Chikkaballapur: ಕೆ.ಸುಧಾಕರ್, ಪ್ರದೀಪ್ ಈಶ್ವರ್ ಮತ್ತು ಕೆಪಿ ಬಚ್ಚೇಗೌಡರ ನಡುವೆ ತ್ರಿಕೋನ ಸ್ಪರ್ಧೆ
ಚಿಕ್ಕಬಳ್ಳಾಪುರ, ಏಪ್ರಿಲ್. 28: ರಾಜ್ಯ ವಿಧಾನಸಭಾ ಚುನಾವಣೆಗೆ ಚಿಕ್ಕಬಳ್ಳಾಪುರ ಜಿಲ್ಲೆ ಭರ್ಜರಿಯಾಗಿ ತಯಾರಾಗುತ್ತಿದೆ. ಕ್ಷೇತ್ರದಲ್ಲಿ ಆರೋಗ್ಯ ಸಚಿವ ಕೆ.ಸುಧಾಕರ್ ಹವಾ ಹೆಚ್ಚಾಗಿದೆ. ಇದರ ಜೊತೆಗೆ ಕಾಂಗ್ರೆಸ್ ಅಭ್ಯರ್ಥಿ ಪ್ರದೀಪ್ ಈಶ್ವರ್ ಐಯ್ಯರ್ ಆವೇಶದ ಮಾತುಗಳು ಮತ್ತು ಜೆಡಿಎಸ್ ಅಭ್ಯರ್ಥಿ ಕೆಪಿ ಬಚ್ಚೇಗೌಡ ಅವರ ಪ್ರಚಾರ ಕ್ಷೇತ್ರದಲ್ಲಿ ಚುನಾವಣಾ ಕಾವು ಹೆಚ್ಚಿಸಿದೆ.
ಜಿಲ್ಲೆಯ 5 ಕ್ಷೇತ್ರಗಳಿಂದ ಒಟ್ಟು 70 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಕಾಂಗ್ರೆಸ್ ಪ್ರದೀಪ್ ಈಶ್ವರ್ ಐಯ್ಯರ್ , ಬಿಎಸ್ಪಿಯಿಂದ ಪಿಲ್ಲ ಆಂಜಿನಪ್ಪ, ಜೆಡಿಎಸ್ ಪಕ್ಷದ ಅಭ್ಯರ್ಥಿ ಕೆ.ಪಿ.ಬಚ್ಚೇಗೌಡ, ಎಎಪಿ ಡಾ.ಎಂ.ಎಂ.ಪಾಷ, ಬಿಜೆಪಿ ಡಾ.ಕೆ.ಸುಧಕಾರ್, ಕರ್ನಾಟಕ ರಾಷ್ಟ್ರ ಸಮಿತಿ ಪಿ.ಆಂಜಿನಪ್ಪ, ಪಿಬಿಐ ಅಭ್ಯರ್ಥಿ ಬಿ.ಕೆ.ಪ್ರಸಾದ್, ಪಕ್ಷೇತರ ಅಭ್ಯರ್ಥಿಗಳಾಗಿ ಅಲ್ತಾಫ್ ಅಹಮದ್, ಎಚ್.ಸಿ.ಚಂದ್ರಶೇಖರ್, ಟಿ.ವೆಂಕಟಶಿವುಡು, ಎನ್.ಸುಧಾಕರ್, ಅಮಾನುಲ್ಲಾ ಕಣದಲ್ಲಿದ್ದಾರೆ.

ಆದರೆ ಸ್ಪರ್ಧೆಯಿರುವುದು ಮಾತ್ರ ಮೂವರ ಹಾಲಿ ಶಾಸಕ ಬಿಜೆಪಿಯ ಕೆ.ಸುಧಾಕರ್, ಕಾಂಗ್ರೆಸ್ನ ಪ್ರದೀಪ್ ಈಶ್ವರ್ ಐಯ್ಯರ್ ಮತ್ತು ಜೆಡಿಎಸ್ನ ಕೆಪಿ ಬಚ್ಚೇಗೌಡರ ನಡುವೆ. ಇವರುಗಳ ಗೆಲುವಿಗೆ ಪೂರಕ ಮತ್ತು ಮಾರಕವಾಗುವ ಅಂಶಗಳನ್ನು ತಿಳಿಯೋಣ.
*ಬಿಜೆಪಿ ಅಭ್ಯರ್ಥಿ ಕೆ.ಸುಧಾಕರ್*
2019 ರ ಉಪಚುನಾವಣೆಯಲ್ಲಿ ಮತ್ತೊಮ್ಮೆ ಜಯಗಳಿಸಿರುವ ಭಾರತೀಯ ಜನತಾ ಪಾರ್ಟಿಯ ಡಾ. ಕೆ ಸುಧಾಕರ್ ಇಲ್ಲಿನ ಹಾಲಿ ಶಾಸಕ. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ನ ಎಂ ಅಂಜನಪ್ಪ ಅವರ ವಿರುದ್ಧ ಭರ್ಜರಿ 34, 801 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದರು. ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಇದನ್ನು ಬಿಜೆಪಿಯ ಕೋಟೆಯನ್ನಾಗಿಸಿರುವುದು ಆಪರೇಷನ್ ಕಮಲಕ್ಕೆ ಒಳಗಾದ ಕೆ.ಸುಧಾಕರ್.

ಸುಧಾಕರ್ ಬಿಜೆಪಿ ತೆಕ್ಕೆಗೆ ಜಾರುವ ಮುನ್ನ 2013ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಎ.ವಿ.ಭೈರೇಗೌಡ ಅವರು 3,910 ಮತಗಳನ್ನು ಪಡೆದಿದ್ದರು. 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಡಾ.ಜಿ.ವಿ.ಮಂಜುನಾಥ್ 5,576 ಮತಗಳನ್ನು ಪಡೆದಿದ್ದರು. ಹೀಗಾಗಿ ಬಿಜೆಪಿಯ ಬುನಾದಿ ಆರಂಭವಾಗುವುದೇ ಸುಧಾಕರ್ ಬಿಜೆಪಿಗೆ ಸೇರ್ಪಡೆಯಾದ ಮೇಲೆ. ಈ ಬಾರಿಯೂ ಸುಧಾಕರ್ ಭಾರಿ ಪ್ರಚಾರ ನಡೆಸುತ್ತಿದ್ದು, ಚಿತ್ರ ನಟ ನಟಿಯರನ್ನು ಕ್ಷೇತ್ರದಲ್ಲಿ ಪ್ರಾಚರ ನಡೆಸಲು ಬಳಸಿಕೊಳ್ಳುತ್ತಿದ್ದಾರೆ. ಕಳೆದ ಬಾರಿ ಸುಧಾಕರ್ 84,389 ಮತಗಳನ್ನು ಪಡೆದಿದ್ದರು.
*ಜೆಡಿಎಸ್ ಅಭ್ಯರ್ಥಿ ಕೆಪಿ ಬಚ್ಚೇಗೌಡ*
ಚಿಕ್ಕಬಳ್ಳಾಪುರದಲ್ಲಿ ಜೆಡಿಎಸ್ ಪಕ್ಷವು ಮಾಜಿ ಶಾಸಕ ಕೆ.ಪಿ ಬಚ್ಚೇಗೌಡರಿಗೆ ಟಿಕೆಟ್ ಘೋಷಿಸಿದೆ. 2008ರ ಚುನಾವಣೆಯಲ್ಲಿ ಗೆದ್ದು ಶಾಸಕರಾಗಿದ್ದ ಬಚ್ಚೇಗೌಡ ಅವರನ್ನು 2013ರ ವಿಧಾನಸಭಾ ಚುನಾವಣೆಯಲ್ಲಿ ಡಾ.ಕೆ ಸುಧಾಕರ್ ಸೋಲಿಸಿ ಶಾಸಕರಾದರು. ಸುಧಾಕರ್ 74,914 ಮತಗಳನ್ನು ಪಡೆದರೆ ಬಚ್ಚೇಗೌಡರು 59,866 ಮತಗಳನ್ನು ಪಡೆದು 15,048 ಮತಗಳ ಅಂತರದಿಂದ ಸೋತಿದ್ದರು.

2013 ಮತ್ತು 2018ರ ಎರಡು ಚುನಾವಣೆಗಳಲ್ಲಿ ಸೋಲು ಕಂಡಿರುವ ಅವರನ್ನೇ ಜೆಡಿಎಸ್ ಮತ್ತೆ ಕಣಕ್ಕಿಳಿಸಿ ಅದೃಷ್ಟ ಪರೀಕ್ಷೆ ನಡೆಸುತ್ತಿದೆ. ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿರುವ ಅವರು ಸುಧಾಕರ್ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ತಾವು ಶಾಸಕನಾಗಿದ್ದಾಗ ಸಮಾನ್ಯ ಜನರಿಗೆ ಕೊಳವೆಬಾವಿ ಕೊರೆಸಲಾಗಿದ್ದು, ಮನೆ ಮನೆ ಭೇಟಿಯ ವೇಳೆ ಪಲಾನುಭವಿಗಳು ಧನ್ಯವಾದ ತಿಳಿಸುತ್ತಿದ್ದಾರೆ. ಗ್ರಾಮಗಳಲ್ಲಿ ತಮ್ಮ ಅವಧಿಯಲ್ಲಿ ರಸ್ತೆ ನಿರ್ಮಾಣ ಆಗಿದ್ದು, ಅಭಿವೃದ್ಧಿ ಆಧಾರದ ಮೇಲೆ ಮತ ಕೇಳುತ್ತಿದ್ದೇನೆ ಎಂದು ಹೇಳುತ್ತಿದ್ದಾರೆ.
*ಕಾಂಗ್ರೆಸ್ ಅಭ್ಯರ್ಥಿ ಪ್ರದೀಪ್ ಈಶ್ವರ್ ಐಯ್ಯರ್*
ಹೆಚ್ಚು ಟಿಕೆಟ್ ಆಕಾಂಕ್ಷಿಗಳಿದ್ದ ಕ್ಷೇತ್ರದಲ್ಲಿ ಕಾಂಗ್ರೆಸ್ ಈ ಬಾರಿ ಪ್ರದೀಪ್ ಈಶ್ವರ್ ಐಯ್ಯರ್ ಎಂಬ ಹೊಸ ಮುಖಕ್ಕೆ ಮಣೆ ಹಾಕಿದೆ. ಯುವ ಸಮೂಹದಲ್ಲಿ ಹೊಸ ಹುರುಪು ತುಂಬುತ್ತಿರುವ ಪ್ರದೀಪ್ ಈಶ್ವರ್, ಮತ್ತೆ ಚಿಕ್ಕಬಳ್ಳಾಪುರವನ್ನು ಕಾಂಗ್ರೆಸ್ ಭದ್ರಕೋಟೆ ಮಾಡುತ್ತಾರೆಯೇ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಭಾರಿ ಪ್ರಚಾರ ಆರಂಭಿಸಿರುವ ಇವರು, ತಮ್ಮ ಪ್ರಖರ ಮಾತುಗಳಿಂದ ಜನರನ್ನು ಸೆಳೆಯುತ್ತಿದ್ದಾರೆ.

ಈ ಬಾರಿ ರಾಜ್ಯದಲ್ಲಿ ಮತ್ತು ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದೇ ಬರುತ್ತದೆ ಎಂಬ ಭರವಸೆ ವ್ಯಕ್ತಡಿಸಿರುವ ಅವರು, ತಮ್ಮ ಆಸ್ತಿ ಬಗ್ಗೆ ಜನರಿಗೆ ಅನುಮಾನವಿದ್ದರೇ ಲೆಕ್ಕ ಕೊಡುತ್ತೇನೆ ಎಂದಿದ್ದಾರೆ. ಕಳೆದ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎಂ ಅಂಜನಪ್ಪ ಅವರು 49,588 ಮತಗಳನ್ನು ಪಡೆದಿದ್ದರು, ಸುಧಾಕರ್ ವಿರುದ್ಧ 34, 801 ಮತಗಳ ಅಂತರದಿಂದ ಸೋತಿದ್ದರು.












Click it and Unblock the Notifications