ಕಾಫಿನಾಡಲ್ಲಿ ಮೈಸೂರು ರಾಜ ಪರಂಪರೆಯ ಸಾಂಸ್ಕೃತಿಕ ವೈಭವ ಗೊಂಬೆಗಳ ಮೂಲಕ ಅನಾವರಣ
ಚಿಕ್ಕಮಗಳೂರು, ಅಕ್ಟೋಬರ್, 18: ಶರನ್ನವರಾತ್ರಿ ಹಬ್ಬದ ಅಂಗವಾಗಿ ಚಿಕ್ಕಮಗಳೂರು ನಗರದ ಪುರೋಹಿತ ಅಶ್ವಥ್ಥನಾರಾಯಣಾಚಾರ್ಯ ವಸಂತಾಚಾರ್ಯ ಜೋಶಿ ಅವರ ಮನೆಯಲ್ಲಿ ಪ್ರತಿಷ್ಠಾಪಿಸಿರುವ ಸಾಂಪ್ರದಾಯಿಕ ಪಟ್ಟದ ಗೊಂಬೆಗಳು ಮೈಸೂರು ರಾಜ ಪರಂಪರೆಯ ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ವೈಭವವನ್ನು ಅನಾವರಣಗೊಳಿಸಿವೆ.
ಯಧುವಂಶಸ್ಥರ ಪರಂಪರೆಯ ಕೆಂಪು ಚಂದನದ ಮರದಲ್ಲಿ ಕೆತ್ತಲಾದ ಪಟ್ಟದ ಗೊಂಬೆಗಳು, ಮೈಸೂರು ಮಹಾರಾಜರ ದಸರಾ ದರ್ಬಾರ್, ಜಂಬೂಸವಾರಿ, ಅರಮನೆ, ಅರಸರ ಸಾಂಪ್ರದಾಯಿಕ ಆಚರಣೆಗಳ ವೈಭವವನ್ನು ಸಾರುತ್ತಿವೆ. ಭಾರತೀಯ ಹಬ್ಬ ಹರಿದಿನಗಳ ಆಚರಣೆಗಳನ್ನು ಸಂಪ್ರದಾಯಗಳನ್ನು ತೆರೆದಿಡುವ ನೂರಾರು ಗೊಂಬೆಗಳು ನಾಡಿನ ಸಂಸ್ಕೃತಿಯನ್ನು ಬಿಂಬಿಸುತ್ತಿವೆ.

ಪಟ್ಟದ ಗೊಂಬೆಗಳ ಕುರಿತು ವಿವರಿಸಿದ ಅನುರಾಧಾ ಜೋಶಿ, ತಮ್ಮ ತವರು ಮನೆಯ ನವರಾತ್ರಿ ಹಬ್ಬದ ಸಂಪ್ರದಾಯವನ್ನು ತಾವು ಮನೆಯವರ ಪ್ರೋತ್ಸಾಹ ಮತ್ತು ಸಹಕಾರದಿಂದಾಗಿ ಮುಂದೂವರೆಸಿಕೊಂಡು ಬರುತ್ತಿದ್ದು, ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಮುಂದಿನ ಪೀಳಿಗೆಗೆ ಉಳಿಸುವ ಸಣ್ಣ ಪ್ರಯತ್ನ ಇದಾಗಿದೆ ಎಂದು ತಿಳಿಸಿದರು.
ಪುರೋಹಿತ ಅಶ್ವಥ್ಥನಾರಾಯಣಾಚಾರ್ಯ ವಸಂತಾಚಾರ್ಯ ಜೋಶಿ ಮಾತನಾಡಿ, ಆಧುನಿಕತೆಯ ಭರದಲ್ಲಿ ನಮ್ಮ ಮಕ್ಕಳು ಮತ್ತು ಯುವ ಜನತೆ ನಮ್ಮ ಸಂಸ್ಕೃತಿ, ಸಂಪ್ರದಾಯ, ಆಚಾರ, ವಿಚಾರ, ಆಚರಣೆಗಳನ್ನು ಮರೆಯುತ್ತಿದ್ದಾರೆ. ಆದ್ದರಿಂದ ಅವುಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಈ ಪಟ್ಟದ ಗೊಂಬೆಗಳನ್ನು ಪ್ರತಿಷ್ಠಾಪಿಸಲಾಗಿದೆ ಎಂದು ಹೇಳಿದರು.
ಮೈಸೂರಿನಲ್ಲಿ ದಸರಾ ಸಂಭ್ರಮ
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮೂರನೇ ದಿನವೂ ದಸರಾ ಸಂಭ್ರಮ ಮನೆ ಮಾಡಿದೆ. ವಿಶೇಷವಾಗಿ ಮಹಿಳಾ ದಸರಾದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಂಭ್ರಮಿಸಿದರು.
ಮೈಸೂರು ನಗರದ ಜೆ.ಕೆ ಗ್ರೌಂಡ್ನಲ್ಲಿ ನಡೆದ ಮಹಿಳಾ ದಸರಾಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಚಾಲನೆ ನೀಡಿದರು. ಗಿಚ್ಚಿಗಿಲಿಗಿಲಿ ಖ್ಯಾತಿಯ ಚಂದ್ರಪ್ರಭ ಹಾಸ್ಯ ನಟ ಚಂದ್ರಪ್ರಭಾ ಕಾರ್ಯಕ್ರಮ ನಡೆಸಿಕೊಟ್ಟು ಸಭಿಕರು ನಗೆಕಡಲಲ್ಲಿ ತೇಲುವಂತೆ ಮಾಡಿದರು.
ಮಾತನಾಡುವ ಗೊಂಬೆ ಖ್ಯಾತಿಯ ಸುಮಾ ರಾಜ್ಕುಮಾರ್ ಜಾದೂ ಹಾಗೂ ಮಾತನಾಡುವ ಗೊಂಬೆ ಕಾರ್ಯಕ್ರಮ ನಡೆಸಿಕೊಟ್ಟರು. ಅಂಗನವಾಡಿ ಕಾರ್ಯಕರ್ತೆಯರು ನಡೆಸಿಕೊಟ್ಟ ಸಮೂಹ ನೃತ್ಯರೂಪಕ ಉತ್ತಮವಾಗಿ ಮೂಡಿ ಬಂತು. ಜೊತೆಗೆ ಭರತನಾಟ್ಯ ಹಾಗೂ ಇತರೆ ಸಾಂಸ್ಕೃತಿಕ ಕಾರ್ಯಕ್ರಮ ಆಕರ್ಷವಾಗಿದ್ದವು.
ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ''ಸರಕಾರವು ಗರ್ಭಿಣಿಯರಿಗೆ ಪೌಷ್ಟಿಕ ಆಹಾರಗಳನ್ನು ನೀಡುತ್ತಿದ್ದು, ಇದನ್ನು ಬಳಸಿಕೊಂಡು ಆರೋಗ್ಯವಂತರಾಗಿರಬೇಕು. ಅನ್ನಭಾಗ್ಯ, ಸೀ ಶಕ್ತಿ, ಗೃಹಲಕ್ಷ್ಮಿ ಯೋಜನೆಗಳ ಮುಖಾಂತರ ಮಹಿಳೆಯರ ಸಬಲೀಕರಣಕ್ಕೆ ಶ್ರಮಿಸುತ್ತಿದೆ.
ಕ್ರೀಡೆ, ಕಲೆ ಸಾಹಿತ್ಯ ಎಲ್ಲಾ ಕ್ಷೇತ್ರಗಳನ್ನು ಒಳಗೊಂಡಂತೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆದರ್ಶದೊಂದಿಗೆ ಸಂವಿಧಾನದಡಿ ಮೈಸೂರು ದಸರಾವನ್ನು ಆಚರಿಸುತ್ತಿದ್ದೇವೆ. ಮಹಿಳೆಯರು ಸಮಾಜದ ಬೆನ್ನೆಲುಬು ಇದ್ದಂತೆ. ಕುಟುಂಬ ಮತ್ತು ಸಮಾಜವನ್ನು ಸರಿ ದಾರಿಯಲ್ಲಿ ಸಾಮಾಜಿಕ ಅಂಶಗಳಾದ ಆರ್ಥಿಕ, ಶೈಕ್ಷಣಿಕ ಆರೋಗ್ಯ ಎಲ್ಲಾ ಕ್ಷೇತ್ರದಗಳಲ್ಲಿ ಮಹಿಳೆಯರು ಮುಂದೆ ಬಂದು ಸರ್ವತೋಮುಖ ಅಭಿವೃದ್ಧಿಯತ್ತ ಮುಖ ಮಾಡಬೇಕು,'' ಎಂದು ತಿಳಿಸಿದರು.
ದಸರಾ ಮಹೋತ್ಸವದ ಪ್ರಯುಕ್ತ ನಡೆದ ಮಹಿಳಾ ದಸರಾದಲ್ಲಿ ಕ್ರೀಡೋತ್ಸಾಹ, ನೃತ್ಯದ ಸೊಬಗು ಕಾಣಿಸಿತು. ಮುಂಜಾನೆಯಿಂದಲೇ ನಾನಾ ಜಾನಪದ ಗೀತೆಗಳಿಗೆ ಹೆಜ್ಜೆ ಹಾಕುವುದರೊಂದಿಗೆ ಬಿಂದಿಗೆ ಹೊತ್ತಿಕೊಂಡು ನಡೆದರು. ಹಗ್ಗ ಜಗ್ಗಾಟ ನಡೆಸಿ ತಮ್ಮ ಶಕ್ತಿ ಪ್ರದರ್ಶನ ಮಾಡಿದರು. ಒಂದೇ ನಿಮಿಷದ ಸ್ಪರ್ಧೆಯಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶನ ಮಾಡಿದರು.
ಮಹಿಳಾ ದಸರಾ ಪ್ರಯುಕ್ತ ನಡೆದ ನಾನಾ ಸ್ಪರ್ಧೆಯಲ್ಲಿ ನೂರಾರು ವನಿತೆಯರು ಸಂಜೆವರೆಗೂ ಬಿಂದಿಗೆ ಎತ್ತಿಕೊಂಡು ವೇಗವಾಗಿ ನಡೆಯುವುದು, ಹಗ್ಗ ಜಗ್ಗಾಟ, ಮ್ಯೂಸಿಕಲ್ ಚೇರ್, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಬಿಂದಿಗೆ ಒಡೆಯುವುದು, ಒನ್ ಮಿನಿಟ್ ಗೇಮ್ ಸೇರಿದಂತೆ ನಾನಾ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದುಘಿ ವಿಶೇಷವಾಗಿತ್ತುಘಿ. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು.
ಗಮನ ಸೆಳೆದ ವಸ್ತು ಪ್ರದರ್ಶನ
ಚಾಮುಂಡೇಶ್ವರಿ ಒಕ್ಕೂಟ, ಸಿರಿಧಾನ್ಯ ಮಾರಾಟ ಕೇಂದ್ರ, ಕೊಲ್ಲಾಪುರದಮ್ಮ ಸೀಶಕ್ತಿ ಸ್ವಹಾಯ ಸಂಘ, ಅನ್ನಪೂರ್ಣೇಶ್ವರಿ ಸೀಶಕ್ತಿ ಕೇಂದ್ರ ಸೇರಿದಂತೆ 52ಕ್ಕೂ ಹೆಚ್ಚು ಮಳಿಗೆಗಳು ತಲೆ ಎತ್ತಿದ್ದವು. ಸೀರೆ ಮಾರಾಟ, ಮಹಿಳಾ ಆಭರಣಗಳು, ಚುರುಮುರಿ, ತಿಂಡಿತಿನಿಸುಗಳು, ಬಟ್ಟೆ, ಹೊಸ ಪ್ರಾಡೆಕ್ಟ್, ಪೇಂಟಿಂಗ್ಸ್ ಸೇರಿದಂತೆ ಸ್ತ್ರೀ ಸ್ವಾವಲಂಬನೆ ಸಾರುವ ಮಳಿಗೆಗಳು ಆಕರ್ಷಕವಾಗಿದ್ದವು. ವಸ್ತು ಪ್ರದರ್ಶನ ಮಾರಾಟ ಮೇಳವನ್ನು ಹಾಗೂ ಮಳಿಗೆಗಳನ್ನು ಉದ್ಘಾಟಿಸಿದ ಸಚಿವರು ಎಲ್ಲಾ ಮಳಿಗೆಗಳಿಗೂ ಭೇಟಿ ನೀಡಿ ಮಹಿಳೆಯರಿಗೆ ಶುಭಾಶಯ ತಿಳಿಸಿದರು.
ಮೇಯರ್ ಶಿವಕುಮಾರ್, ಉಪ ಮೇಯರ್ ಡಾ.ರೂಪಾ, ಸದಸ್ಯರಾದ ಪ್ರಮೀಳಾ ಭರತ್, ಮಹಿಳಾ ಮತ್ತು ಮಕ್ಕಳ ದಸರಾ ಉಪ ಸಮಿತಿ ಅಧ್ಯಕ್ಷೆ ಸುಧಾ ಮಹದೇವಯ್ಯ, ಮಹಿಳಾ ಮತ್ತು ಮಕ್ಕಳ ದಸರಾ ಉಪ ಸಮಿತಿಯ ವಿಶೇಷಾಧಿಕಾರಿ ರುಚಿ ಬಿಂದಾಲ್ ಉಪಸ್ಥಿತರಿದ್ದರು.












Click it and Unblock the Notifications