ಚಿಕ್ಕಮಗಳೂರಿನಲ್ಲಿ ಗಾಳಿಸಹಿತ ಮಳೆ ಅಬ್ಬರ: ಮೂಡಿಗೆರೆಯಲ್ಲಿ ಶಾಲೆಗೆ ರಜೆ ಘೋಷಣೆ
ಚಿಕ್ಕಮಗಳೂರು, ಆಗಸ್ಟ್ 12 : ಜಿಲ್ಲೆಯ ಮಲೆನಾಡು ಭಾಗದಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಮೂಡಿಗೆರೆ ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಗಾಳಿ ಸಹಿತ ಮಳೆಯಾಗುತ್ತಿದೆ. ಈಗಾಗಲೇ ಮಳೆಯ ಅಬ್ಬರಕ್ಕೆ ಅಪಾರ ಆಸ್ತಿಪಾಸ್ತಿ ಹಾಗೂ ಸಾವು ನೋವುಗಳು ಸಂಭವಿಸಿದೆ. ಶುಕ್ರವಾರವೂ ಗಾಳಿ ಸಹಿತ ಮಳೆ ಮುಂದುವರಿಯುವ ಹಿನ್ನೆಲೆ ಮೂಡಿಗೆರೆ ತಾಲೂಕಿನಲ್ಲಿ ಅಂಗನವಾಡಿಯಿಂದ ಹತ್ತನೇ ತರಗತಿವರೆಗೆ ರಜೆ ನೀಡಿ ತಹಶೀಲ್ದಾರ್ ನಾಗರಾಜ್ ಆದೇಶ ಹೊರಡಿಸಿದ್ದಾರೆ. ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ರಜೆ ಘೋಷಣೆ ಮಾಡಿರುವುದಾಗಿ ತಿಳಿಸಿದ್ದಾರೆ.
ಭಾರಿ ಮಳೆಗೆ ಕೊಪ್ಪ ತಾಲೂಕಿನ ಹೆಗ್ಗಾರುಕೂಡಿಗೆ ಗ್ರಾಮ ರಸ್ತೆ ಬಿರುಸಿನಿಂದ ಹರಿಯುತ್ತಿರುವ ಮಳೆಗೆ ಕೊಚ್ಚಿ ಹೋಗಿದ್ದು, ಮೇಗೂರು, ಕೊಗ್ರೆ, ತಲವಾನೆ ಸೇರಿ ಹತ್ತಾರು ಗ್ರಾಮಗಳಿಗೆ ರಸ್ತೆ ಸಂಪರ್ಕ ಕಡಿತಗೊಂಡಿದೆ.

ಇನ್ನು ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿರುವ ಹಿನ್ನೆಲೆ ಶಾಲಾ ಕಾಲೇಜಿಗೆ ತೆರಳಬೇಕಿದ್ದ ವಿದ್ಯಾರ್ಥಿಗಳು, ಕೆಲಸ ಕಾರ್ಯಗಳಿಗೆ ಹೋಗಬೇಕಿದ್ದ ಜನಸಾಮಾನ್ಯರ ಪರದಾಟ ನಡೆಸಿದ್ದು, PWD ಇಂಜಿನಿಯರ್ ರನ್ನ ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆದಿದೆ.
ಜಿಲ್ಲೆಯಲ್ಲಿ ಈಗಾಗಲೆ 40ಕ್ಕೂ ಹೆಚ್ಚು ಮನೆಗಳು, ನೂರಾರು ವಿದ್ಯುತ್ ಕಂಬಗಳು ಗಾಳಿ ಸಹಿತ ಅಬ್ಬರಿಸುತ್ತಿರುವ ಮಳೆಗೆ ಕುಸಿದಿವೆ. ಕಿಲೋ ಮೀಟರ್ಗಟ್ಟಲೆ ರಸ್ತೆಗಳು, ನಾಲ್ಕು ಸೇತುವೆಗಳಿಗೆ ಹಾನಿಯಾಗಿದೆ ಎಂದು ವರದಿಯಾಗಿದೆ.

ಕರ್ನಾಟಕದ 8 ಜಿಲ್ಲೆಗಳಲ್ಲಿ ಹಳದಿ ಅಲರ್ಟ್ ಘೋಷಣೆ
ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗದಲ್ಲಿ ಹೆಚ್ಚು ಮಳೆ, ಉತ್ತರ ಒಳನಾಡಿನಲ್ಲಿ ಧಾರವಾಡ, ಹುಬ್ಬಳ್ಳಿ, ಬೆಳಗಾವಿ, ಬೀದರ್, ಕಲಬುರಗಿ ಜಿಲ್ಲೆಗಳಲ್ಲಿ ಸಾಧಾರಣ ಮಳೆ , ಕರಾವಳಿ ಭಾಗದ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಆಗಸ್ಟ್ 13ರ ವರೆಗೂ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.












Click it and Unblock the Notifications