ಅಡ್ವಾನ್ಸ್ ಪಡೆದು ಕಾರ್ಮಿಕರು ನಾಪತ್ತೆ: ಕಾಫಿತೋಟದ ಮಾಲೀಕರು ಕಂಗಾಲು
ಚಿಕ್ಕಮಗಳೂರು, ಡಿಸೆಂಬರ್ 24 : ಬಿಹಾರ, ಒರಿಸ್ಸಾ, ಅಸ್ಸಾಂ ಹಾಗೂ ಬಾಂಗ್ಲಾದೇಶದಿಂದ ಬರುವ ಅಕ್ರಮ ವಲಸೆ ಕಾರ್ಮಿಕರಿಂದ ಜಿಲ್ಲೆಯ ಕಾಫಿಬೆಳೆಗಾರರು ಹೈರಾಣಾಗಿ, ಸಾವಿರ-ಲಕ್ಷಾಂತರ ರೂಪಾಯಿ ಹಣ ಕಳೆದುಕೊಳ್ಳುತ್ತಿದ್ದಾರೆ.
ಜಿಲ್ಲೆಯ ಚಿಕ್ಕಮಗಳೂರು ತಾಲೂಕಿನ ಆಲ್ದೂರು, ಆಹುತಿ, ಹಳಿಯೂರು, ಮೂಡಿಗೆರೆ, ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಭಾಗದಲ್ಲಿ ಕೂಲಿ ಕಾರ್ಮಿಕರು ಕಾಫಿತೋಟದ ಮಾಲೀಕರಿಗೆ ತಲೆನೋವು ತರಿಸಿದ್ದಾರೆ.
ಜಿಲ್ಲೆಯ ಚಿಕ್ಕಮಗಳೂರು, ಮೂಡಿಗೆರೆ, ಎನ್.ಆರ್.ಪುರ, ಶೃಂಗೇರಿ, ಕಳಸ ಹಾಗೂ ಕೊಪ್ಪದಲ್ಲಿ ಕಾಫಿ ಬೆಳೆದಿದ್ದಾರೆ. ಕಾಫಿತೋಟದಲ್ಲಿ ಈಗ ಕಾಫಿಹಣ್ಣು ಹುಲುಸಾಗಿ ಅರಳಿ ನಿಂತಿದೆ. ಆದರೆ ಕಾರ್ಮಿಕರೇ ಇಲ್ಲೇ ಫಸಲು ಉದುರುತ್ತಿದೆ. ಹವಾಮಾನ ವೈಪರಿತ್ಯದಿಂದ ಅಳಿದುಳಿದ ಬೆಳೆಯನ್ನ ಉಳಿಸಿಕೊಳ್ಳಲು ಮಾಲೀಕರು ಕೂಡ ಸಿಕ್ಕಂತಹಾ ಕಾರ್ಮಿಕರಿಗೆ ಎಲ್ಲಾ ಸೌಲಭ್ಯ ಕಲ್ಪಿಸಿ ಅಡ್ವಾನ್ಸ್ ಕೊಟ್ಟು ಕೆಲಸಕ್ಕೆ ಇಟ್ಟುಕೊಂಡರೂ ಕೂಡ ವಾರದ ಮೇಲೆ ಯಾರೂ ಒಂದೆಡೆ ಕೆಲಸ ಮಾಡುತ್ತಿಲ್ಲ.
ಎಲ್ಲರೂ ಕಾಫಿಕೊಯ್ಲಿನ ಸಮಯವನ್ನ ದಂಧೆ ಮಾಡಿಕೊಂಡಿದ್ದಾರೆ. ಅದರಲ್ಲಿ ಅಸ್ಸಾಂ ಹಾಗೂ ಬಾಂಗ್ಲಾದ ಅಕ್ರಮ ವಲಸಿಗರೆ ಹೆಚ್ಚು. ಕಾರ್ಮಿಕರನ್ನ ಕರೆದುಕೊಂಡು ಬರುವ ದಲ್ಲಾಳಿಗಳು 50 ಜನ ಕಾರ್ಮಿಕರನ್ನ ಇಟ್ಟುಕೊಂಡು 10 ಜನರನ್ನ ಒಬ್ಬರಿಗೆ ತೋರಿಸಿ 1 ಲಕ್ಷ ಅಡ್ವಾನ್ಸ್ ಪಡೆಯುತ್ತಾರೆ. ಅದೇ 10 ಜನ ತೋರಿಸಿ ಮತ್ತೊಬ್ಬರ ಬಳಿ 50 ಪಡೆಯುತ್ತಾರೆ. ವಾರ ಕೆಲಸ ಮಾಡುತ್ತಾರೆ. ಹೇಳ್ದೆ-ಕೇಳ್ದೆ ಕಾಲ್ಕಿತ್ತು. ಮತ್ತೊಂದು ತೋಟಕ್ಕೆ ಹೋಗುತ್ತಿದ್ದಾರೆ. ಕಾರ್ಮಿಕರ ಈ ನಡೆ ಬೆಳೆಗಾರರಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ.
ಕಾಫಿತೋಟದ ಮಾಲೀಕ ಸುಂದರೇಶ್ ಸೇರಿದಂತೆ 10ಕ್ಕೂ ಹೆಚ್ಚು ಕಾಫಿತೋಟದ ಮಾಲೀಕರಿಗೆ ಕಾರ್ಮಿಕರು ಮೋಸ ಮಾಡಿದ್ದಾರೆ. ಹಾಗಾಗಿ, ಮಾಲೀಕರು ಪೊಲೀಸರು ಕಾರ್ಮಿಕರು-ದಲ್ಲಾಳಿಗಳ ಮೇಲೆ ನಿಗಾ ಇಡಬೇಕೆಂದು ಮನವಿ ಮಾಡಿದ್ದಾರೆ. ಜಿಲ್ಲೆಯಲ್ಲಿ ಅರೇಬಿಕಾ ಹಾಗೂ ರೋಬೋಸ್ಟ್ ಎರಡೂ ಸೇರಿ ಸುಮಾರು ಒಂದು ಲಕ್ಷ ಹೆಕ್ಟೇರ್ನಲ್ಲಿ ಕಾಫಿಯನ್ನು ಬೆಳೆದಿದ್ದಾರೆ. ವರ್ಷಪೂರ್ತಿ ಕಾಫಿತೋಟದ ನಿರ್ವಹಣೆ, ಕೊಯ್ಲಿನ ಸಮಯದಲ್ಲಿ ಇಡೀ ಜಿಲ್ಲೆಗೆ ಲಕ್ಷಾಂತರ ಕಾರ್ಮಿಕರು ಬೇಕು. ಸ್ಥಳೀಯ ಕಾರ್ಮಿಕರು ಇದ್ದಾರೆ. ಆದರೆ ಕೊಯ್ಲಿನ ಸಮಯ ನವೆಂಬರ್-ಡಿಸೆಂಬರ್ನಲ್ಲಿ ಬರುವ ಒರಿಸ್ಸಾ, ಅಸ್ಸಾಂ, ಅಕ್ರಮ ಬಾಂಗ್ಲಾದೇಶದವರು ಮಾಲೀಕರಿಗೆ ತಲೆನೋವಾಗಿದ್ದಾರೆ. ಬಂದ ಒಂದು ಎರಡು ವಾರಗಳ ಕಾಲ ನಿರ್ಲಕ್ಷ್ಯವಾಗಿ ಕೆಲಸ ಮಾಡುತ್ತಾರೆ. ಆಮೇಲೆ ಹೇಳದೇ, ಕೇಳದೇ ಬೇರೆ ತೋಟಕ್ಕೆ ಕೆಲಸಕ್ಕೆ ಹೋಗುತ್ತಿದ್ದಾರೆ.
ಸಾಲ ಮಾಡಿ 50 ಸಾವಿರ, ಲಕ್ಷ ಅಡ್ವಾನ್ಸ್ ಕೊಡುವ ಮಧ್ಯಮ ವರ್ಗದ ಬೆಳೆಗಾರರು ಕಾರ್ಮಿಕರಿಂದಲೇ ಮತ್ತಷ್ಟು ಸಮಸ್ಯೆಗೀಡಾಗುತ್ತಿದ್ದಾರೆ. ಅದರಲ್ಲಿ ಇಲ್ಲಿನ ಭಾಷೆಯೂ ತಿಳಿಯದ ಕಾರ್ಮಿಕರನ್ನು ತೋರಿಸಿ ದಲ್ಲಾಳಿಗಳು ದಂಧೆ ಮಾಡುತ್ತಿದ್ದಾರೆ. ಕೆಲ ಕಾರ್ಮಿಕರು ಮಾಲೀಕರು ಮೇಲೆ ಹಲ್ಲೆ ಕೂಡ ಮಾಡುತ್ತಿದ್ದಾರೆ. ಕೆಲಸಕ್ಕೆ ಬಂದವರು ಹಳೇ ವೈಷಮ್ಯದಿಂದ ಕೊಲೆ ಮಾಡಿ ಹೂತುಹಾಕಿ ತಮ್ಮ ರಾಜ್ಯಕ್ಕೆ ವಾಪಸ್ ಹೋಗಿರುವ ಉದಾಹರಣೆಯೂ ಇದೆ. ಹಾಗಾಗಿ, ಪೊಲೀಸರು ಕಾರ್ಮಿಕರು-ದಲ್ಲಾಳಿಗಳ ಮೇಲೆ ತೀವ್ರ ನಿಗಾ ಇಡಬೇಕಿದೆ.