ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ನನ್ನ ಸಹಕಾರವಿಲ್ಲ: ಸಿ.ಟಿ.ರವಿ
ಚಿಕ್ಕಮಗಳೂರು, ಜನವರಿ 09: ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷರನ್ನಾಗಿ ಕಲ್ಕುಳಿ ವಿಠ್ಠಲ ಹೆಗ್ಡೆ ಅವರನ್ನು ಆಯ್ಕೆ ಮಾಡಿದ್ದಕ್ಕೆ ಹಲವು ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಪ್ರತಿಕ್ರಿಯೆ ನೀಡಿದ್ದಾರೆ.
"ನಮಗೆ ನಮ್ಮ ದೇಹದಲ್ಲಿ ಎಡಗೈ, ಬಲಗೈ ಹೇಗೆ ಒಂದೆಯೋ ಅದೇ ರೀತಿ ಎಡಪಂಥೀಯರಾದರೇನು, ಬಲಪಂಥೀಯರಾದರೇನು ನಮಗೆ ಎಲ್ಲರೂ ಭಾರತೀಯರೆ" ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಹೇಳಿದರು.
ಜಿಲ್ಲಾ ಸಾಹಿತ್ಯ ಸಮ್ಮೇಳಾಧ್ಯಕ್ಷ ವಿವಾದ ಕುರಿತು ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಚಿವ ಸಿ.ಟಿ.ರವಿ ""ಈ ಹಿಂದೆ ಎಸ್.ಜಿ.ಸಿದ್ದರಾಮಯ್ಯ, ಅವರೇನು ಬಲಪಂಥೀಯರಲ್ಲ ಆದರೂ ಅವರನ್ನು ನಾವೇ ಮೆರವಣಿಗೆ ಮಾಡಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಿದ್ದೇವೆ'' ಎಂದು ಹೇಳಿದರು.
ಅದೇ ರೀತಿ ಪುಟ್ಟಯ್ಯ ನನ್ನ ಸ್ನೇಹಿತ, ಅವರೂ ಬಲಪಂಥೀಯರಲ್ಲ, ನಮ್ಮ ಫಾಲೋವರ್ ಅಲ್ಲ, ನನ್ನ ಸಹಪಾಠಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿ, ನಾವೇ ಪೂರ್ಣ ಪ್ರಮಾಣದ ಸಹಕಾರ ಕೊಟ್ಟಿದ್ದೇವೆ. ನಮಗೆ ಯಾವುದೇ ಭೇದ, ಭಾವ ಇಲ್ಲ ಎಂದರು.

ಸಾಹಿತ್ಯ ಸಮ್ಮೇಳನ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಬೇಕು
ಈಗ ಜಿಲ್ಲಾ ಸಮ್ಮೇಳನಾಧ್ಯಕ್ಷ ವಿಠ್ಠಲ ಹೆಗ್ಡೆ ಅವರಿಗೆ 2018 ರಲ್ಲಿ ರಾಜ್ಯೋತ್ಸವ ಪ್ರಶಸ್ತಿಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಅವರ ಟ್ರ್ಯಾಕ್ ಕೊಟ್ಟಿತ್ತು, ಹೀಗಾಗಿ ಅವತ್ತಿನ ಕಾಂಗ್ರೆಸ್ ಸರ್ಕಾರ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಟ್ಟಿರಲಿಲ್ಲ. ಅವತ್ತು ಬಿಜೆಪಿ ಸರ್ಕಾರವಿರಲಿಲ್ಲ ಎಂದು ತಿಳಿಸಿದರು.
ಸಾಹಿತ್ಯ ಸಮ್ಮೇಳನ ಸಾಂಸ್ಕೃತಿಕ ವಾತಾವರಣದಲ್ಲಿ ನಡೆಯಬೇಕು, ಎಲ್ಲರನ್ನು ಒಳಗೊಳ್ಳುವಂತಿರಬೇಕೆಂದು ಹೇಳಿದ್ದೇವೆ. ಸಮ್ಮೇಳಾಧ್ಯಕ್ಷರ ನುಡಿ ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡಬೇಕು ಅಂತವರನ್ನು ಅಧ್ಯಕ್ಷರನ್ನಾಗಿ ಮಾಡಿ ಎಂದು ಹೇಳಿದ್ದೇವೆ ಎಂದರು

ಸಮ್ಮೇಳನಕ್ಕೆ ನನ್ನ ಸಹಕಾರವಿಲ್ಲ: ಸಿ.ಟಿ.ರವಿ
ಟ್ರ್ಯಾಕ್ ರೆಕಾರ್ಡ್ ಸರಿಯಿಲ್ಲದವರು ಒಳ್ಳೆಯ ಸಂದೇಶ ಕೊಡುತ್ತಾರೆಂದು ನಿರೀಕ್ಷೆ ಮಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಹೀಗಾಗಿ ಹಲವು ಸಂಘಟನೆಗಳು ವಿಠ್ಠಲ ಹೆಗ್ಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಸಂಘರ್ಷ ಆಗಬಾರದು ಎನ್ನುವ ಉದ್ದೇಶದಿಂದ ಸಮ್ಮೇಳನ ಮುಂದೂಡಿ ಎಂದು ಹೇಳಿದ್ದೇನೆ ಎಂದರು.
""ನಾನೊಬ್ಬ ಜಿಲ್ಲಾ ಉಸ್ತುವಾರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಮಂತ್ರಿಯಾಗಿ ಜಿಲ್ಲೆಯಲ್ಲಿ ಸೌಹಾರ್ದಯುತವಾದ ಸಮ್ಮೇಳನ ನಡೆಯಬೇಕೆಂಬುದು ನನ್ನ ಅಪೇಕ್ಷೆ. ನಿಗದಿಪಡಿಸಿದ ದಿನಾಂಕದಂದೇ ಸಮ್ಮೇಳನ ಮಾಡುವುದಾದರೆ ನಾನು ಬರೋದು ಇಲ್ಲ ಮತ್ತು ಯಾವುದೇ ರೀತಿಯ ಸಹಕಾರ ಕೊಡುವುದಿಲ್ಲ ಎಂದು ನೇರವಾಗಿ ಹೇಳಿದ್ದೇನೆ.''

ಎಸ್.ಪಿ ಅವರಿಗೆ ಅತಿಥಿಯಾಗಿ ಬರಲು ಹೇಳಿದ್ದೇನೆ: ಕುಂದೂರು ಅಶೋಕ್
ನಾನು ಒಂದೂವರೆ ತಿಂಗಳ ಹಿಂದೆಯೇ ನನ್ನ ಸಹಕಾರವಿಲ್ಲವೆಂದು ಹೇಳಿದ ಮೇಲೂ ನನ್ನ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಹಾಕಿಸಿದ್ದಾರೆ. ಸಮ್ಮೇಳನ ಮುಂದೂಡಿ ಇಲ್ಲ ನನ್ನಿಂದ ಸಹಕಾರ ನಿರೀಕ್ಷಸಬೇಡಿ ಎಂದು ಹೇಳಿರುವ ಮಾತಿಗೆ ನಾನು ಬದ್ಧ ಎಂದು ಸಚಿವ ಸಿ.ಟಿ.ರವಿ ಹೇಳಿದರು.
ಇನ್ನು ಈ ಬಗ್ಗೆ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಕುಂದೂರು ಅಶೋಕ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಅತಿಥಿಯಾಗಿ ಬರಲು ಮನವಿ ಮಾಡಿದ್ದೇನೆ. ಅದೇ ರೀತಿ ಸಮ್ಮೇಳನಕ್ಕೆ ಸೂಕ್ತ ಭದ್ರತೆ ಕೊಡಬೇಕೆಂದು ಪತ್ರ ಬರೆದು ಕೊಟ್ಟಿದ್ದೇನೆ ಎಂದರು.

ಸಮ್ಮೇಳನ ಯಾವುದೇ ಕಾರಣಕ್ಕೂ ಮುಂದೂಡುವುದಿಲ್ಲ
ಸಮ್ಮೇಳನ ಮುಂದೂಡಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕರೆದು ಹೇಳಿದರು. ನಾನು ಕಾರಣ ಕೊಡಿ ಎಂದು ಕೇಳಿದೆ. ಅವರು ಕೊಡಲಾಗುವುದಿಲ್ಲವೆಂದರು. ಸ್ವಾಗತ ಸಮಿತಿ ಸಭೆಯಲ್ಲಿ ಅಧ್ಯಕ್ಷರನ್ನು ಬದಲಾವಣೆ ಮಾಡಲ್ಲ ಮತ್ತು ಸಮ್ಮೇಳನ ಮುಂದೂಡಲ್ಲ ಎಂಬ ನಿರ್ಣಯದ ಪತ್ರವನ್ನು ಎಸ್ಪಿ ಅವರಿಗೆ ಕೊಟ್ಟಿದ್ದೇವೆ ಎಂದು ಹೇಳಿದರು.
ಕಲ್ಕುಳಿ ವಿಠ್ಠಲ ಹೆಗ್ಡೆ ಅವರು ಈ ಹಿಂದೆ ಆದಿವಾಸಿಗಳ ಪುನರ್ವಸತಿ ಕುರಿತು ಹೋರಾಟ ಮಾಡಿದ್ದಾರೆ ಮತ್ತು ನಕ್ಸಲರನ್ನು ಮುಖ್ಯ ವಾಹಿನಿಗೆ ತರಲು ಪ್ರಯತ್ನ ಮಾಡಿದ್ದಾರೆ. ನಕ್ಸಲರಿಗೆ ನ್ಯಾಯ ಕೊಡಿ ಎಂದು ಸರ್ಕಾರಕ್ಕೆ ಮಾಡಿದ್ದಾರೆ ಅದಕ್ಕಾಗಿಯೇ ಅವರನ್ನೂ ನಕ್ಸಲರೆಂದುಕೊಂಡು ಅವರನ್ನು ಸಮ್ಮೇಳನಾಧ್ಯಕ್ಷ ಮಾಡಿದ್ದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಕುಂದೂರು ಅಶೋಕ್ ತಿಳಿಸಿದರು.












Click it and Unblock the Notifications