ಪ್ರವಾಹ ಸಂತ್ರಸ್ಥರನ್ನು ನಿಂದಿಸಿದ ಬಿಜೆಪಿ ಶಾಸಕ ಎಂ.ಪಿ. ಕುಮಾರಸ್ವಾಮಿ!
ಚಿಕ್ಕಮಗಳೂರು, ಆಗಸ್ಟ್ 11 : ಚಿಕ್ಕಮಗಳೂರು ಜಿಲ್ಲೆಯ ಜನರು ಪ್ರವಾಹದಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೂಡಿಗೆರೆ ಕ್ಷೇತ್ರದ ಬಿಜೆಪಿ ಶಾಸಕರು ಸಂತ್ರಸ್ತರು ಸಹಾಯ ಕೇಳಿದರೆ ಕೋಪಗೊಂಡು ಅವರನ್ನು ನಿಂದಿಸಿದ್ದಾರೆ.
ಮೂಡಿಗೆರೆ ಶಾಸಕ ಎಂ. ಪಿ. ಕುಮಾರಸ್ವಾಮಿ ಪ್ರವಾಹ ಸಂತ್ರಸ್ತ ಯುವಕನ ಜೊತೆ ಮಾತನಾಡಿರುವ ಆಡಿಯೋ ವೈರಲ್ ಆಗಿದೆ. ಮಳೆಯಲ್ಲಿ ಮನೆ ಕೊಚ್ಚಿ ಹೋಗಿದೆ ಸಹಾಯ ಮಾಡಿ ಎಂದು ಕೇಳಿದ ಯುವಕನನ್ನು ಶಾಸಕರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ಎಂ. ಪಿ. ಕುಮಾರಸ್ವಾಮಿ ಮೂಡಿಗೆರೆ ತಾಲೂಕಿನ ಮದುಗುಂಡಿ ಗ್ರಾಮದ ಯುವಕನ ಜೊತೆ ಅವಾಚ್ಯ ಶಬ್ದಗಳಿಂದ ಮಾತನಾಡಿದ್ದಾರೆ. "ಡಿಸಿ, ಎಸ್ಪಿನೇ ಬರೋಕೆ ಆಗ್ತಾ ಇಲ್ಲ, ನಾನೇನು ಮಾಡಲಿ" ಎಂದು ಕೋಪಗೊಂಡು ಸಂತ್ರಸ್ತರನ್ನು ಶಾಸಕರು ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಮದುಗುಂಡಿ ಗ್ರಾಮದ 20 ಹೆಚ್ಚು ಮನೆಗಳು ಮಳೆಯಿಂದಾಗಿ ಹಾನಿಗೀಡಾಗಿವೆ. ಮರುಸೂಣಿಗೆ ಹೊಳೆ ಅಬ್ಬರ ಹಾಗೂ ಗುಡ್ಡ ಕುಸಿತದಿಂದ ಅತಂತ್ರವಾಗಿರುವ ಜನರು ಸಹಾಯ ಮಾಡುವಂತೆ ಶಾಸಕರಿಗೆ ಕರೆ ಮಾಡಿದ್ದಾರೆ.
ಮುಂದುವರೆದ ಮಳೆಯ ಅಬ್ಬರ : ಕಾಫಿ ನಾಡಿನಲ್ಲಿ ಮಳೆಯ ರುದ್ರ ನರ್ತನ ಮುಂದುವರೆದಿದೆ. ಮನೆ ಮತ್ತು ತೋಟದ ಮೇಲೆ ಬೃಹತ್ ಗುಡ್ಡಗಳು ಕುಸಿದ ಘಟನೆ
ಚಿಕ್ಕಮಗಳೂರಿನ ಸಿರಿವಾಸೆ ಸಮೀಪದ ಅಡಲುಗದ್ದೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿತೀಶ್ ಹಾಗೂ ನಂದೀಶ್ ಮನೆ ಮೇಲೆ ಗುಡ್ಡ ಕುಸಿದಿದೆ. ಮನೆಯಲ್ಲಿದ್ದ ಕುಟುಂಬದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇಡೀ ಗ್ರಾಮವನ್ನೇ ಜನರು ತೊರೆದಿದ್ದು, ಸಿರಿವಾಸೆ ಗ್ರಾಮದಲ್ಲಿ ಎಲ್ಲರೂ ಆಶ್ರಯ ಪಡೆದಿದ್ದಾರೆ. ಸಿರಿವಾಸೆ-ಅಡಲುಗದ್ದೆ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಗ್ರಾಮಸ್ಥರು ಆತಂಕದಲ್ಲಿದ್ದಾರೆ.












Click it and Unblock the Notifications