Breaking News: ಚಿಕ್ಕಮಗಳೂರು ಹೋಂ ಸ್ಟೇ, ರೆಸಾರ್ಟ್ ಮಾಲೀಕರಿಗೆ ಅರಣ್ಯ ಇಲಾಖೆ ನೋಟಿಸ್
ಚಿಕ್ಕಮಗಳೂರು, ಸೆಪ್ಟೆಂಬರ್ 10: ಅರಣ್ಯ ಭೂಮಿ ಒತ್ತುವರಿ ವಿಚಾರ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮತ್ತೆ ಸದ್ದು ಮಾಡುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರು ಜಿಲ್ಲೆಯ ಹೋಂ ಸ್ಟೇ, ರೆಸಾರ್ಟ್ ಮಾಲೀಕರಿಗೆ ಅರಣ್ಯ ಇಲಾಖೆ ನೋಟಿಸ್ ನೀಡಿದೆ. ಖುದ್ದು ಅರಣ್ಯ ಸಚಿವರ ಖಡಕ್ ಸೂಚನೆಯಂತೆಯೇ ಒತ್ತುವರಿ ಮಾಡಿಕೊಂಡಿರುವ ಮಾಲೀಕರಿಗೆ ನೋಟಿಸ್ ನೀಡಲಾಗಿದೆ, ಮುಂದಿನ ಕ್ರಮ ಏನು? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಅರಣ್ಯ ಸಚಿವ ಈಶ್ವರ ಖಂಡ್ರೆ ಖಡಕ್ ಆದೇಶದ ಕಾರಣ ಅರಣ್ಯ ಇಲಾಖೆ ಹೈ-ಅಲರ್ಟ್ ಆಗಿದೆ. ಅರಣ್ಯ, ಡೀಮ್ಡ್ ಫಾರೆಸ್ಟ್ ವ್ಯಾಪ್ತಿಯ ಜನರಿಗೆ ನೋಟಿಸ್ ನೀಡಿದೆ. ಹೋಂ ಸ್ಟೇ, ರೆಸಾರ್ಟ್ ಮಾಲೀಕರಿಗೆ ಅರಣ್ಯ ಇಲಾಖೆಯಿಂದ ಅರಣ್ಯ ವ್ಯಾಪ್ತಿಯಲ್ಲಿ ರೆಸಾರ್ಟ್, ಹೋಂ ಸ್ಟೇ ನಿರ್ಮಾಣದ ಬಗ್ಗೆ ವಿವರ ಕೇಳಿ ನೋಟಿಸ್ ಕೊಡಲಾಗಿದೆ.

ಮಾಹಿತಿಗಳ ಪ್ರಕಾರ 40 ರೆಸಾರ್ಟ್, ಹೋಂ ಸ್ಟೇ ಮಾಲೀಕರಿಗೆ ಅರಣ್ಯ ಇಲಾಖೆ ನೋಟಿಸ್ ನೀಡಿ, ಇಲಾಖೆಗೆ ಸೂಕ್ತ ದಾಖಲೆಗಳನ್ನು ಹಾಜರುಪಡಿಸುವಂತೆ ಸೂಚನೆ ನೀಡಲಾಗಿದೆ. ಒಂದು ವೇಳೆ ದಾಖಲೆಗಳು ಇಲ್ಲದಿದ್ದರೆ, ಅರಣ್ಯ ಭೂಮಿಯಲ್ಲಿ ಅಕ್ರಮವಾಗಿ ನಿರ್ಮಾಣವಾಗಿರುವ ಹೋಂ ಸ್ಟೇ, ರೆಸಾರ್ಟ್ಗಳನ್ನು ತೆರವು ಮಾಡಲಾಗುತ್ತದೆ.
ಈ ಕುರಿತು ಖುದ್ದು ಅರಣ್ಯ ಸಚಿವರೇ ಆದೇಶವನ್ನು ನೀಡಿದ್ದು, ಅಕ್ರಮ ರೆಸಾರ್ಟ್ ತೆರವಿಗೆ ಆದೇಶಿಸಿದ್ದಾರೆ. ಸಚಿವರ ಆದೇಶದನ್ವಯ ನೋಟಿಸ್ ನೀಡಿ, ಸೂಕ್ತ ದಾಖಲೆಗಳನ್ನು ಅರಣ್ಯ ಇಲಾಖೆ ಮಾಲೀಕರಿಗೆ ಕೇಳಿದೆ.
ಮೂಡಿಗೆರೆ, ಮುತ್ತೋಡಿ, ಮುಳ್ಳಯ್ಯನಗಿರಿ, ಚಿಕ್ಕಮಗಳೂರು ಭಾಗದ ರೆಸಾರ್ಟ್, ಹೋಂ ಸ್ಟೇ ಮಾಲೀಕರಿಗೆ ನೋಟಿಸ್ ನೀಡಲಾಗಿದ್ದು, ಒಂದು ವಾರದೊಳಗೆ ಸೂಕ್ತ ದಾಖಲೆಗಳನ್ನು ನೀಡುವಂತೆ ಚಿಕ್ಕಮಗಳೂರು ಡಿಎಫ್ಓ ರಮೇಶ್ ಬಾಬು ಸೂಚಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಸರ್ಕಾರಿ ಭೂಮಿ ಒತ್ತುವರಿ ಮಾಡಿರುವುದು ಗುಟ್ಟಾಗಿ ಉಳಿದಿಲ್ಲ. ಈ ಕುರಿತು ಹಲವು ಬಾರಿ ಚರ್ಚೆಗಳು ನಡೆದಿವೆ, ಸರ್ಕಾರಕ್ಕೆ ವರದಿಗಳು ಸಲ್ಲಿಕೆಯಾಗಿವೆ. 25 ಎಕರೆ ತನಕ ಒತ್ತುವರಿ ಮಾಡಿರುವ ಸರ್ಕಾರಿ ಜಾಗ (ಕಂದಾಯ ಭೂಮಿ)ವನ್ನು ಗುತ್ತಿಗೆಗೆ ನೀಡಲು ಸರ್ಕಾರ ಮುಂದಾಗಿದೆ. ಇದಕ್ಕಾಗಿ ಏಲಕ್ಕಿ, ರಬ್ಬರ್, ಮೆಣಸು, ಕಾಫಿ, ಟೀ ಪ್ಲಾಂಟೇಶನ್ ಮಾಲೀಕರಿಂದ ಅರ್ಜಿಯನ್ನು ಕರೆಯಲಾಗಿದೆ.
ಆದರೆ ತಾವು ಒತ್ತುವರಿ ಮಾಡಿರುವ ಭೂಮಿ ಅರಣ್ಯ ಭೂಮಿಯೋ?, ಕಂದಾಯ ಇಲಾಖೆಗೆ ಸೇರಿದ್ದೋ ಎಂಬ ಕುರಿತು ಮಾಲೀಕರಿಗೆ ಸ್ಪಷ್ಟತೆ ಇಲ್ಲ. ಆದ್ದರಿಂದ ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಗುತ್ತಿಗೆಗಾಗಿ ಒಂದೇ ಒಂದು ಅರ್ಜಿ ಸಹ ಸಲ್ಲಿಕೆಯಾಗಿಲ್ಲ. ಜಿಲ್ಲೆಯಲ್ಲಿ 20,844 ಎಕರೆ ಕಂದಾಯ ಭೂಮಿ ಒತ್ತುವರಿಯಾಗಿದೆ ಎಂಬುದು ಅಧಿಕಾರಿಗಳ ಅಂದಾಜು.
ಚಿಕ್ಕಮಗಳೂರಿನಲ್ಲಿ ಸರ್ಕಾರಿ ಭೂಮಿಯನ್ನು ವಿದೇಶಿಗರ ಹೆಸರಿಗೆ ಸಹ ನೋಂದಣಿ ಮಾಡಿಕೊಟ್ಟಿರುವುದು ಈಗಾಗಲೇ ಬಯಲಾಗಿದೆ. ಆಸ್ಟ್ರೇಲಿಯಾ, ಅಮೆರಿಕದಲ್ಲಿ ನೆಲೆಸಿರುವ ಅರ್ಜಿಯನ್ನೇ ಸಲ್ಲಿಸದವರ ಹೆಸರಿಗೆ ಸರ್ಕಾರಿ ಭೂಮಿಯನ್ನು ಹಂಚಿಕೆ ಮಾಡಲಾಗಿದೆ. ಮೂಡಿಗೆರೆ ತಾಲೂಕಿನಲ್ಲಿ ಅಕ್ರಮವಾಗಿ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿರುವ ಪ್ರಕರಣಗಳು ಹೆಚ್ಚಾಗಿವೆ ಎಂಬ ಮಾಹಿತಿ ಇದೆ.












Click it and Unblock the Notifications