ಚಿಕ್ಕಮಗಳೂರಿನಲ್ಲಿ ದುರಂತ: ಕೆರೆಯಲ್ಲಿ ಮುಳುಗಿ ತಾಯಿ-ಮಗಳು ಸಾವು
ಚಿಕ್ಕಮಗಳೂರು, ಡಿಸೆಂಬರ್ 21: ಕೆರೆಯಲ್ಲಿ ಮುಳುಗಿ ತಾಯಿ ಮಗಳು ಸಾವನಪ್ಪಿರುವ ದಾರುಣ ಘಟನೆ ಚಿಕ್ಕಮಗಳೂರು ತಾಲೂಕಿನ ಬೆಳವಾಡಿ ಸಮೀಪದ ವಡ್ಡರಹಳ್ಳಿ ಗ್ರಾಮದಲ್ಲಿ ನಡೆದಿದೆ. ವಡ್ಡರಹಳ್ಳಿ ಗ್ರಾಮದ ಶೋಭ(40), ಮಗಳು ವರ್ಷಾ(8) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ.
ಮೃತ ಶೋಭ ತನ್ನ ಇಬ್ಬರು ಮಕ್ಕಳಾದ ವರ್ಷ ಹಾಗೂ ಚೇತನ್ ಅವರೊಂದಿಗೆ ದನ ಮೇಯಿಸಲು ಹೋಗಿದ್ದು, ಈ ವೇಳೆ ಕೆರೆ ದಾಟುವಾಗ ಅವಘಡ ಸಂಭವಿಸಿದೆ. ಮೊದಲು ಮಗಳು ವರ್ಷ ಕೆರೆ ನೀರಿನಲ್ಲಿ ಸಿಲುಕಿಕೊಂಡಿದ್ದಾಳೆ. ಈ ವೇಳೆ ತಾಯಿ ಶೋಭ ಮಗಳನ್ನು ರಕ್ಷಿಸಲು ಮುಂದಾಗಿದ್ದಾರೆ. ಆದರೆ ದುರಾದೃಷ್ಟವಶಾತ್ ತಾಯಿ ಮಗಳು ಇಬ್ಬರೂ ಕರೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.
ಬಿಜೆಪಿ ವಿಪಕ್ಷ ನಾಯಕರ ಧ್ವನಿ ಅಡಗಿಸುತ್ತಿದೆ- ಕಾಂಗ್ರೆಸ್ ಮುಖಂಡ ಅಂಶುಮಂತ್
ಈ ವೇಳೆ ಜೊಗೆಗಿದ್ದ ಮಗ ಚೇತನ್ ಅಪಾಯದಿಂದ ಪಾರಾಗಿದ್ದಾನೆ. ಕೆರೆಯಲ್ಲಿ ನೀರು ಹೆಚ್ಚಿದ್ದ ಭಾಗದಲ್ಲೇ ಮಗಳು ಸಿಲುಕಿಕೊಂಡಿದ್ದು, ಮಗಳನ್ನು ರಕ್ಷಣೆ ಮಾಡಲು ಹೋಗಿ ತಾಯಿಯೂ ನೀರಿನಲ್ಲಿ ಸಿಲುಕಿಕೊಂಡಿದ್ದರಿಂದ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಘಟನೆ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರೀತಿಗೆ ವಿರೋಧ: ಪ್ರೇಮಿಗಳು ಸಾವಿಗೆ ಶರಣು
ತಮ್ಮ ಪ್ರೀತಿಗೆ ಹೆತ್ತವರು ವಿರೋಧ ವ್ಯಕ್ತಪಡಿಸಿರುವುದಕ್ಕೆ ಮನನೊಂದ ಪ್ರೇಮಿಗಳು ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಆಲ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಆಲ್ದೂರು ಹೋಬಳಿ ವ್ಯಾಪ್ತಿಯ ಕಲ್ಲುಗುಡ್ಡೆಯ ದೇವಗಿರಿ ಎಸ್ಟೇಟ್ನಲ್ಲಿ ಕೂಲಿ ಕಾರ್ಮಿಕನಾಗಿದ್ದ ದರ್ಶನ್(21) ಮತ್ತು ಸಕಲೇಶಪುರ ತಾಲೂಕಿನ ಹಾನುಬಾಳು ನಿವಾಸಿ ಪೂರ್ವಿಕಾ (19) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ.
ಮಂಗಳೂರಿನ ಮೀನು ಕಾರ್ಖಾನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಪೂರ್ವಿಕಾ ಹಾಗೂ ದೇವಗಿರಿ ಎಸ್ಟೇಟ್ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ದರ್ಶನ್ ಪರಸ್ಪರ ಪ್ರೀತಿಸುತ್ತಿದ್ದರು. ಇವರ ಪ್ರೀತಿಗೆ ಎರಡು ಮನೆಗಳಲ್ಲಿ ವಿರೋಧ ವ್ಯಕ್ತವಾಗಿತ್ತು ಎನ್ನಲಾಗಿದೆ.
ತಮ್ಮ ಪ್ರೇಮ ವಿವಾಹಕ್ಕೆ ಮನೆಯಲ್ಲಿ ಒಪ್ಪದ ಕಾರಣ ಮನನೊಂದ ದರ್ಶನ್ ಮತ್ತು ಪೂರ್ವಿಕ ಮಂಗಳವಾರ ಸಂಜೆ ಆಲ್ದೂರು ಹೋಬಳಿಯ ಗಲ್ಲನ್ ಪೇಟೆ ಸಮೀಪದಲ್ಲಿರುವ ಸತ್ತಿಹಳ್ಳಿಯ ಜಯಪ್ಪ ಎಂಬುವರ ಪಾಳುಬಿದ್ದ ಜಮೀನಿನಲ್ಲಿದ್ದ ಹಲಸಿನ ಮರಕ್ಕೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಆಲ್ದೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರೇಮಿಗಳ ಸಾವಿನ ಹಿಂದಿನ ನಿಖರ ಕಾರಣ ಹಾಗೂ ಹೆಚ್ಚಿನ ಮಾಹಿತಿ ತನಿಖೆಯಿಂದ ಹೊರಬರಬೇಕಿದೆ.