ಚಿಕ್ಕಮಗಳೂರು ಬಿಜೆಪಿಗೆ ಹೊಸ ಸಾರಥಿ ನೇಮಕ
ಚಿಕ್ಕಮಗಳೂರು, ಜನವರಿ 15: ಕರ್ನಾಟಕ ಬಿಜೆಪಿ ಘಟಕ ಲೋಕಸಭೆ ಚುನಾವಣೆಯನ್ನು ಮುಂದಿಟ್ಟುಕೊಂಡು ಪಕ್ಷ ಸಂಘಟನೆಯಲ್ಲಿ ಮಹತ್ವದ ಬದಲಾವಣೆ ಮಾಡಿದೆ. 39 ಸಂಘಟನಾತ್ಮಕ ಜಿಲ್ಲೆಗಳ ಜಿಲ್ಲಾಧ್ಯಕ್ಷರನ್ನು ಹೊಸದಾಗಿ ನೇಮಕ ಮಾಡಲಾಗಿದೆ. ಚಿಕ್ಕಮಗಳೂರು ಜಿಲ್ಲಾ ಬಿಜೆಪಿಗೆ ಸಹ ಹೊಸ ಸಾರಥಿ ನೇಮಕವಾಗಿದೆ.
ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಭಾನುವಾರ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. 'ಪಕ್ಷದ ಸಂಘಟನಾತ್ಮಕ ಜಿಲ್ಲೆಗಳ ಜಿಲ್ಲಾ ಅಧ್ಯಕ್ಷರಾಗಿ ನಿಯುಕ್ತಿಗೊಂಡಿರುವ ನೂತನ ಜಿಲ್ಲಾಧ್ಯಕ್ಷರುಗಳಿಗೆ ಹಾಗೂ ವಿವಿಧ ಘಟಕಗಳಿಗೆ ನಿಯುಕ್ತಿಗೊಂಡಿರುವ ನೂತನ ಪದಾಧಿಕಾರಿಗಳಿಗೆ ಆತ್ಮೀಯ ಅಭಿನಂದನೆಗಳು' ಎಂದು ಹೇಳಿದ್ದಾರೆ.

'ತಮಗೆ ವಹಿಸಲಾಗಿರುವ ಜವಾಬ್ದಾರಿಗಳನ್ನು ನಿರೀಕ್ಷೆ ಮೀರಿ ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸುವ ಮೂಲಕ ಮುಂಬರುವ ಲೋಕಸಮರದಲ್ಲಿ ತಾವು ನಿರ್ಣಾಯಕ ಪಾತ್ರ ವಹಿಸಿ, ಸಂಘಟನೆಗೆ ಬಲ ತುಂಬುವ ನಿಟ್ಟಿನಲ್ಲಿ ಶ್ರಮಿಸುತ್ತೀರೆಂದು ನಂಬಿದ್ದೇನೆ. ನಿಮ್ಮ ಸಂಘಟನೆಯ ಹಾದಿ ಸುಗಮವಾಗಿ ಸಾಗಲೆಂದು ಹಾರೈಸುತ್ತೇನೆ' ಎಂದು ತಿಳಿಸಿದ್ದಾರೆ.
ಚಿಕ್ಕಮಗಳೂರು ಬಿಜೆಪಿ ಘಟಕ; ಚಿಕ್ಕಮಗಳೂರು ಬಿಜೆಪಿ ಘಟಕದ ನೂತನ ಜಿಲ್ಲಾಧ್ಯಕ್ಷರಾಗಿ ದೇವರಾಜ್ ಶೆಟ್ಟಿ ನೇಮಕರಾಗಿದ್ದಾರೆ. ಈ ಹುದ್ದೆಗೆ ತೀವ್ರ ಪೈಪೋಟಿ ಇತ್ತು, ಅಂತಿಮವಾಗಿ ದೇವರಾಜ್ ಶೆಟ್ಟಿ ನೇಮಕ ಮಾಡಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಆದೇಶ ಹೊರಡಿಸಿದ್ದಾರೆ.
ರಾಜ್ಯದ 39 ಸಂಘಟನಾತ್ಮಕ ಘಟಕಗಳಿಗೂ ಅಧ್ಯಕ್ಷರನ್ನು ಏಕ ಕಾಲದಲ್ಲಿ ನೇಮಕ ಮಾಡಲಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಹತ್ತಾರು ಜನರು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸಿದ್ದರು. ಅಂತಿಮವಾಗಿ ಮೂವರ ಹೆಸರು ಕೇಳಿ ಬಂದಿತ್ತು.
ಅದರಲ್ಲೂ ದೇವರಾಜ್ ಶೆಟ್ಟಿ ಹೆಸರು ಪೈಪೋಟಿಯಲ್ಲಿ ಮುಂಚೂಣಿಯಲ್ಲಿತ್ತು. ನಿರೀಕ್ಷೆಯಂತೆ ದೇವರಾಜ್ ಶೆಟ್ಟಿ ಹೆಸರು ಅಂತಿಮಗೊಂಡಿದೆ. ದೇವರಾಜ್ ಶೆಟ್ಟಿ ಹೆಸರು ಪ್ರಕಟಗೊಳ್ಳುತ್ತಿದ್ದಂತೆ ಕಾರ್ಯಕರ್ತರು ಅವನ್ನು ಭೇಟಿ ಮಾಡಿ ಶುಭಾಶಯ ತಿಳಿಸಿದರು.
ಕೇಲವೇ ದಿನಗಳಲ್ಲಿ ಲೋಕಸಭಾ ಚುನಾವಣೆ ಎದುರಾಗಲಿದೆ. ಈ ಹಿನ್ನಲೆಯಲ್ಲಿ ಈ ನೇಮಕಾತಿ ಮಹತ್ವ ಪಡೆದಿದೆ. ನೂತನ ಜಿಲ್ಲಾಧ್ಯಕ್ಷರ ಹೆಗಲಿಗೆ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಜವಾಬ್ದಾರಿ ಹೊರಿಸಿದಂತಾಗಿದೆ.
ಚಿಕ್ಕಮಗಳೂರು ಪಕ್ಷದ ಹಿರಿಯ ನಾಯಕ ಸಿ. ಟಿ. ರವಿ ತವರು ಕ್ಷೇತ್ರ. 2023ರ ವಿಧಾನಸಭೆ ಚುನಾವಣೆಯಲ್ಲಿ ಅವರು ಸೋಲು ಕಂಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಮತ್ತು ಉಡುಪಿ ಜಿಲ್ಲೆ ಸೇರಿ ಒಂದು ಲೋಕಸಭಾ ಕ್ಷೇತ್ರವಾಗಿದೆ. ಹಾಲಿ ಸಂಸದರು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ.
ಜಿಲ್ಲೆ ಶೃಂಗೇರಿ, ಮೂಡಿಗೆರೆ, ಚಿಕ್ಕಮಗಳೂರು, ತರೀಕರೆ, ಕಡೂರು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಸಹ ಬಿಜೆಪಿ ಅಭ್ಯರ್ಥಿಗಳು ಸೋಲು ಕಂಡಿದ್ದಾರೆ.
ಆದ್ದರಿಂದ ಕಾಂಗ್ರೆಸ್ ಪ್ರಾಬಲ್ಯ ಹೊಂದಿರುವ ಜಿಲ್ಲೆಯಲ್ಲಿ ಲೋಕಸಭೆ ಚುನಾವಣೆಗೆ ಪಕ್ಷವನ್ನು ಸಂಘಟನೆ ಮಾಡುವ ಮಹತ್ವದ ಜವಾಬ್ದಾರಿ ಹೊಸ ಅಧ್ಯಕ್ಷ ದೇವರಾಜ್ ಶೆಟ್ಟಿ ಮೇಲಿದೆ. ಲೋಕಸಭೆ ಚುನಾವಣೆ ಬಳಿಕ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಎದುರಾಗಲಿದೆ.











Click it and Unblock the Notifications