ಚಿಕ್ಕಮಗಳೂರಿನಲ್ಲಿ ದಾಖಲೆಯ ಮಳೆ, ವರುಣಾರ್ಭಟಕ್ಕೆ ಬಯಲುಸೀಮೆ ಜನರು ತತ್ತರ
ಚಿಕ್ಕಮಗಳೂರು, ಸೆಪ್ಟೆಂಬರ್ 5: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಇತಿಹಾಸದಲ್ಲೇ ದಾಖಲೆಯ ಮಳೆ ಸುರಿದಿದೆ. ಸಾರಗೋಡು ಗ್ರಾಮದಲ್ಲಿ 200 ಮಿಲಿ ಮೀಟರ್ ಮಳೆಯಾಗಿದ್ದು, ರಣರಕ್ಕಸ ಮಳೆಗೆ ಕಾಫಿನಾಡಿಗರು ಬೆಚ್ಚಿ ಬೆರಗಾಗಿದ್ದಾರೆ.
ಸಾರಗೋಡು ಗ್ರಾಮದಲ್ಲಿ ಒಂದೇ ಗಂಟೆಯಲ್ಲಿ ಹಿಂದೆಂದೂ ಕಾಣದ 200 ಮಿಲಿಮೀಟರ್ಗೂ ಅಧಿಕ ವರ್ಷಧಾರೆಯಾಗಿದೆ. ಸಾರಗೋಡು, ಹುಯಿಗೆರೆ ಸುತ್ತಮುತ್ತ ಸಹ ಕಳೆದ ರಾತ್ರಿ ಭಾರೀ ಮಳೆ ಸುರಿದಿದೆ. ರಸ್ತೆ ಮೇಲೆ ನದಿಯಂತೆ ಮಳೆ ನೀರು ಹರಿದಿದ್ದು, ಹಲವೆಡೆ ಮನೆಗಳಿಗೂ ನೀರು ನುಗ್ಗಿದ್ದು, ಕಾಂಪೌಂಡ್ಗಳು ಕುಸಿತಗೊಂಡಿವೆ. ದಾಖಲೆ ಪ್ರಮಾಣದ ಮಳೆ ಕಂಡು ಸ್ಥಳೀಯರು ಕಂಗಾಲಾಗಿದ್ದಾರೆ.
ಕಳಸಾಪುರ ಗ್ರಾಮದ ಹೃದಯ ಭಾಗದಲ್ಲೇ ಮಳೆನೀರಿನಿಂದ ನದಿ ಸೃಷ್ಟಿಯಾದಂತಾಗಿದೆ. ವರುಣನ ಆರ್ಭಟಕ್ಕೆ ಅರ್ಧಕರ್ಧ ಗ್ರಾಮವೇ ಮುಳುಗಡೆ ಆಗಿದೆ. ಕಳಸಾಪುರ ಗ್ರಾಮದಲ್ಲಿ ಕಳೆದ ರಾತ್ರಿ ವರುಣ ಅಬ್ಬರಿಸಿದ್ದಾನೆ. ಇದರಿಂದಾಗಿ ಗ್ರಾಮದ ಹಲವು ರಸ್ತೆ ಮನೆಗಳು ಜಲಾವೃತಗೊಂಡಿವೆ. ನೋಡ ನೋಡುತ್ತಿದ್ದಂತೆ ಗ್ರಾಮದ ರಸ್ತೆಗಳ ಮೇಲೆ ಮಳೆ ನೀರು ನದಿಯಂತಾಗಿದ್ದು, ಗ್ರಾಮ ಅಂಚಿನ ಶೆಟ್ಟಿಕೆರೆ ಕೋಡಿ ಬಿದ್ದ ಹಿನ್ನೆಲೆ ಈ ಅನಾಹುತ ಸಂಭವಿಸಿದೆ.

ಶೆಟ್ಟಿಕೆರೆ ನೀರು ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ಇದರಿಂದಾಗಿ ಕಳಸಾಪುರ ಗ್ರಾಮದಲ್ಲಿ ಆತಂಕ ಸೃಷ್ಟಿಯಾಗಿದೆ. ಪ್ರವಾಹ ಉಂಟಾಗಬಹುದೆಂದು ಸಾವಿರಾರು ಜನರು ಭೀತಿ ವ್ಯಕ್ತಪಡಿಸಿದ್ದಾರೆ. ಇನ್ನು ಮಳೆ ಬಿಡುವು ಕೊಟ್ಟರು ಕೆರೆಯಿಂದ ಹರಿದ ನೀರು ಹರಿಯುತ್ತಿರುವ ನೀರಿನಲ್ಲಿ ಕೋಡಿ ನೀರಿನಲ್ಲಿ ದೊಡ್ಡ ದೊಡ್ಡ ಮರದ ದಿಮ್ಮಿಗಳು ಕೊಚ್ಚಿ ಹೋಗುತ್ತಿರುವುದು ಮಳೆಯ ಆರ್ಭಟಕ್ಕೆ ಸಾಕ್ಷಿಯಾಗಿದೆ.
ಸೋಮವಾರವೂ ಭಾರೀ ಮಳೆ
ಮೂಡಿಗೆರೆ ತಾಲ್ಲೂಕು ಮತ್ತು ತರೀಕೆರೆ ತಾಲ್ಲೂಕಿನಲ್ಲಿ ಸೋಮವಾರವೂ ಕೂಡ ಭಾರಿ ಮಳೆಯಾಗಿದ್ದು, 4 ಮನೆಗಳಿಗೆ ಹಾನಿಯಾಗಿದೆ. ಮೂಡಿಗೆರೆ ತಾಲ್ಲೂಕು ಫಲ್ಗುಣಿ, ಹಳೆಕೋಟೆ, ಹೆಸ್ಗಲ್ ತರೀಕೆರೆ ತಾಲ್ಲೂಕು ಅರುಣಳ್ ಗ್ರಾಮದಲ್ಲಿ ಮನೆ ಕುಸಿದಿವೆ. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದು ಮನೆಯ ಕಂಪೌಂಡ್ಗಳು ಕುಸಿದು ಬಿದ್ದಿವೆ.
ಎಡಬಿಡದೆ ಸುರಿದ ಮಳೆಯಿಂದ ಬಾಣಾವರ, ಚಿಕ್ಕಮಗಳೂರು ಮಾರ್ಗದ ಚಿಕ್ಕದೇವನೂರು ಅಂಡರ್ ಪಾಸ್ ಸಂಪೂರ್ಣವಾಗಿ ಮುಳುಗಿದ್ದು ಬಸ್ ಸಂಚಾರದಲ್ಲಿ ವ್ಯತ್ಯಯವಾಗಿತ್ತು. ದೇವನೂರು ಕೆರೆಕೋಡಿಯಿಂದ ಭಾರೀ ಪ್ರಮಾಣದ ನೀರು ಹರಿದ ಪರಿಣಾಮ ಚಿಕ್ಕದೇವನೂರು ಗ್ರಾಮದ ಕೆಲವು ಮನೆಗಳಿಗೆ ನೀರು ನುಗ್ಗಿದ್ದು, ಕುಟುಂಬಸ್ಥರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.

ರಾಜ್ಯಹೆದ್ದಾರಿ ಜಲಾವೃತ
ಧಾರಾಕಾರ ಮಳೆಯಿಂದ ರಾಜ್ಯ ಹೆದ್ಧಾರಿ ಜಲಾವೃತವಾಗಿದೆ. ಈಶ್ವರಹಳ್ಳಿ ಕೆರೆ ಕೋಡಿ ಬಿದ್ದು ಅವಾಂತರ ಸೃಷ್ಟಿ ಯಾಗಿದೆ. ಇನ್ನು ಚಿಕ್ಕಮಗಳೂರು-ಜಾವಗಲ್ ರಸ್ತೆ ಜಲಾವೃತವಾಗಿ ರಸ್ತೆಯ ಮೇಲೆ ಕೆರೆಯ ಕೋಡಿ ನೀರು ಹರಿಯುತ್ತಿದ್ದು, ವಾಹನ ಸವಾರರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿ ಜೀವಭಯದಲ್ಲೇ ಓಡಾಡುತ್ತಿದ್ದಾರೆ.
ಈಶ್ವರಹಳ್ಳಿ ಕೆರೆ ಕೋಡಿ ಬಿದ್ದ ಪರಿಣಾಮ ಈಶ್ವರಹಳ್ಳಿ ಗ್ರಾಮದೇವತೆಗೆ ಜಲದಿಗ್ಬಂಧನ ಎದುರಾಗಿದೆ. ಗ್ರಾಮದ ಹೊಟಗಟ್ಟಮ್ಮ ದೇವಸ್ಥಾನಕ್ಕೆ ನೀರು ನುಗ್ಗಿದೆ. ದೇವಾಲಯದ ಒಳಭಾಗದಲ್ಲಿ ಎರಡು ಅಡಿ ನೀರು ನಿಂತಿದೆ. ದೇವಾಲಯ ಜಲಾವೃತದ ನಡುವೆಯೂ ದೇವರಿಗೆ ಗ್ರಾಮಸ್ಥರು ವಿಶೇಷ ಪೂಜೆ ಸಲ್ಲಿಸಿದ್ದಾರೆ.












Click it and Unblock the Notifications