"ಮಣ್ಣೆತ್ತಿದ್ದು ನೀವಲ್ಲ"; ಚಿಕ್ಕಮಗಳೂರಿನಲ್ಲಿ ಎಚ್ ಡಿಕೆಗೆ ಟಾಂಗ್ ನೀಡಿದ ಸಿ.ಟಿ.ರವಿ
Recommended Video
ಚಿಕ್ಕಮಗಳೂರು, ಆಗಸ್ಟ್ 21: "ಭೂಕುಸಿತದ ಮಣ್ಣನ್ನು ಕುಮಾರಸ್ವಾಮಿ, ಗುಂಡೂರಾವ್ ತೆಗೆಸಿದ್ದಾ?. ನಮ್ಮ ಸರ್ಕಾರ, ಅಧಿಕಾರಿಗಳು ಹಗಲು ರಾತ್ರಿ ಕೆಲಸ ಮಾಡಿದ್ದಾರೆ" ಎಂದು ಮಾಜಿ ಸಿಎಂ ಕುಮಾರಸ್ವಾಮಿಗೆ ಸಚಿವ ಸಿ.ಟಿ ರವಿ ಟಾಂಗ್ ನೀಡಿದ್ದಾರೆ.
ಚಿಕ್ಕಮಗಳೂರಿನಲ್ಲಿ ನೆರೆ ಹಾವಳಿ ಪ್ರದೇಶಕ್ಕೆ ಇಂದು ಭೇಟಿ ನೀಡಿದ್ದ ಅವರು, ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಗಳನ್ನು ವೀಕ್ಷಿಸಿದರು. ಅಲ್ಲಿನ ಜನರೊಂದಿಗೆ ಮಾತುಕತೆ ನಡೆಸಿದರು. ಮೂಡಿಗೆರೆಯ ಮಲೆಮನೆ ಗ್ರಾಮಕ್ಕೆ ಭೇಟಿ ನೀಡಿದ್ದ ಸಂದರ್ಭ, ಮೊನ್ನೆ ಮೂಡಿಗೆರೆಯಲ್ಲಿ, ರಾಜ್ಯ ಸರ್ಕಾರ ಸಂತ್ರಸ್ತರ ನೆರವಿಗೆ ಬರಲು ತಡ ಮಾಡ್ತಿದೆ ಎಂದಿದ್ದ ಎಚ್ಡಿಕೆ ವಿರುದ್ಧ ಮಾತನಾಡಿದರು.
"ನಾವು ನಿಧಾನ ಮಾಡ್ತಿಲ್ಲ. ಅಧಿಕಾರಿಗಳು ಕೆಲಸ ಮಾಡ್ತಿದ್ದಾರೆ. ಸರ್ಕಾರ ಕೂಡ ಕೆಲಸ ಮಾಡ್ತಿದೆ. ಮೊದಲು ಇಲ್ಲಿಗೆ ಬರಲು ರಸ್ತೆ ಸಂಪರ್ಕವೂ ಇರಲಿಲ್ಲ. ಈ ವಿಚಾರದಲ್ಲಿ ರಾಜಕೀಯ ಮಾಡೋದು ಸರಿಯಲ್ಲ. ಕುಮಾರಸ್ವಾಮಿ ಅವರ ಅನುಭವ, ಸಲಹೆಯನ್ನು ಧಾರೆ ಎರೆಯಲಿ. ಆದರೆ ರಾಜಕೀಯ ಮಾಡೋದಕ್ಕೆ ಬೇರೆ ವೇದಿಕೆ ಇದೆ" ಎಂದರು.

ಇದೇ ಸಮಯದಲ್ಲಿ ಸಚಿವ ಮಾಧುಸ್ವಾಮಿ ಸಂತ್ರಸ್ತರಿಗೆ ಭರವಸೆ ನೀಡಿದರು. "ಕೇಂದ್ರ ಸರ್ಕಾರ ನೆರೆ ನಷ್ಟಕ್ಕೆ ಅನುದಾನ ಬಿಡುಗಡೆ ಮಾಡಿದೆ. ಈಗಾಗಲೇ ರಾಜ್ಯ ಸರ್ಕಾರ ಸಂತ್ರಸ್ತರಿಗೆ ಸ್ಪಂದಿಸುವ ಕೆಲಸ ಮಾಡಿದೆ. ಕೇಂದ್ರದ ಹಣಕಾಸು ಸಚಿವರು ರಾಜ್ಯಕ್ಕೆ ಭೇಟಿ ನೀಡಿರುವ ಹಿನ್ನಲೆಯಲ್ಲಿ ರಾಷ್ಟ್ರೀಯ ವಿಪತ್ತು ಘೋಷಣೆ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ" ಎಂದರು.
"ಬೆಳೆಹಾನಿ ಪರಿಹಾರದ ಸಹಾಯ ಧನ ಪರಿಷ್ಕರಣೆ ಆಗಲಿದೆ. ಶಾಶ್ವತ ಪರಿಹಾರದತ್ತ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಚಿಂತನೆ ನಡೆಸಿದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಎಲ್ಲಿಯೂ ತಡ ಮಾಡದೇ ರಾಜ್ಯ ಸರ್ಕಾರ ಭರದಿಂದ ಕೆಲಸ ಮಾಡಿದೆ" ಎಂದು ತಿಳಿಸಿದರು.












Click it and Unblock the Notifications