ಚಿಕ್ಕಮಗಳೂರು; ಮಳೆ ಅಬ್ಬರ, ಮನೆ & ಗುಡ್ಡ ಕುಸಿತ
ಚಿಕ್ಕಮಗಳೂರು, ಜುಲೈ 15 : ಜಿಲ್ಲೆಯ ಮಲೆನಾಡು ಭಾಗವಾದ ಶೃಂಗೇರಿ, ಮೂಡಿಗೆರೆ, ಕೊಪ್ಪ ತಾಲೂಕಗಳಲ್ಲಿ ಶುಕ್ರವಾರವೂ ವರುಣನ ಅಬ್ಬರ ಜೋರಾಗಿದೆ. ಮಳೆಯ ಅಬ್ಬರಕ್ಕೆ ಕೆಲವು ರಸ್ತೆಗಳಿಗೆ ಹಾನಿಯಾಗಿದ್ದರೆ, ಇನ್ನೂ ಕೆಲವು ಕಡೆ ಮನೆ ಕುಸಿತ, ಗುಡ್ಡ ಕುಸಿತ ಸಂಭವಿಸಿ ಜನರು ಸಂಕಷ್ಟ ಅನುಭವಿಸಿದ್ದಾರೆ.
Recommended Video
ಶೃಂಗೇರಿ ನೇರಳೆಕೊಡಿಗೆ ಗ್ರಾಮದ ಬಳಿ ಶೃಂಗೇರಿ ಆಗುಂಬೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಮಳೆ ನೀರಿನಲ್ಲಿ ಕೊಚ್ಚಿ ಹೋಗಿ ಸಂಪರ್ಕ ಕಡಿತಗೊಂಡಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ 290 ಮನೆಗಳು ಮಳೆಯ ಹೊಡೆತಕ್ಕೆ ಕುಸಿದು ಬಿದ್ದಿವೆ. ಕಳೆದ 24 ಗಂಟೆಯಲ್ಲೇ ಬರೋಬ್ಬರಿ 48 ಮನೆಗಳು ಕೊಚ್ಚಿ ಹೋಗಿವೆ. ಮಳೆಯ ಅಬ್ಬರಕ್ಕೆ ರಸ್ತೆ 100 ಅಡಿಗಳಷ್ಟು ಕೊಚ್ಚಿ ಹೋಗಿದೆ. ಇದರಿಂದ ಶೃಂಗೇರಿ- ಆಗುಂಬೆ ಸಂಪರ್ಕ ಕಡಿತಗೊಂಡಿದೆ.
ಇನ್ನೂ ಬಯಲುಸೀಮೆ ಭಾಗದಲ್ಲಿ ಮಳೆಯ ಅಬ್ಬರ ಸ್ವಲ್ಪಮಟ್ಟಿಗೆ ತಗ್ಗಿದ್ದು ಚಿಕ್ಕಮಗಳೂರು ಸುತ್ತಮುತ್ತ, ಕಡೂರು ತರೀಕೆರೆ ಭಾಗದಲ್ಲಿ ಬಿಟ್ಟು ಬಿಟ್ಟು ಮಳೆಯಾಗುತ್ತಿದೆ. ಜನರು ಮನೆ ಬಿಟ್ಟು ಹೊರಗಡೆ ಬರುವುದಕ್ಕೂ ಯೋಚನೆ ಮಾಡುವಂತಾಗಿದೆ. ಮೋಡ ಕವಿದ ವಾತವರಣ ಮುಂದೂವರೆದಿದ್ದು, ಮತ್ತೇ ಮಳೆಯಾಗುವ ಸಾಧ್ಯತೆ ಇದೆ. ಹಾಗಾಗಿ ಜಿಲ್ಲೆಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.

350 ಮಿ.ಮೀ ಮಳೆ,ಭೂಕುಸಿತ
ಗುರುವಾರ ಮತ್ತು ಶುಕ್ರವಾರ ಬೆಳಗಿನ ಜಾವದವರೆಗೂ ಭಾರೀ ಮಳೆಯಾಗಿದ್ದು, ಮೂಡಿಗೆರೆ, ಕೊಪ್ಪ, ಶೃಂಗೇರಿ ತಾಲ್ಲೂಕು ಬಿಇಓಗಳು ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಣೆ ಮಾಡಿದರು. ಮೂಡಿಗೆರೆ ತಾಲ್ಲೂಕು ಬಿಳ್ಳೂರು ಸಮೀಪ ಬೃಹತ್ ಗಾತ್ರದ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು, ಕಾಲೇಜುಗಳಿಗೆ ವಿದ್ಯಾರ್ಥಿಗಳು ಬರಲು ಪರ ದಾಡುವಂತಾಗಿತ್ತು. ಮೂಡಿಗೆರೆ ತಾಲ್ಲೂಕು ದೇವರಮನೆ ಸುತ್ತಮುತ್ತ ಭಾರೀ ಮಳೆಯಾಗಿದ್ದು, ಗುರುವಾರ ಒಂದೇ ದಿನ 350 ಮಿ.ಮೀ.ಗಿಂತ ಅಧಿಕ ಮಳೆಯಾಗಿದೆ. ಕಳಸ ತಾಲ್ಲೂಕು ಬಲಿಗೆ ಗ್ರಾಮದ ಬಳಿ ರಸ್ತೆ ಸಮೀಪ ಭೂಕುಸಿತ ಉಂಟಾಗಿ ಬೃಹತ್ ಬಂಡೆ ಕಲ್ಲುಗಳು ಜಾರಿ ಬಿದ್ದಿದೆ.

ತುಂಬಿ ಹರಿಯುತ್ತಿರುವ ತುಂಗಾ, ಭದ್ರಾ, ಹೇಮಾವತಿ
ಭಾರೀ ಮಳೆಗೆ ತುಂಗಾ, ಭದ್ರಾ, ಹೇಮಾವತಿ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ನದಿಪಾತ್ರದ ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿಯಾಗಿದೆ.ಕೊಪ್ಪ, ಶೃಂಗೇರಿ, ನರಸಿಂಹರಾಜಪುರ, ಮೂಡಿಗೆರೆ, ಕಳಸ ಭಾಗದಲ್ಲಿ ನಿರಂತರ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಜನರು ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ. ಅಲ್ಲಲ್ಲಿ ಧರೆಕುಸಿದಿದೆ. ಭಾರೀ ಗಾಳಿ ಮಳೆಗೆ ಮರಗಳು ಧರೆಗುರುಳಿವೆ. ವಿದ್ಯುತ್ ಕಂಬ ಗಳು ಧರೆಗುರುಳಿ ವಿದ್ಯುತ್ ವ್ಯತ್ಯಯಗೊಂಡಿದೆ. ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ.

ಕೃಷಿ ಚಟುವಟಿಕೆಗೆ ತೊಡಕಾದ ಮಳೆರಾಯ
ನಿರಂತರ ಮಳೆಯಿಂದ ಅಡಿಕೆ, ಕಾಫಿ, ಕಾಳುಮೆಣಸು, ಬಯಲುಸೀಮೆ ಭಾಗದಲ್ಲಿ ತರಕಾರಿ ಬೆಳೆಗಳಿಗೆ ಹಾನಿಯಾಗಿದೆ. ಕೃಷಿ ಚಟುವಟಿಕೆಗೂ ಹಿನ್ನಡೆಯಾಗಿದೆ. ಮಳೆಯಿಂದ ಬೇಸತ್ತಿರುವ ಜನರು ಮಳೆ ಕಡಿಮೆಯಾದರೇ ಸಾಕು ಎಂದು ಮುಗಿಲು ನೋಡುವಂತಾಗಿದೆ. ಜಿಲ್ಲೆಯಾದ್ಯಂತ ಸುಮಾರು 533 ಹೆಕ್ಟೇರ್ ತೋಟಗಾರಿಕಾ ಬೆಳೆ ನಾಶವಾಗಿದೆ.

ಗಣೇಶ್ ಹೆಗಡೆ ಮನೆ ಮೇಲೆ ಗುಡ್ಡ ಕುಸಿದು, ಪುಸ್ತಕಗಳು ನೀರು ಪಾಲು
ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಭಾರೀ ಪ್ರಮಾಣದಲ್ಲಿ ಧರೆಕುಸಿದು ಮಣ್ಣು ನೀರು ಆಗುಂಬೆ ಸಿರಿನೋಡ, ಸೌಭಾಗ್ಯ ವಂಚಿತೆ ಕಾದಂಬರಿ ಸೇರಿದಂತೆ ಅನೇಕ ಕೃತಿಗಳನ್ನು ಬರೆದಿರುವ ಸಾಹಿತಿ ಗಣೇಶ್ ಹೆಗಡೆ ಅವರ ಮನೆಗೆ ನುಗ್ಗಿ ಅಪಾರ ಹಾನಿಯುಂಟಾಗಿದೆ. ಮಳೆ ನೀರಿಗೆ ಮನೆ ಲೈಬ್ರೆರಿಯಲ್ಲಿದ್ದ ಅನೇಕ ಪುಸ್ತಕಗಳು ಹಾಗೂ ಮನೆಯಲ್ಲಿದ್ದ ದಿನ ಬಳಕೆ ವಸ್ತುಗಳು ಸೇರಿದಂತೆ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ನೀರು ಪಾಲಾಗಿದೆ. ಮನೆಯೊಳಗೆ ಭಾರೀ ಪ್ರಮಾಣ ಕೆಸರು ನೀರು ಹಳ್ಳದಂತೆ ಹರಿಯುತ್ತಿದ್ದು,ಪುಸ್ತಕಗಳನ್ನು ಹೊರತರಲು ಪರದಾಡುತ್ತಿರುವ ಗಣೇಶ್ ಹೆಗಡೆ ಏನು ಮಾಡಬೇಕೆಂದು ತೋಚುತ್ತಿಲ್ಲವೆಂದು ತಮ್ಮ ನೋವು ಹೊರಹಾಕಿದ್ದಾರೆ.












Click it and Unblock the Notifications