ಚಿಕ್ಕಮಗಳೂರಿನಲ್ಲಿ ಮುಂದುವರೆದ ಮಳೆ; ಎಲ್ಲೆಲ್ಲಿ ಎಷ್ಟು ಮಳೆ?
ಚಿಕ್ಕಮಗಳೂರು, ಸೆಪ್ಟೆಂಬರ್ 21: ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಮುಂದುವರೆದಿದೆ. ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಮಳೆಯಾಗುತ್ತಿದ್ದು, ಮೂಡಿಗೆರೆ, ಕೊಪ್ಪ, ಎನ್.ಆರ್. ಪುರ, ಶೃಂಗೇರಿ ತಾಲೂಕಿನಲ್ಲಿ ಅಧಿಕ ಮಳೆ ದಾಖಲಾಗಿದೆ.
ಕಳಸ, ಕುದುರೆಮುಖ, ಕೆರೆಕಟ್ಟೆ, ಕಿಗ್ಗಾ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ರಾತ್ರಿ ಇಡೀ ಸುರಿದ ಮಳೆಗೆ ತುಂಗಾ, ಭದ್ರಾ, ಹೇಮಾವತಿ ನದಿಗಳು ಅಪಾಯ ಮಟ್ಟದಲ್ಲಿ ತುಂಬಿ ಹರಿಯುತ್ತಿವೆ. ಧಾರಾಕಾರ ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಮಲೆನಾಡಿನ ಭಾಗದಲ್ಲಿ ಮತ್ತೆ ಧಾರಾಕಾರ ಮಳೆ: ಜನಜೀವನ ಸಂಪೂರ್ಣ ಅಸ್ತವ್ಯಸ್ತ
ಮಳೆಯಿಂದಾಗಿ ಚಾರ್ಮಾಡಿ ಘಾಟ್ ನಲ್ಲಿ ಅಲ್ಲಲ್ಲಿ ಸಣ್ಣ ಪ್ರಮಾಣದಲ್ಲಿ ಗುಡ್ಡ ಕುಸಿತ ಸಂಭವಿಸಿದೆ. ನಿನ್ನೆ ಸುರಿದ ಮಳೆಗೆ ಕುಸಿದಿದ್ದ ಮಣ್ಣನ್ನು ಜಿಲ್ಲಾಡಳಿತ ತೆರವುಗೊಳಿಸುವ ಕಾರ್ಯ ನಡೆಸುತ್ತಿದೆ. ವಾಹನ ಸಂಚಾರಕ್ಕೆ ಸ್ಥಳೀಯರು ಅನುವು ಮಾಡಿಕೊಡುತ್ತಿದ್ದಾರೆ. ಮಳೆ ನಡುವೆಯೂ ಚಾರ್ಮಾಡಿ ಘಾಟಿಯಲ್ಲಿ ಎಂದಿನಂತೆ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ.
ಜಿಲ್ಲೆಯಲ್ಲಿ ಎಲ್ಲಿ, ಎಷ್ಟು ಪ್ರಮಾಣದ ಮಳೆಯಾಗಿದೆ?: ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ, ಕಡೂರಿನಲ್ಲಿ 22 ಮಿ.ಮೀ, ಕೊಪ್ಪದಲ್ಲಿ 96.8 ಮಿ.ಮೀ, ಮೂಡಿಗೆರೆಯಲ್ಲಿ 37.4, ಎನ್.ಆರ್.ಪುರದಲ್ಲಿ 45.8 ಮಿ.ಮೀ, ಶೃಂಗೇರಿ 109 ಮಿ.ಮೀ, ತರೀಕೆರೆ 23.2 ಮಿ.ಮೀ, ಅಜ್ಜಂಪುರದಲ್ಲಿ 22 ಮಿ.ಮೀ ಮಳೆಯಾಗಿರುವುದಾಗಿ ದಾಖಲಾಗಿದೆ.
Recommended Video