ಚಿಕ್ಕಮಗಳೂರಿನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 425 ಮದ್ಯ ಬಾಕ್ಸ್ಗಳ ವಶ
ಚಿಕ್ಕಮಗಳೂರು, ಮೇ, 01: ವಿಧಾನಸಭೆ ಚುನಾವಣೆ ಹಿನ್ನೆಲೆ ರಾಜರಾಣಿಗಳು ಮತದಾರರನ್ನು ಸೆಳೆಯಲು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಅಷ್ಟೆ ಅಲ್ಲದೆ ಹಣ, ಹೆಂಡ ಹಂಚಲು ಕೂಡ ಶುರು ಮಾಡಿದ್ದು, ಇದಕ್ಕೆ ಕಡಿವಾಣ ಹಾಕಲು ಪೊಲೀಸರು, ಅಬಕಾರಿ ಅಧಿಕಾರಿಗಳು ಮುಂದಾಗಿದ್ದಾರೆ. ಇದೇ ರೀತಿ ಇಂದು ಚಿಕ್ಕಮಗಳೂರು ನಗರದ ಹೌಸಿಂಗ್ ಬೋರ್ಡ್ ಮೇಲೆ ಅಬಕಾರಿ ಮತ್ತು ಎಸ್.ಎಸ್.ಟಿ. ಅಧಿಕಾರಿಗಳು ದಾಳಿ ನಡೆಸಿದ್ದು, ಇಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 425 ಮದ್ಯ ಬಾಕ್ಸ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಹಾಗೂ ಎಂ.ಸಿ.ಎಂ.ಸಿ. ಅಧಿಕಾರಿಗಳು ಭೇಟಿ, ಪರಿಶೀಲನೆ ನಡೆಸಿದ್ದಾರೆ. ಹಾಗೆಯೇ ಇಲ್ಲಿದ್ದ ಮದ್ಯ ಬಾಟಲಿಗಳನ್ನು ಮತದಾರರಿಗೆ ಹಂಚಲು ತಂದಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.

ಭಾರಿ ಮೊತ್ತದ ಅಕ್ರಮ ಮದ್ಯ ವಶ
ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ನೀತಿ ಸಂಹಿತೆ ಜಾರಿಯಲ್ಲಿದ್ದು, ಹಲವೆಡೆ ಪೊಲೀಸರು ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುತ್ತಲೇ ಇದ್ದಾರೆ. ಅದೇ ರೀತಿ ದಾವಣಗೆರೆ ಜಿಲ್ಲೆಯಲ್ಲೂ ಕೂಡ ಪೊಲೀಸರು ಅಲರ್ಟ್ ಆಗಿದ್ದು, ಅಕ್ರಮವಾಗಿ ಸಾಗಿಸುತ್ತಿದ್ದ ಭಾರಿ ಮೊತ್ತದ ಮದ್ಯವನ್ನು ಇತ್ತೀಚೆಗಷ್ಟೇ ವಶಪಡಿಸಿಕೊಂಡಿದ್ದರು.
ಅಕ್ರಮ ಚಟುವಟಿಕೆಗಳನ್ನು ತಡೆಯುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಚೆಕ್ಪೋಸ್ಟ್ಗಳ ವ್ಯವಸ್ಥೆಯನ್ನು ಮಾಡಲಾಗಿದೆ. ನೀತಿ ಸಂಹಿತೆ ಉಲ್ಲಂಘಿಸಿ ಸಾಗಿಸುತ್ತಿದ್ದ 5,213 ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶಿವಾನಂದ ಕಾಪಶಿ ಮಾಹಿತಿ ನೀಡಿದ್ದಾರೆ. ಜಿಲ್ಲೆಯಾದ್ಯಂತ ವಿವಿಧ ಚೆಕ್ ಪೋಸ್ಟ್ಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ಕೈಗೊಳ್ಳಲಾಗುತ್ತಿದ್ದು, ದಾಖಲೆ ಇಲ್ಲದೇ ಸಾಗಿಸುತ್ತಿದ್ದ ನಗದು, ಚಿನ್ನಾಭರಣ ಸೇರಿದಂತೆ ವಾಹನಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಅಲ್ಲದೇ ಅಂದಾಜು 56,110 ರೂಪಾಯಿ ಮೌಲ್ಯದ 3.209 ಕೆ.ಜಿ ಮಾದಕ ವಸ್ತು ಹಾಗೂ 48,26,735 ರೂಪಾಯಿ ಮೌಲ್ಯದ ಇತರೆ ವಸ್ತುಗಳು ಸೇರಿದಂತೆ ಒಟ್ಟು 1.60 ಕೋಟಿಯಷ್ಟು ನಗದು ಮತ್ತು ಇತರೆ ವಸ್ತುಗಳನ್ನು ನೀತಿ ಸಂಹಿತೆ ಆರಂಭವಾದಾಗಿನಿಂದ ಇಲ್ಲಿಯವರೆಗೆ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಇದರಲ್ಲಿ 67.24 ಲೀಟರ್ ಪೊಲೀಸ್ ಇಲಾಖೆ ಮತ್ತು 6077.945 ಲೀಟರ್ ಮದ್ಯವನ್ನು ಅಬಕಾರಿ ಇಲಾಖೆಯಿಂದ ಕಾರ್ಯಾಚರಣೆ ಮಾಡಿ ವಶಪಡಿಸಿಕೊಳ್ಳಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿತ್ತು.
ಜಿಲ್ಲೆಯಲ್ಲಿ 7 ವಿಧಾನಸಭಾ ಕ್ಷೇತ್ರಗಳಿದ್ದು, ಇಲ್ಲಿ ನೀತಿ ಸಂಹಿತೆ ಕಟ್ಟುನಿಟ್ಟಿನ ಜಾರಿಗೆ 29 ಕಡೆ ಚೆಕ್ಪೋಸ್ಟ್ಗಳು ಕಾರ್ಯ ನಿರ್ವಹಿಸುತ್ತಿವೆ. ಚೆಕ್ಪೋಸ್ಟ್ ಗಳಲ್ಲಿ ಸಿಬ್ಬಂದಿ ಮೂರು ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲಿದ್ದು, ದಿನದ 24 ಗಂಟೆಯು ಕಾರ್ಯನಿರ್ವಹಿಸುತ್ತಿವೆ. ಇದರ ನೇರ ದೃಶ್ಯಾವಳಿಗಳನ್ನು ಸೆರೆಯಿಡಿಯಲು ಸಿಸಿ ಕ್ಯಾಮೆರಾ ಅಳವಡಿಸಲಾಗಿದ್ದು, ಇದರ ದೃಶ್ಯಾವಳಿಗಳ ವೀಕ್ಷಣೆಯನ್ನು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸ್ಥಾಪಿಸಿರುವ ನಿಯಂತ್ರಣ ಕೊಠಡಿಯಲ್ಲಿ ವೀಕ್ಷಣೆ ಮಾಡಲಾಗುತ್ತದೆ.
ಕ್ಷೇತ್ರವಾರು ಚೆಕ್ ಪೋಸ್ಟ್ಗಳ ವಿವರ
ಜಗಳೂರು ವಿಧಾನಸಭಾ ಕ್ಷೇತ್ರ: ಬಿದರಕೆರೆ, ಗಡಿಮಾಕುಂಟೆ, ಮುಸ್ಟೂರು ಚಳ್ಳಕೆರೆ ರಸ್ತೆ, ಕಾನನಕಟ್ಟೆ 13ನೇ ರಸ್ತೆಯಲ್ಲಿ ಚೆಕ್ ಪೋಸ್ಟ್ ನಿರ್ಮಿಸಲಾಗಿದೆ.
ಹರಿಹರ ವಿಧಾನಸಭಾ ಕ್ಷೇತ್ರ: ರಾಘವೇಂದ್ರ ಮಠ, ಹಲಸಬಾಳು ಕ್ರಾಸ್, ಕುರುಬರಹಳ್ಳಿ, ಮಲೆಬೆನ್ನೂರಿನ ನಂದಿಗುಡಿ ಬಳಿ ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗಿದೆ.
ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ: ಭೂಮಿಕ ನಗರ, ಲೋಕಿಕೆರೆ, ಶಾಮನೂರು ಕ್ರಾಸ್ -4 ರಸ್ತೆ, ವಿದ್ಯಾನಗರ ಲಾಸ್ಟ್ ಬಸ್ ಸ್ಟಾಂಡ್, ಮಾಗನಹಳ್ಳಿ ರಸ್ತೆಯಲ್ಲಿ ಚೆಕ್ ಪೋಸ್ಟ್ ನಿರ್ಮಿಸಲಾಗಿದೆ.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ: ಬಾಡ ಕ್ರಾಸ್, ಬೇತೂರ್ ರಸ್ತೆ, ಕೊಂಡಜ್ಜಿ ರಸ್ತೆ, ಹರಿಹರ ರಸ್ತೆ (ಸಾಯಿ ಇಂಟರ್ ನ್ಯಾಷನಲ್ ಹೋಟೆಲ್) ಬಳಿ ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗಿದೆ.
ಮಾಯಕೊಂಡ ವಿಧಾನಸಭಾ ಕ್ಷೇತ್ರ: ಹೆಬ್ಬಾಳ್ ಟೋಲ್ಗೇಟ್, ಕಾರಿಗನೂರು ಕ್ರಾಸ್, ಹೆಚ್.ಬಸಾಪುರ ಬಳಿ ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗಿದೆ.
ಚನ್ನಗಿರಿ ವಿಧಾನಸಭಾ ಕ್ಷೇತ್ರ: ಜೋಳದಾಳ್, ಮಾವಿನಕಟ್ಟೆ, ತಾವರೆಕೆರೆ, ಮಾದಾಪುರ, ಸಂತೆಬೆನ್ನೂರು ಚೆಕ್ ಪೋಸ್ಟ್ ನಿರ್ಮಿಸಲಾಗಿದೆ.
ಹೊನ್ನಾಳಿ ವಿಧಾನಸಭಾ ಕ್ಷೇತ್ರ: ಟಿ.ಜಿ ಹಳ್ಳಿ ಕ್ರಾಸ್, ಸವಳಂಗ, ಹೊಳೆಹರಳಹಳ್ಳಿ ಕ್ರಾಸ್, ಜೀನಹಳ್ಳಿ ಕ್ರಾಸ್ನಲ್ಲಿ ಚೆಕ್ ಪೋಸ್ಟ್ ಸ್ಥಾಪಿಸಲಾಗಿದೆ.












Click it and Unblock the Notifications