ಶಕ್ತಿ ಯೋಜನೆ ಎಫೆಕ್ಟ್: ಕಾಫಿನಾಡಲ್ಲಿ ಖಾಸಗಿ ಬಸ್ ಹತ್ತೋರಿಲ್ಲ, ಬೀದಿಗೆ ಬೀಳುತ್ತಿವೆ ಹತ್ತಾರು ಕುಟುಂಬಗಳು
ಚಿಕ್ಕಮಗಳೂರು, ಆಗಸ್ಟ್ 04: ಕಾಂಗ್ರೆಸ್ ಸರ್ಕಾರದ ಶಕ್ತಿ ಯೋಜನೆಯಿಂದ ರಾಜ್ಯಾದ್ಯಂತ ಓಡಾಡಲು ಶಕ್ತಿ ಬಂದಿರುವ ರಾಜ್ಯದ ಮಹಿಳೆಯರು ಸರ್ಕಾರಿ ಬಸ್ಗಳಲ್ಲಿ ನಾ ಮುಂದು ತಾ ಮುಂದು ಎಂದು ಹತ್ತುತ್ತಿದ್ದಾರೆ. ಇದರಿಂದ ಸರ್ಕಾರಿ ಬಸ್ಗಳು ತುಳುಕುತ್ತಿವೆ.
ಆದರೆ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಖಾಸಗಿ ಬಸ್ಗಳು ಬೀಕೋ ಎನ್ನುತ್ತಿದ್ದು, ಪ್ರೈವೇಟ್ ಬಸ್ ಮೆಟ್ಟಿಲು ಹತ್ತೋರಿಲ್ಲ ಎನ್ನುವಂತಾಗಿದೆ.

ಹಳ್ಳಿಯಿಂದ ಹೆದ್ದಾರಿವರೆಗೆ ಆಟೋ-ಬೈಕ್ಗಳಲ್ಲಿ ಬಂದು ಜನರು ಸರ್ಕಾರಿ ಬಸ್ ಹತ್ತುತ್ತಿದ್ದಾರೆ. ಹಳ್ಳಿಗಳಿಗೆ ಖಾಸಗಿ ಬಸ್ಗಳು ಹೋದರು ಸಹ ಜನ ಹತ್ತುತ್ತಿಲ್ಲ. 3,4,5 ಜನ ಹಾಕಿಕೊಂಡು ಗುಡ್ಡಗಾಡಲ್ಲಿ ಬಸ್ ಓಡಿಸಿದರೆ ಡೀಸೆಲ್ ಹಾಕಿಸೋಕು ಹಣ ಸಾಲಲ್ಲ ಎಂದು ಶಕ್ತಿ ಯೋಜನೆ ಆರಂಭವಾದ ಎರಡೇ ತಿಂಗಳಿಗೆ ಜಿಲ್ಲೆಯ 340ರಲ್ಲಿ 20 ಖಾಸಗಿ ಬಸ್ಗಳು ಸಂಪೂರ್ಣವಾಗಿ ಸಂಚಾರ ನಿಲ್ಲಿಸಿವೆ.
ಹಲವು ದಶಕಗಳಿಂದ ಮಲೆನಾಡ ಪ್ರಯಾಣಿಕರನ್ನೇ ನಂಬಿ ಬದುಕುತ್ತಿದ್ದ ಖಾಸಗಿ ಬಸ್ ಮಾಲೀಕರು ಹಾಗೂ ಸಿಬ್ಬಂದಿ ಬಹುತೇಕ ಬೀದಿಗೆ ಬಿದ್ದಂತಾಗಿದೆ. ಹಾಗಾಗಿ, ಖಾಸಗಿ ಬಸ್ ಮಾಲೀಕರು ರಾಜ್ಯ ಸರ್ಕಾರ ನಮಗೂ ಅನುಕೂಲ ಮಾಡಿಕೊಡಬೇಕು. ಇಲ್ಲವಾದರೆ ಬಸ್ ನಿರ್ವಹಣೆ ಕಷ್ಟವಾಗಲಿದ್ದು, ಎಲ್ಲಾ ಬಸ್ಗಳನ್ನೂ ನಿಲ್ಲಿಸಬೇಕಾದ ಸ್ಥಿತಿ ಬರಲಿದೆ ಎಂದು ಅಸಹಾಯಕತೆ ಹೊರಹಾಕಿದ್ದಾರೆ.
ಬಸ್ ನಿರ್ವಹಣೆ, ಡೀಸೆಲ್, ಕಾರ್ಮಿಕರ ಸಂಬಳ ಒಂದೆಡೆಯಾದರೆ ಖಾಸಗಿ ಬಸ್ ಅವರು ಮೂರು ತಿಂಗಳಿಗೊಮ್ಮೆ 48 ಸಾವಿರ ಟ್ಯಾಕ್ಸ್ ಕಟ್ಟಬೇಕು. ಎಲ್ಲಿಂದ ದುಡ್ಡು ತರೋದು ಎಂದು ಮಾಲೀಕರು ಕೂಡ ಅತಂತ್ರವಾಗಿದ್ದಾರೆ. ಸರ್ಕಾರಕ್ಕೆ ಎಷ್ಟೇ ಮನವಿ ಮಾಡಿದರೂ ಸ್ಪಂದಿಸದ ಸರ್ಕಾರದ ನಿರ್ಧಾರಕ್ಕೆ ರೋಸಿ ಹೋಗಿರೋ ಖಾಸಗಿ ಬಸ್ ಮಾಲೀಕರು ಎರಡೇ ತಿಂಗಳಲ್ಲಿ ಇಪ್ಪತ್ತಕ್ಕೂ ಹೆಚ್ಚು ಖಾಸಗಿ ಬಸ್ಸುಗಳ ದಾಖಲಾತಿಗಳನ್ನು ಸಾರಿಗೆ ನಿಗಮಕ್ಕೆ ಹಸ್ತಾಂತರಿಸಿದ್ದಾರೆ.

ಮುಂದಿನ ತಿಂಗಳು ಇನ್ನು 60ಕ್ಕೂ ಹೆಚ್ಚು ಬಸ್ಸುಗಳ ಖಾಸಗಿ ದಾಖಲೆಗಳನ್ನು ಹಸ್ತಾಂತರಿಸಲು ನಿರ್ಧರಿಸಲಾಗಿದೆ. ಖಾಸಗಿ ಬಸ್ಗಳನ್ನೇ ನಂಬಿದ್ದ ಹಲವು ಕುಟುಂಬಗಳು ಬೀದಿಗೆ ಬೀಳುತ್ತಿವೆ. ನಾವು 20 ವರ್ಷಗಳಿಂದ ಬಸ್ಅನ್ನೇ ನಂಬಿ ಬದುಕುತ್ತಿರುವುದು. ನಮಗೆ ಬೇರೆ ಕೆಲಸ ಬರಲ್ಲ. ಈಗ ಬೇರೆ ಯಾವ ಕೆಲಸ ಮಾಡೋದು. ಮಾಲೀಕರು ಕೂಡ ಹಣವನ್ನು ಎಲ್ಲಿಂದ ತರ್ತಾರೆ ಎನ್ನುತ್ತಿರುವ ಕಾರ್ಮಿಕರ ಬದುಕು ಅಡ್ಡಕತ್ತರಿಗೆ ಸಿಕ್ಕಂತಾಗಿದೆ. ಪಂಚ ಗ್ಯಾರಂಟಿಗಳಿಗೆ ಐದು ವರ್ಷ ವಾರಂಟಿ ಕೊಟ್ಟಿರುವ ಸರ್ಕಾರ ಕೊಟ್ಟ ಮಾತು ಉಳಿಸಿಕೊಳ್ಳುವ ಬರದಲ್ಲಿ ಸಾವಿರಾರು ಕುಟುಂಬಗಳು ಬೀದಿಗೆ ಬರುವುದಕ್ಕೆ ಕಾರಣವಾಗುತ್ತಿದೆ.
ಒಟ್ಟಾರೆ, ಒಂದೆಡೆ ಸರ್ಕಾರದ ಶಕ್ತಿ ಯೋಜನೆಯಿಂದ ಅದೆಷ್ಟೋ ಮಹಿಳಾ ಪ್ರಯಾಣಿಕರಿಗೆ ಅನುಕೂಲವಾಗುತ್ತಿದೆ. ಆದರೆ ಖಾಸಗಿ ಬಸ್ ನಂಬಿಕೊಂಡಿದ್ದ ಮಾಲೀಕರು, ಕಾರ್ಮಿಕರು ಬೀದಿಗೆ ಬೀಳುತ್ತಿರುವುದು ದುರಂತ. ಉಚಿತಗಳ ಸರ್ಕಾರದ ಯೋಜನೆಗಳು ಕೈತುಂಬ ಕೆಲಸ ಮಾಡ್ಕೊಂಡಿದ್ದ ಕಾರ್ಮಿಕರಿಗೆ ನಿರುದ್ಯೋಗದ ಭಾಗ್ಯವನ್ನ ಧಾರೆ ಎರೆಯುತ್ತಿದೆ. ಒಂದು ವೇಳೆ, ಸರ್ಕಾರ ಖಾಸಗಿ ಬಸ್ನ ಉಳಿವಿಗೆ ದಾರಿ ತೋರಿಸದಿದ್ದರೆ ಎಲ್ಲಾ ಬಸ್ಗಳು ನಿಲ್ಲುವುದು ಗ್ಯಾರಂಟಿ. ಆಗ ಉದ್ಯೋಗ ಕಳೆದುಕೊಂಡು ಬೀದಿಗೆ ಬಿದ್ದ ಕುಟುಂಬಗಳ ಶಾಪ ಸರ್ಕಾರಕ್ಕೆ ತಟ್ಟೋದು ಗ್ಯಾರಂಟಿಯಾಗಿದೆ.












Click it and Unblock the Notifications