Get Updates
Get notified of breaking news, exclusive insights, and must-see stories!

ದತ್ತ ಜಯಂತಿ ಉತ್ಸವ; ಅನುಸೂಯಾ ದೇವಿ ಪೂಜೆ ಸಂಪನ್ನ, ಪಡಿ ಸಂಗ್ರಹ

ಚಿಕ್ಕಮಗಳೂರು, ಡಿಸೆಂಬರ್ 18: ಭಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ನಡೆಯುತ್ತಿರುವ ದತ್ತಜಯಂತಿ ಉತ್ಸವದ ಅಂಗವಾಗಿ ಶುಕ್ರವಾರ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದ ಸಾವಿರಾರು ಮಹಿಳೆಯರು ದತ್ತಪೀಠಕ್ಕೆ ತೆರಳಿ ಅನುಸೂಯ ದೇವಿ ದರ್ಶನ ಪಡೆದು ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡರು.

ಚಿಕ್ಕಮಗಳೂರು ತಾಲೂಕಿನ ಇನಾಂ ದತ್ತಾತ್ರೇಯ ಪೀಠದ ಕಬ್ಬಿಣದ ಸರಪಳಿಯೊಳಗೆ ಸಾಗಿ ಗುಹೆಯೊಳಗಿನ ಅನುಸೂಯ ದೇವಿ ಹಾಗೂ ದತ್ತಾತ್ರೇಯರ ಪಾದುಕೆ ದರ್ಶನ ಪಡೆದ ಬಳಿಕ ಇನಾಂ ದತ್ತಪೀಠ ಆವರಣದಲ್ಲಿನ ಹೋಮ ಮಂಟಪದಲ್ಲಿ ದತ್ತಾತ್ರೇಯರಿಗೆ ಹಾಗೂ ಅನುಸೂಯ ದೇವಿಗೆ ಅತ್ರಿ ಪೂಜೆ ಹಾಗೂ ದತ್ತಾತ್ರೇಯರಿಗೆ ಕಲ್ಪ ಪೂಜೆ ಹಾಗೂ ಗಣಪತಿ ಹೋಮವನ್ನು ನೇರವೇರಿಸಲಾಯಿತು.

ಶುಭ್ರವೃತಪ್ರಾಣಾ ಮಾತಾಜಿ ನೇತೃತ್ವದಲ್ಲಿ ಅರ್ಚಕರು ಪೂರ್ಣಾಹುತಿ ನೇರವೇರಿಸಿದರು. ಖಾಂಡ್ಯದ ಕೇಶವ ಮೂರ್ತಿ ತಂಡದಿಂದ ಹೋಮ ಹವನ ವಿಶೇಷ ಪೂಜೆಗಳನ್ನು ನೇರವೇರಿಸಲಾಯಿತು.

Chikkamagaluru: Datta Jayanti 2021: Thousands of Devotees Took Anasooya Devi Darshan

ನಂತರ ನಡೆದ ಧಾರ್ಮಿಕ ಸಭೆಯಲ್ಲಿ ಆದಿಶಕ್ತಿ ನಗರದ ಶಾರದ ಮಠದ ಶುಭ್ರವೃತಪ್ರಾಣಾ ಮಾತಾಜಿ ಮಾತನಾಡಿದರು. ದತ್ತಪೀಠದ ಪವಿತ್ರ ವಾತಾವರಣ ಆಧ್ಯಾತ್ಮಿಕವಾದ ಚಿಂತನೆಗಳನ್ನು ಮನಸ್ಸಿನಲ್ಲಿ ಮೂಡಿಸುತ್ತದೆ ಅದಕ್ಕೆ ನಾವೆಲ್ಲರೂ ಸಾಕ್ಷಿಯಾಗಿದ್ದೇವೆ ಎಂದರು.

ಈ ಜಾಗ ಅತ್ರಿಮುನಿ, ಅನುಸೂಯ ದೇವಿ ತಪ್ಪಸ್ಸು ಮಾಡಿದ ಜಾಗವಾದ್ದರಿಂದ ಆಧ್ಯಾತ್ಮಿಕ ಭಾವ ಹೆಚ್ಚಾಗುತ್ತದೆ. ಆ ಅನುಭವವನ್ನು ನಾವು ಪಡೆಯಬೇಕು ಎಂದು ಹೇಳಿದರು. ಆಧ್ಯಾತ್ಮಿಕ ಜೀವನದಲ್ಲಿ ನಮಗೆ ಯಾವ ದೇವರು ಇಷ್ಟವೋ ಆ ದೇವರನ್ನು ನಾವು ಪೂಜಿಸಬಹುದು ಸಂಪೂರ್ಣ ಮನಸ್ಸು ಪೂರ್ವಕವಾಗಿ ನಾವು ಪೂಜೆ ಮಾಡಬೇಕು ಎಲ್ಲದಕ್ಕಿಂತ ಹೆಚ್ಚಾಗಿ ನಮ್ಮೊಳಗೆ ಭಗವಂತ ಇದ್ದಾನೆ. ಅವನನ್ನು ಅತ್ಯಂತ ಭಕ್ತಿ ಹಾಗೂ ಪ್ರೀತಿಯಿಂದ ಪೂಜಿಸಬೇಕು ಎಂದು ಭಕ್ತರಿಗೆ ತಿಳಿಸಿದರು.

ನಮ್ಮ ದೇವಸ್ಥಾನಗಳು ಹೆಚ್ಚಾಗಿ ಪರ್ವತ, ನದಿಗಳ ಬಳಿ ಇರುವುದಕ್ಕೆ ಅಲ್ಲಿನ ಸುಂದರ ಪರಿಸರ ಕಾರಣ. ಅಲ್ಲಿ ನಾವು ಬಂದು ಭಗವಂತನನ್ನು ಆರಾಧನೆ ಮಾಡಬೇಕು, ಪ್ರಕೃತಿ ಜೊತೆಗೆ ನಾವು ಒಂದಾಗಬೇಕು. ಭಗವಂತ ನಮ್ಮೊಳಗೆ ಹಾಗೂ ನಮ್ಮ ಹೊರಗೂ ಸಹ ಇದ್ದಾನೆ ಅದನ್ನು ನಾವು ನಮ್ಮದೇ ರೀತಿಯಲ್ಲಿ ಕಂಡುಕೊಳ್ಳಬೇಕು ಎಂದು ತಿಳಿಸಿದರು.

Chikkamagaluru: Datta Jayanti 2021: Thousands of Devotees Took Anasooya Devi Darshan

ಯಾರಿಗೆ ಮತ್ಸರ ಇಲ್ಲವೋ, ಅಸೂಯೆ ಇಲ್ಲವೋ, ಎಲ್ಲರನ್ನು ತಮ್ಮವರಾಗಿ ಮಾಡಿಕೊಂಡಿರುತ್ತಾರೆಯೋ ಅವರೇ ಅನುಸೂಯೆಯ ಗುಣವುಳ್ಳುವರು. ಅಂತಹವರು ಪ್ರೀತಿಸುತ್ತಾರೆ, ಎಲ್ಲರನ್ನು ಗೆಲ್ಲುತ್ತಾರೆ ಎಂದು ಹೇಳಿದರು. ನಮ್ಮಲ್ಲಿ ಸತ್ವಗುಣ, ಋಜ್ವಗುಣ ಹಾಗೂ ತಾಮಸಿಕ ಗುಣವುಳ್ಳವರು ಇರುತ್ತಾರೆ. ಆದರೆ ತಾಮಸಿಕ ಗುಣವನ್ನು ಬಿಟ್ಟು ಸತ್ವಗುಣದೆಡೆಗೆ ಸಾಗಬೇಕು ಆಗ ನಾವು ದಯಾಸಂಪನ್ನರಾಗುತ್ತೇವೆ. ಅಂತಹ ಗುಣವನ್ನು ಹೊಂದಿದವರೇ ಅನುಸೂಯಾ ದೇವಿ ಎಂದು ಕಥೆಯ ಮೂಲಕ ತಿಳಿಸಿದರು.

ದತ್ತಮಾಲಾಧಾರಿಗಳಿಗೆ ಹಾಸನ ಜಿಲ್ಲಾಧಿಕಾರಿ ಅವಮಾನ; ಸಿ.ಟಿ‌. ರವಿ ಖಂಡನೆ
ದತ್ತ ಮಾಲಾಧಾರಿಗಳು ಕುಡಿದು ಶೋಭಾಯಾತ್ರೆಗೆ ತೆರಳುತ್ತಾರೆಂಬ ಹಾಸನ ಜಿಲ್ಲಾಧಿಕಾರಿ ಬಳಸಿರುವ ಭಾಷೆ ಅಗೌರವ ತರುವ ಸಂಗತಿಯಾಗಿದೆ. ಇದು ಖಂಡನೀಯವಾಗಿದ್ದು, ಅವರು ಆದೇಶವನ್ನು ಹಿಂಪಡೆಯಬೇಕು ಎಂದು ಚಿಕ್ಕಮಗಳೂರು ಶಾಸಕ ಸಿ.ಟಿ. ರವಿ ಆಗ್ರಹಿಸಿದರು.

ದತ್ತ ಜಯಂತಿ ಹಿನ್ನೆಲೆಯಲ್ಲಿ ಹಾಸನ ಮಾರ್ಗವಾಗಿ ಬರುವ ದತ್ತಮಾಲಾಧಾರಿಗಳು ಮದ್ಯಪಾನ ಮಾಡಿ ದುರ್ವರ್ತನೆ ತೋರುತ್ತಾರೆ ಎಂಬ ಉದ್ದೇಶದಿಂದ ಹಾಸನ ಜಿಲ್ಲಾಧಿಕಾರಿ ಮದ್ಯದಂಗಡಿಯನ್ನು ಬಂದ್ ಮಾಡಿ ಆದೇಶ ಹೊರಡಿಸಿದ್ದು, ಇದಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ. ರವಿ ಚಿಕ್ಕಮಗಳೂರಿನಲ್ಲಿ ಖಂಡನೆ ವ್ಯಕ್ತಪಡಿಸಿದ್ದಾರೆ.

Chikkamagaluru: Datta Jayanti 2021: Thousands of Devotees Took Anasooya Devi Darshan

ಜಿಲ್ಲಾಧಿಕಾರಿಗಳು ದತ್ತ ಮಾಲಾಧಾರಿಗಳನ್ನು ಅವಹೇಳನ ಮಾಡುವ ರೀತಿಯಲ್ಲಿ ನೋಟಿಸ್‌ನಲ್ಲಿ ಚಿತ್ರಿಸಿದ್ದಾರೆ. ಅವರು ಆದೇಶದಲ್ಲಿ ಹೇಳಿರುವ ರೀತಿ ಅವರ ತಪ್ಪು ಕಲ್ಪನೆಯನ್ನು ಎತ್ತಿ ತೋರಿಸುತ್ತದೆ. ಒಂದು ರೀತಿ ಅವಮಾನ ಮಾಡುವ ರೀತಿಯಲ್ಲಿ ಆದೇಶವನ್ನು ಹೊರಡಿಸಿದ್ದಾರೆ ಆದ್ದರಿಂದ ಈ ಕುರಿತು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

ಇನ್ನು ಇದೇ ವೇಳೆ ಎಂಇಎಸ್ ಪುಂಡಾಟಿಕೆ ಕುರಿತು ಮಾತನಾಡಿದ ಸಿ.ಟಿ. ರವಿ, ಕೆಲವರು ಅರಾಜಕತೆ ಹಾಗೂ ಸಂಘರ್ಷವನ್ನು ಹುಟ್ಟು ಹಾಕಬೇಕೆಂದು ಸಂಚು ನಡೆಸಿದ್ದು, ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಕನ್ನಡ ಬಾವುಟ ಸುಟ್ಟಿದ್ದು ಹಾಗೂ ಇಲ್ಲಿ ಶಿವಾಜಿ ಮಹಾರಾಜರ ಪ್ರತಿಮೆಗೆ ಮಸಿ ಬಳಿಯುವ ಕೆಲಸ ಮಾಡಿರುವ ಹಿಂದೆ ಮಹಾರಾಷ್ಟ್ರ ಹಾಗೂ ಕರ್ನಾಟಕದ ನಡುವೆ ಸಂಘರ್ಷ ಆಗಲಿ ಎಂದು ಸೃಷ್ಟಿ ಮಾಡಿರುವ ಸಂಚು ಇದಾಗಿದೆ ಎಂದು ಹೇಳಿದರು.

ಸಾರ್ವಜನಿಕರು ಈ ಹಿನ್ನೆಲೆಯಲ್ಲಿ ಅರಾಜಕತಾವಾದಿಗಳ ಸಂಚಿಗೆ ಬಲಿಯಾಗಬಾರದು, ನಾವು ಸೌಹಾರ್ದತೆ ಹಾಗೂ ಶಾಂತಿಯನ್ನು ಕಾಪಾಡಬೇಕಿದೆ. ಮಹಾರಾಷ್ಟ್ರದಲ್ಲಿ ಲಕ್ಷಾಂತರ ಕನ್ನಡಿಗರು ಇದ್ದಾರೆ ಕರ್ನಾಟಕದಲ್ಲಿ ಲಕ್ಷಾಂತರ ಜನ ಮರಾಠಿಗರು ಇದ್ದಾರೆ. ನಮ್ಮೆಲ್ಲರ ಭಾವನೆ ರಾಷ್ಟ್ರೀಯತೆಯ ಜೊತೆಗೆ ಹಾಸು ಹೊಕ್ಕಾಗಿದೆ. ಇದಕ್ಕೆ ಧಕ್ಕೆ ತರುವ ಸಂಚು ನಡೆಸಲಾಗುತ್ತಿದ್ದು, ಎಚ್ಚರದಿಂದಿರುವ ಅಗತ್ಯ ಇದೆ ಎಂದು ತಿಳಿಸಿದರು.

ದತ್ತಜಯಂತಿ ಹಿನ್ನೆಲೆ ಪಡಿ ಸಂಗ್ರಹ
ದತ್ತ ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಶನಿವಾರ ಸಿ.ಟಿ. ರವಿ ನೇತೃತ್ವದಲ್ಲಿ ದತ್ತ ಮಾಲಾಧಾರಿಗಳಿಂದ ಪಡಿ ಸಂಗ್ರಹ ಮಾಡಲಾಯಿತು. ಚಿಕ್ಕಮಗಳೂರು ನಗರದ ನಾರಯಣಪುರ, ರಾಘವೇಂದ್ರ ಮಠದ ರಸ್ತೆಯಲ್ಲಿ ಭಿಕ್ಷಾಟನೆ ಮಾಡುವ ಮೂಲಕ ಪಡಿ ಸಂಗ್ರಹಿಸಲಾಯಿತು. ಈ ವೇಳೆ ಸ್ಥಳೀಯರು ಬೆಲ್ಲ, ಅಕ್ಕಿ, ಎಲೆ, ಅಡಿಕೆ, ಕೊಬ್ಬರಿ, ಬಾಳೆಹಣ್ಣು ನೀಡಿದರು. ಇಂದು ಸಂಗ್ರಹ ಮಾಡಿದ ಪಡಿಯನ್ನು ನಾಳೆ ಇರುಮುಡಿ ರೂಪದಲ್ಲಿ ದತ್ತಾತ್ರೇಯ ಸ್ವಾಮಿಗೆ ಮಾಲಾಧಾರಿಗಳು ಅರ್ಪಿಸಲಿದ್ದಾರೆ.

ಅದ್ಧೂರಿ ಸಂಕಿರ್ತನಾ ಯಾತ್ರೆ
ದತ್ತಜಯಂತಿ ಅಂಗವಾಗಿ ನಗರದಲ್ಲಿ ಅನುಸೂಯದೇವಿ ಪೂಜೆ ಹಾಗೂ ಸಂಕೀರ್ತನಾ ಯಾತ್ರೆ ವಿಜೃಂಭಣೆಯಿಂದ ಜರುಗಿತು. ಶುಕ್ರವಾರ ಬೆಳಿಗ್ಗೆ ನಗರದ ಬೋಳರಾಮೇಶ್ವರ ದೇವಸ್ಥಾನ ಆವರಣದಲ್ಲಿ ವಿಶ್ವಹಿಂದೂ ಪರಿಷತ್ ರಾಷ್ಟ್ರೀಯ ಉಪಾಧ್ಯಕ್ಷೆ ಡಾ. ವಿಜಯಲಕ್ಷ್ಮಿ ದೇಶಮಾನೆ ಅನುಸೂಯ ದೇವಿ ಪೂಜೆ ಹಾಗೂ ಸಂಕೀರ್ತನ ಯಾತ್ರೆಗೆ ಚಾಲನೆ ನೀಡಿದರು.

ಸಂಕೀರ್ತನ ಯಾತ್ರೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಹಾಗೂ ಜಿಲ್ಲೆಯ ವಿವಿಧ ತಾ ಲ್ಲೂಕುಗಳಿಂದ ಸಾವಿರಾರು ಮಹಿಳೆಯರು ಕೇಸರಿ ಸೀರೆ ಉಟ್ಟು, ಕೇಸರಿ ಶಾಲುಹೊದ್ದು ಕೇಸರಿ ಬಾವುಟಗಳನ್ನು ಕೈಯಲ್ಲಿ ಹಿಡಿದು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಐ.ಜಿ. ರಸ್ತೆಯ ಎರಡು ಇಕ್ಕೆಲಗಳಲ್ಲೂ ಸರತಿ ಸಾಲಿನಲ್ಲಿ ಶಿಸ್ತುಬದ್ಧಾಗಿ ಸಾಗಿದ ಮಹಿಳೆಯರು ಮೆರೆವಣಿಗೆಯುದ್ದಕ್ಕೂ ದತ್ತಪೀಠ ಹಿಂದೂಗಳ ಪೀಠ, ದತ್ತಪೀಠವನ್ನು ಹಿಂದೂಗಳಿಗೆ ಒಪ್ಪಿಸಬೇಕು ಎಂದು ಘೋಷಣೆಗಳನ್ನು ಕೂಗಿದರು. ಮೆರವಣಿಗೆಯ ಮಧ್ಯೆ ತಂಡೋಪ ತಂಡವಾಗಿ ಸಾಗುತ್ತಿದ್ದ ಮಹಿಳೆಯರ ಗುಂಪು ದೇವರ ಭಜನೆ, ಕೀರ್ತನೆಗಳನ್ನು ಹಾಡುತ್ತಾ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಸಮೀಪದಲ್ಲಿರುವ ಕಾಮಧೇನು ಗಣಪತಿ ದೇವಸ್ಥಾನವನ್ನು ತಲುಪಿದರು.

ಅನುಸೂಯ ದೇವಿ ಪೂಜೆ ಹಾಗೂ ಸಂಕೀರ್ತನ ಯಾತ್ರೆಯಲ್ಲಿ ಶಾರದ ಮಠದ ಶುಭ್ರ ವೃತ್ತಪ್ರಾಣ ಮಾತಾಜೀ, ಗೋಪ್ರಾಣಾ ಮಾತಾಜೀ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ. ರವಿ, ಭಜರಂಗದಳ ಪ್ರಾಂತ ಸಂಯೋಜಕ ರಘು ಸಕಲೇಶಪುರ, ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಶ್ರೀಕಾಂತ್ ಪೈ, ಪಲ್ಲವಿ ಸಿ.ಟಿ. ರವಿ ಸೇರಿದಂತೆ ರಾಜ್ಯ ಹಾಗೂ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಾವಿರಾರು ಮಹಿಳೆಯರು ಇದ್ದರು.

Recommended Video

      ಸಿಡಿಲು ಮಿಂಚಿನಿಂದ ಇಂಗ್ಲೆಂಡ್ & ಅಸ್ಟ್ರೇಲಿಯಾ ಆಟಗಾರರು ಎಸ್ಕೇಪ್ ಆಗಿದ್ದು ಹೇಗೆ? | Oneindia Kannada

      ಬಿಗಿ ಪೊಲೀಸ್ ಬಂದೋಬಸ್ತ್

      ಸಂಕೀರ್ತನ ಯಾತ್ರೆಯ ಅಂಗವಾಗಿ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ನಗರದ ಪ್ರಮುಖ ವೃತ್ತಗಳು ಸೇರಿದಂತೆ ಸೂಕ್ಷ್ಮ, ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ವಿವಿಧ ಪೊಲೀಸ್ ತುಕಡಿಗಳನ್ನು ನೇಮಿಸಲಾಗಿತ್ತು. ಡಾಗ್ ಸ್ಕ್ವಾಡ್ ಕೂಡ ಕಾರ್ಯಪ್ರವೃತ್ತವಾಗಿತ್ತು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ ಹಿರಿಯ ಅಧಿಕಾರಿಗಳು ಗಸ್ತು ತಿರುತ್ತಿರುವುದು ಕಂಡು ಬಂತು.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+