ಹಿರೇಮಗಳೂರಿನಲ್ಲಿ ಬಿರುಕು ಬಿಟ್ಟ ಕೆರೆ ಏರಿ ರಸ್ತೆ; ಸ್ಥಳಕ್ಕೆ ಸಿ.ಟಿ.ರವಿ ಭೇಟಿ
ಚಿಕ್ಕಮಗಳೂರು, ಸೆಪ್ಟೆಂಬರ್ 11: ಚಿಕ್ಕಮಗಳೂರಿನಲ್ಲಿ ಕೆಲವು ದಿನಗಳಿಂದ ಮತ್ತೆ ಮಳೆಯ ವಾತಾವರಣ ಮುಂದುವರೆದಿದೆ. ಇದೀಗ ಮಳೆಯಿಂದ ಜಿಲ್ಲೆಯ ಹಿರೇಮಗಳೂರಿನ ದೊಡ್ಡ ಕೆರೆಯ ಏರಿ ಒಡೆಯುವ ಭೀತಿ ಎದುರಾಗಿದೆ.
ಚಿಕ್ಕಮಗಳೂರು ಹೊರವಲಯದಲ್ಲಿರುವ ಹಿರೇಮಗಳೂರು ಕೆರೆಯು ಹೆಚ್ಚಿನ ಹರಿವಿನಿಂದ ಒಡೆಯುವ ಆತಂಕವಿದ್ದು, ಕೆರೆ ಏರಿಯ ರಸ್ತೆಯಲ್ಲಿ ದೊಡ್ಡ ಪ್ರಮಾಣದ ಬಿರುಕು ಕಾಣಿಸಿಕೊಂಡಿರುವುದು ಭೀತಿಗೆ ಎಡೆ ಮಾಡಿಕೊಟ್ಟಿದೆ.

ಹೀಗೆ ರಸ್ತೆಯಲ್ಲಿ ಏಕಾಏಕಿ ಇಷ್ಟು ಪ್ರಮಾಣದ ಬಿರುಕು ಕಾಣಿಸಿಕೊಂಡಿರುವುದು ಕೆರೆ ಒಡೆಯುವ ಮುನ್ಸೂಚನೆ ನೀಡಿದೆ. ಕೆರೆ ಒಡೆದರೆ ಎಕರೆಗಟ್ಟಲೆ ಬೆಳೆಗಳು ಜಲಾವೃತವಾಗಲಿವೆ. ಬೆಳೆಗಳನ್ನು ಕಳೆದುಕೊಳ್ಳುವ ಚಿಂತೆ ಇಲ್ಲಿನ ನೂರಾರು ರೈತರನ್ನು ಕಾಡುತ್ತಿದೆ. ಇತ್ತ ಬಿರುಕು ಕಾಣಿಸಿಕೊಂಡಿರುವ ರಸ್ತೆಯಲ್ಲಿ ಭಯದಲ್ಲಿಯೇ ವಾಹನ ಸವಾರರು ಓಡಾಡುತ್ತಿದ್ದಾರೆ.
ಸ್ಥಳಕ್ಕೆ ಇಂದು ಸಚಿವ ಸಿ.ಟಿ.ರವಿ ಆಗಮಿಸಿ, ಬಿರುಕು ಬಿಟ್ಟ ಜಾಗವನ್ನು ಪರಿಶೀಲಿಸಿದರು. "ನಿನ್ನೆ ರಾತ್ರಿ ಕುಸಿದ ಹಿರೇಮಗಳೂರು ಕೆರೆ ಏರಿಯ ಪರಿಶೀಲನೆ ನಡೆಸಲಾಯಿತು. ಏರಿ ಕುಸಿದ ಕಾರಣ ಏರಿಯ ಮೇಲಿನ ರಸ್ತೆ ವಾಹನ ಸಂಚಾರಕ್ಕೆ ಯೋಗ್ಯವಾಗಿಲ್ಲ, ಈ ದಾರಿಯಲ್ಲಿ ಓಡಾಡುವ ಸಾರ್ವಜನಿಕರು ಜಾಗರೂಕರಾಗಿರಿ.
Recommended Video
ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಸಿ ಕೂಡಲೇ ಏರಿ ಹಾಗೂ ರಸ್ತೆಯನ್ನು ಸುಭದ್ರಗೊಳಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳನ್ನು ಶೀಘ್ರವಾಗಿ ತೆಗೆದುಕೊಳ್ಳುವಂತೆ ಸೂಚನೆ ನೀಡಲಾಗಿದೆ" ಎಂದು ತಿಳಿಸಿದ್ದಾರೆ.
ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ ಇದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿತ್ತು. ಐದು ದಿನಗಳ ಹಿಂದೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್ ಪುರ, ಬಾಳೆಹೊನ್ನೂರು, ಶೃಂಗೇರಿಯಲ್ಲಿ ಧಾರಾಕಾರ ಮಳೆ ಸುರಿದಿತ್ತು.












Click it and Unblock the Notifications