ಸಿದ್ದರಾಮಯ್ಯ ಬಾಯಿಯಲ್ಲಿ ಉಲ್ಟಾ ಮಚ್ಚೆಯಿದೆ; ಸಿ. ಟಿ. ರವಿ
ಚಿಕ್ಕಮಗಳೂರು, ಆಗಸ್ಟ್ 15; " ಸಿದ್ದರಾಮಯ್ಯ ಬಾಯಲ್ಲಿ ಉಲ್ಟಾ ಮಚ್ಚೆ ಇರಬೇಕು. ಹಾಗಾಗಿ ಸಿದ್ದರಾಮಯ್ಯ ಹೇಳಿದ್ದೆಲ್ಲಾ ಉಲ್ಟಾ ಆಗುತ್ತದೆ" ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಚಿಕ್ಕಮಗಳೂರು ಬಿಜೆಪಿ ಶಾಸಕ ಸಿ. ಟಿ. ರವಿ ಹೇಳಿದರು.
ಭಾನುವಾರ ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ಅಪ್ಪನಾಣೆಗೂ ಮೋದಿ ಪ್ರಧಾನಿಯಾಗಲ್ಲ ಎಂದು ಸಿದ್ದರಾಮಯ್ಯ ಈ ಹಿಂದೆ ಹೇಳಿದ್ದರು. ಆದರೆ ಮೋದಿ ಅವರು ಎರಡು ಸರಿ ಪ್ರಧಾನಮಂತ್ರಿಯಾಗಿದ್ದಾರೆ. ಅವರು ಹೇಳಿದ್ದೆಲ್ಲಾ ಉಲ್ಟಾ ಆಗುತ್ತದೆ" ಎಂದು ವ್ಯಂಗ್ಯವಾಡಿದರು.
"ಸಿದ್ದರಾಮಯ್ಯ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತದೆ ಅಂತ ಹೇಳಿದ್ದರು. ಆದರೆ ಬಂದ್ರಾ?. ಅವರು ಏನು ಹೇಳುತ್ತಾರೋ ಅದಕ್ಕೆ ತದ್ವಿರುದ್ಧವಾಗಿ ಎಲ್ಲವೂ ನಡೆಯುತ್ತದೆ. ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಅಂದರೆ ನೂರಕ್ಕೆ ನೂರು ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ, ಬಿಜೆಪಿ ಉಳಿಯಲ್ಲ ಎಂದು ಹೇಳಿದರೆ ಮತ್ತೆ ಐದು ವರ್ಷ ಬಿಜೆಪಿ ಅಧಿಕಾರವನ್ನು ಹಿಡಿಯುತ್ತದೆ" ಎಂದರು.

"ಕೆಲವರ ಬಾಯಲ್ಲಿ ಮಚ್ಚೆ ಇರುತ್ತದೆ, ಅವರು ಹೇಳಿದ್ದು ನಡೆಯುತ್ತದೆ. ಆದರೆ ಸಿದ್ದರಾಮಯ್ಯ ಅವರ ನಾಲಗೆಯಲ್ಲಿ ಉಲ್ಟಾ ಮಚ್ಚೆ ಇರಬೇಕು. ಹಾಗಾಗಿ ಅವರು ಹೇಳಿದ್ದೆಲ್ಲ ಉಲ್ಟಾ ಆಗುತ್ತದೆ" ಎಂದು ಸಿ. ಟಿ. ರವಿ ವಾಗ್ದಾಳಿ ನಡೆಸಿದರು.
"ಯಾರು ಹಾಲಿ ಪ್ರಧಾನಿಗಳನ್ನು ನರ ಹಂತಕ ಎಂದು ಕರೆದರೋ ಅವರು ನನಗೆ ಸಂಸ್ಕೃತಿಯ ಪಾಠ ಹೇಳುವ ಕೆಲಸ ಮಾಡುತ್ತಿದ್ದಾರೆ. ಯಾರು ಪ್ರಜಾಪ್ರಭುತ್ವದ ಕತ್ತು ಹಿಸುಕಿ ತುರ್ತುಪರಿಸ್ಥಿತಿ ಹೇರಿದರೋ, ಅವರು ಪ್ರಜಾಪ್ರಭುತ್ವದ ಬಗ್ಗೆ ನಮಗೆ ಪಾಠ ಹೇಳುತ್ತಿದ್ದಾರೆ. ಯಾರು ಅಂಬೇಡ್ಕರ್ ಅವರನ್ನು ಎರಡು ಚುನಾವಣೆಯಲ್ಲಿ ಸೋಲಿಸಿದರೋ ಅವರು ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತಿದ್ದಾರೆ" ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.












Click it and Unblock the Notifications