ರಾಷ್ಟ್ರೀಯ ಪಕ್ಷವನ್ನು ತೊಲಗಿಸಿ ಪ್ರಾದೇಶಿಕ ಪಕ್ಷವನ್ನು ಅಧಿಕಾರಕ್ಕೆ ತರಬೇಕು-ಎಚ್.ಡಿ ದೇವೇಗೌಡ
ಚಿಕ್ಕಮಗಳೂರು, ಮೇ 06: ತಮಿಳುನಾಡಿನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷವೇ ಇಲ್ಲ. ರಾಜ್ಯದಲ್ಲೂ ಕೂಡ ಈ ಎರಡೂ ಪಕ್ಷಗಳನ್ನು ತೊಲಗಿಸಿ ಪ್ರಾದೇಶಿಕ ಪಕ್ಷ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದು 70 ವರ್ಷದಿಂದ ಶತತ ಪ್ರಯತ್ನ ಮಾಡುತ್ತಿದ್ದೇನೆ. ಆದರೆ ಸಾಧ್ಯವಾಗುತ್ತಿಲ್ಲ. ಈ ಬಾರಿ ಜೆಡಿಎಸ್ಗೆ ರಾಜ್ಯಾದ್ಯಂತ ಅಭೂತಪೂರ್ವವಾಗಿ ಬೆಂಬಲ ವ್ಯಕ್ತವಾಗಿದ್ದು, ರಾಜ್ಯದಲ್ಲೂ ಜೆಡಿಎಸ್ ಅಧಿಕಾರಕ್ಕೆ ಬರಲು ಅವಕಾಶ ನೀಡಬೇಕೆಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಮನವಿ ಮಾಡಿದರು.
ಅವರು ಶುಕ್ರವಾರ ಪಟ್ಟಣದ ಮೂಡಿಗೆರೆ ಕ್ಲಬ್ ಆವರಣದಲ್ಲಿ ಜೆಡಿಎಸ್ ಅಭ್ಯರ್ಥಿ ಎಂ.ಪಿ.ಕುಮಾರಸ್ವಾಮಿ ಅವರ ಪರವಾಗಿ ಮತಯಾಚನೆಗಾಗಿ ಏರ್ಪಡಿಸಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದ ಜನರಿಗೆ ಕುಡಿಯುವ ನೀರು ಹಾಗೂ ರೈತರ ಜಮೀನಿನಲ್ಲಿ ಕೃಷಿ ಚಟುವಟಿಕೆ ನಡೆಸಲು ಕಾವೇರಿಯನ್ನು ಉಳಿಸಿಕೊಳ್ಳಲು ಮನ್ಮೋಹನ್ ಸಿಂಗ್, ವಾಜಪೇಯಿ, ನರೇಂದ್ರ ಮೋದಿ ಯಾರೂ ಬಿಡಲಿಲ್ಲ. ಇಂದಿಗೂ ಏಕಾಂಗಿಯಾಗಿ ಹೋರಾಟ ಮಾಡುತ್ತಿದ್ದೇನೆ ಎಂದರು.

ರಾಜ್ಯದಲ್ಲಿ ರೈತರ ಹಾಗೂ ಜನಸಾಮಾನ್ಯರು ನೆಮ್ಮದಿಯಿಂದ ಬದುಕಲು ಎಚ್.ಡಿ.ಕುಮಾರಸ್ವಾಮಿ ಅವರ ಪಂಚರತ್ನ ಯಾತ್ರೆ ಯೋಜನೆ ಜಾರಿಗೊಳಿಸಲು ಜೆಡಿಎಸ್ ಅಧಿಕಾರಕ್ಕೆ ತರಬೇಕು. ಹಿಂದೆ ಮೂಡಿಗೆರೆಗೆ ಭೇಟಿ ಕೊಟ್ಟಾಗ 3 ಮಂದಿ ಶಾಸಕರನ್ನು ಗೆಲ್ಲಿಸಿಕೊಟ್ಟಿದ್ದೀರಿ. ಈಗ ಮೂಡಿಗೆರೆ ಸೇರಿದಂತೆ 5 ಕ್ಷೇತ್ರದ ಅಭ್ಯರ್ಥಿಯನ್ನು ಗೆಲ್ಲಿಸಿಕೊಡಬೇಕು ಎಂದು ಮನವಿ ಮಾಡಿದ್ದಾರೆ.
ಎಲ್ಲರಲ್ಲೂ ಕೈ ಮುಗಿದು ಕೇಳುತ್ತೇನೆ. ಮೇ.18ಕ್ಕೆ ನನಗೆ 90 ವರ್ಷ ತುಂಬುತ್ತದೆ. ತನ್ನ ಜೀವಿತ ಅವದಿಯಲ್ಲಿ ಪ್ರಾದೇಶಿಕ ಪಕ್ಷ ಉಳಿಯಬೇಕೆಂದು ನನ್ನ ಆಸೆ. ಈ ಆಸೆಯನ್ನು ಈಡೇರಿಸಿಕೊಡಬೇಕೆಂದ ಅವರು, ಸಭೆಯಲ್ಲಿದ್ದ ಎಸ್.ಎಲ್.ಭೋಜೇಗೌಡನ್ನು ಕರೆದು ರೀ ಭೋಜೇಗೌಡರೇ ನಿಮ್ಮ ಜವಾಬ್ದಾರಿ ಹೆಚ್ಚಿದೆ. ಜಿಲ್ಲೆಯಲ್ಲಿ 5 ಸ್ಥಾನ ಗೆಲ್ಲಿಸಿ ವಿಧಾನಸಭೆಗೆ ಕಳಿಸಬೇಕೆಂದು ಹೇಳಿದರು.

ಈ ವೇಳೆ ಮಾತನಾಡಿದ ಎಂ.ಪಿ.ಕುಮಾರಸ್ವಾಮಿ, ನನಗೆ ಜೆಡಿಎಸ್ನಲ್ಲಿ ಟಿಕೆಟ್ ನೀಡಿ ಅಭ್ಯರ್ಥಿ ಮಾಡಿ ತನ್ನ ಬೆಂಬಲಕ್ಕೆ ಮತಯಾಚಿಸಲು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಬಂದಿರುವುದು ನನ್ನ ಅದೃಷ್ಟ. ತಾನು ಶಾಸಕನಾಗಿದ್ದಾಗ ಮೂಡಿಗೆರೆ ತಾಲೂಕು ಬರ ಪೀಡಿತ ಪ್ರದೇಶವಲ್ಲ ಎಂದು ಬಿಜೆಪಿ ಘೋಷಣೆ ಮಾಡಿದಾಗ ಅದನ್ನು ವಿರೋಧಿಸಿದೆ. ಕಾಡಾನೆ ಹಿಡಿಯಲು, ಕಸ್ತೂರಿ ರಂಗನ್, ಬಿಪಿಎಲ್ ರದ್ದು ಬಗ್ಗೆ ಸದನದಲ್ಲಿ ಚರ್ಚೆ ಮಾಡಿ ಸಮಸ್ಯೆ ನಿವಾರಿಸಿದ್ದೇ ತಪ್ಪಾ? ಇಂತಹ ಜನಪರವಾದ ಕೆಲಸ ಎಂಎಲ್ಸಿ ಹಾಗೂ ಎಂಪಿ ಮಾಡಿದ್ದಾರಾ? ನಾನೀಗ ವಿಷದ ಕೊಂಡಿಯಿಂದ ಹೊರ ಬಂದು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಮನೆಯಲ್ಲಿ ಧೈರ್ಯವಾಗಿದ್ದೇನೆ. ಬಿಜೆಪಿಯವರಿಗೆ ತಾಕತ್ತಿದ್ದರೆ ಮುಂಬರುವ ತಾ.ಪಂ, ಹಾಗೂ ಜಿ.ಪಂ. ಚುನಾವಣೆ ಗೆದ್ದು ತೋರಿಸಲಿ ಎಂದು ಸವಾಲು ಹಾಕಿದ ಅವರು, ತನಗೆ ಅಧಿಕಾರ ಸಿಗಲಿ, ಬಿಡಲಿ ಜನಸೇವೆ ನಿರಂತರವಾಗಿ ಮಾಡುತ್ತೇನೆ. ಅದಕ್ಕೆ ಸ್ಪೂರ್ತಿಯೇ ಎಚ್.ಡಿ.ದೇವೇಗೌಡರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜೆಡಿಎಸ್ ಕ್ಷೇತ್ರ ಸಮಿತಿ ಅಧ್ಯಕ್ಷ ಡಿ.ಜೆ.ಸುರೇಶ್, ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್, ಎಂ.ಎಸ್.ಬಾಲಕೃಷ್ಣ, ಅರೆಕುಡಿಗೆ ಶಿವಣ್ಣ, ಸುಮಾ ನಾಗೇಶ್, ಬಿ.ಎಲ್.ರಾಮದಾಸ್ ಭಾಗಿಯಾಗಿದ್ದರು.












Click it and Unblock the Notifications