Chikkaballapur: ಗುಡಿಬಂಡೆ ಕೊಡಿ ಹರಿಯುವಲ್ಲಿ ಮೊಣಕಾಲುದ್ದ ಗುಂಡಿಗಳು: ವಾಹನ ಸವಾರರು ಹೈರಾಣ!
ಚಿಕ್ಕಬಳ್ಳಾಪುರ ನವೆಂಬರ್ 24: ಗುಂಡಿಗಳ ಸಮಸ್ಯೆ ಇಂದು ನಿನ್ನೆಯದ್ದಲ್ಲ. ಈ ಸಮಸ್ಯೆ ರಾಜ್ಯ ರಾಜಧಾನಿಯಿಂದ ಹಿಡಿದು ಪ್ರತಿಯೊಂದು ಜಿಲ್ಲೆಗಳಿಗೂ ವ್ಯಾಪಿಸಿದೆ. ಇದೊಂದು ಮುಗಿಯದ ಸಮಸ್ಯೆ ಅಂದರೆ ತಪ್ಪಾಗೋದಿಲ್ಲ. ಇದೀಗ ಈ ಸಮಸ್ಯೆಯಿಂದ ಚಿಕ್ಕಬಳ್ಳಾಪುರದ ಜನ ಕೂಡ ಬೇಸತ್ತು ಹೋಗಿದ್ದಾರೆ. ಮೊಣಕಾಲುದ್ದ ಆಳದ ಗುಂಡಿಗಳಿಂದಾಗಿ ಪ್ರಾಣವನ್ನು ಅಂಗೈಯಲ್ಲಿ ಹಿಡಿದು ಜನ ಪ್ರಯಾಣ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಹೌದು... ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದಿಂದ ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರ ಸೇರಿದಂತೆ ತಾಲೂಕಿನ ಬಹುತೇಕ ಗ್ರಾಮೀಣ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲಿ ವಾಹನ ಸವಾರರು ಅಕ್ಷರಶಃ ಆತಂಕದಲ್ಲೇ ಸಂಚರಿಸುವಂತಹ ವಾತಾವರಣ ಸೃಷ್ಟಿಯಾಗಿದೆ

ಅಮಾನಿ ಬೈರಸಾಗರ ಕೆರೆಯ ಕೊಡಿ ಹರಿಯುವ ಸ್ಥಳದಲ್ಲಿ ಪ್ರಯಾಣ ಮಾಡಲು ವಾಹನ ಸವಾರರು ಬೆದರಿ ಹೋಗಿದ್ದಾರೆ. ಇವುಗಳ ಮಧ್ಯೆ ಹಾಕಿರುವ ಕಂಬಿಗಳು ಮೇಲಕ್ಕೆದ್ದು ಬಲಿಗಾಗಿ ಕಾಯುತ್ತಿರುವಂತಿದ್ದು, ಈ ಗುಂಡಿಗಳನ್ನೇಲ್ಲಾ ತಪ್ಪಿಸಿ ಮುಂದೆ ಸಾಗುವಷ್ಟರಲ್ಲಿ ವಾಹನ ಸವಾರರು ಹೈರಾಣಾಗುತ್ತಿದ್ದಾರೆ.
ಹೌದು ಇತ್ತೀಚಿಗೆ ಸುರಿದ ಧಾರಾಕಾರ ಮಳೆಯಿಂದ ಒಂದೇ ರಾತ್ರಿಯಲ್ಲಿ ಕೊಡಿ ಬಿದ್ದ ಕೆರೆಯು ಸತತ ಹಲವು ದಿನಗಳಿಂದ ಕೊಡಿ ಹರಿಯುತ್ತಿರುವ ಹಿನ್ನಲೆಯಲ್ಲಿ ಜಿಲ್ಲಾ ಕೇಂದ್ರದಿಂದ ಪೆರೇಸಂದ್ರ -ಗುಡಿಬಂಡೆ ಮುಖ್ಯ ರಸ್ತೆಯಲ್ಲಿ ಪ್ರತಿನಿತ್ಯ ಸಂಚರಿಸುವ ಸಾವಿರಾರು ವಾಹನ ಸವಾರರು ಗುಂಡಿಗಳಿಂದ ಕೂಡಿದ್ದು ಈ ರಸ್ತೆಯಲ್ಲಿ ಸಂಚರಿಸಲು ರಸ್ತೆಗಾಗಿ ಹುಡುಕಾಡುವಂತಾಗಿದೆ.

ಕೊಡಿ ಹರಿಯುವ ಪ್ರತಿ ಬಾರಿಯೂ ಈ ಸಮಸ್ಯೆ ತಪ್ಪಿದ್ದಲ್ಲ, ಕೊಡಿ ನಿಂತ ಬಳಿಕ ಗುಂಡಿ ಮುಚ್ಚುವ ಕೆಲಸವೂ ಸಹ ಆಗುತ್ತಿದೆ, ಆದರೆ ಮತ್ತೊಂದು ಮಳೆ ಬಿದ್ದು ಕೊಡಿ ಹರಿದರೆ ಸಾಕು ಈ ಹಿಂದೆ ಮಾಡಿರುವ ಕಾಮಗಾರಿ ಎಲ್ಲವೂ ನೀರು ಪಲಾಗುತ್ತಿದ್ದೂ ಕಳಪೆ ಕಾಮಗಾರಿಯಿಂದ ಹೀಗಾಗುತ್ತಿದೆ ಎಂಬ ಆರೋಪವು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಗುಡಿಬಂಡೆ ಕೆರೆ ಕೋಡಿ ಬಿದ್ದ ಸಂದರ್ಭದಲ್ಲಂತೂ ಗುಂಡಿಗಳು ಎಲ್ಲಿದ್ದಾವೋ ತಿಳಿಯದೆ ಅತ್ತ ಇತ್ತ ತಿರುಗಿಸುತ್ತಾ ಹಾವು ಏಣಿ ಆಟದಂತೆ ಸಂಚಾರ ಮಾಡುವಂತಾಗಿದ್ದು ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳಲ್ಲಿ ಪ್ರಯಾಣಿಸುವ ವಯೋ ವೃದ್ಧರು, ರೋಗಿಗಳು, ಗರ್ಭಿಣಿಯರು ಹಾಗೂ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಪ್ರತಿನಿತ್ಯ ಪ್ರಾಣವನ್ನು ಅಂಗೈಯಲ್ಲಿ ಹಿಡಿದು ಈ ರಸ್ತೆಯಲ್ಲಿ ಸಂಚರಿಸುವಂತಾಗಿದೆ.

ಅಪಘಾತ ವಲಯವಾಗಿ ಮಾರ್ಪಡು:-
ಈ ರಸ್ತೆಯಲ್ಲಿ ಸಂಚರಿಸುವ ದ್ವಿಚಕ್ರ ವಾಹನ ಸವಾರರಂತು ಸ್ವಲ್ಪ ಯಾಮಾರಿದರು ಸಹ ಕೆಳಗೆ ಬಿದ್ದು ಕೈ ಕಾಲು ಗಾಯ ಮಾಡಿಕೊಂಡು ಆಸ್ಪತ್ರೆಗೆ ದಾಖಲಾಗುವಂತಹ ಪರಿಸ್ಥಿತಿ ಬಂದಿದ್ದು, ಹೆಚ್ಚಿನ ಅನಾಹುತ ಸಂಭವಿಸುವ ಮುನ್ನ ಶಾಸಕರು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಗುಂಡಿ ಮುಚ್ಚಲಿ ಎಂಬುದು ವಾಹನ ಸವಾರರ ಬೇಡಿಕೆಯಾಗಿದೆ.
ತೆಲುತ್ತಿವೆ ಕಂಬಿಗಳು:-
ಗುಂಡಿಗಳು ಬಿದ್ದಿರುವ ಸ್ಥಳದಲ್ಲಿ ಈ ಹಿಂದೆ ಅಳವಡಿಸಿರುವ ಸುಮಾರು 20 ಎಂ. ಎಂ ಗಾತ್ರದ ಕಂಬಿಗಳು ಮೇಲಕ್ಕೆದ್ದು ಪ್ರಾಣ ಬಲಿಗಾಗಿ ಕಾಯುತ್ತಿವೆ, ಆಕಸ್ಮಿಕವಾಗಿ ಹೊಸದಾಗಿ ಈ ರಸ್ತೆಯಲ್ಲಿ ಬರುವ ವಾಹನ ಸವಾರರು ಆಯಾತಪ್ಪಿ ಗುಂಡಿಯಲ್ಲಿ ಬಿದ್ದರೆ ಅವರನ್ನು ದೇವರೇ ಕಾಪಾಡಬೇಕು.
ಈ ಬಗ್ಗೆ ಮಾತನಾಡಿದ ಹಸಿರು ಸೇನೆ ಹಾಗೂ ಕರ್ನಾಟಕ ರೈತ ಸಂಘದ ಜಿಲ್ಲಾ ಅಧ್ಯಕ್ಷ ಎಚ್.ಪಿ. ರಮಾನಾಥ್, 'ಪಟ್ಟಣಕ್ಕೆ ಕಳಶ ಪ್ರಾಯದಂತಿರುವ ಇತಿಹಾಸ ಪ್ರಸಿದ್ಧ ಅಮಾನಿ ಬೈರ ಸಾಗರ ಕೆರೆಯನ್ನು ನೋಡಲು ನೂರಾರು ಪ್ರವಾಸಿಗರು ಆಗಮಿಸುತ್ತಾರೆ. ಏನಾದರು ಅನಾಹುತಗಳಾದರೆ, ನಮ್ಮ ಭಾಗದ ಪ್ರವಾಸೋದ್ಯಮಕ್ಕೆ ಪೆಟ್ಟು ಬೀಳುತ್ತದೆ, ಈ ಭಾಗದ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಲಿ, ಈಗ ಕೆರೆ ಕೋಡಿ ಹರಿಯುವುದು ನಿಂತುದ್ದು, ಈ ಜಾಗದಲ್ಲಿ ಬಿದ್ದಿರುವ ಗುಂಡಿಗಳನ್ನು ಕೂಡಲೇ ಮುಚ್ಚುವ ಕೆಲಸವನ್ನು ಸಂಬಂಧ ಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿದಿಗಳು ಮಾಡಲಿ ಎಂದರು.












Click it and Unblock the Notifications