೇವಪ್ಪ ಈ ಸಂಸ್ಥೆಯ ರಜತ ಮಹೋತ್ಸವದ ಕಾರ್ಯಕ್ರಮಕ್ಕೆ ಬಂದಾಗ್ಲೇ ಕಾಫಿನಾಡಲ್ಲಿ ಮೃತರಾದದ್ದು. ಮೈತ್ರಿ ಸರ್ಕಾರದ ಪಾಲುದಾರ ಕಾಂಗ್ರೆಸ್ ಮಹದೇವಪ್ಪಗೆ ಗೌರವ ಸೂಚಿಸುವ ನಿಟ್ಟಿನಲ್ಲಾದ್ರು ಈ ಸಂಸ್ಥೆಗೆ ನೆರವಿನ ಹಸ್ತ ನೀಡಬೇಕಾಗಿದೆ. ಯಾಕಂದ್ರೆ, ಮಲೆನಾಡ ಹಳ್ಳಿಗರ ಬದುಕು ಈ ಬಸ್ ಮೇಲೆ ನಿಂತಿದೆ. ಒಂದ್ ವೇಳೆ, ಸರ್ಕಾರ ಇವ್ರಿಗೆ ಸ್ಪಂದಿಸಿದ್ದೇ ಆದಲ್ಲಿ ಸಹಕಾರ ಸಾರಿಗೆ ಸಂಸ್ಥೆಯ ಗತವೈಭವ ಮತ್ತೆ ಮರುಕಳಿಸೋದ್ರಲ್ಲಿ ಆಶ್ಚರ್ಯವಿಲ್ಲ.












Click it and Unblock the Notifications