ಚಿಕ್ಕಬಳ್ಳಾಪುರದಲ್ಲಿ ಮಳೆ ಅವಾಂತರ: ಮದುವೆ ಸಂಭ್ರಕ್ಕೂ ವರುಣ ಅಡ್ಡಿ
ಚಿಕ್ಕಬಳ್ಳಾಪುರ, ನವೆಂಬರ್ 21: ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಬೆಂಬಿಡದೆ ಸುರಿಯುತ್ತಿರುವ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಇನ್ನೂ ಎರಡು ದಿನ ರಾಜ್ಯಕ್ಕೆ ಮಳೆಯ ಸಂಕಷ್ಟ ಎದುರಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈವರೆಗೆ ನಿರಂತರ ಮಳೆ ಅಪಾರ ಆಸ್ತಿಪಾಸ್ತಿ ಹಾನಿಯಾಗಿದ್ದು ಮನೆಗಳಿಗೆ ನೀರು ನುಗ್ಗಿ ಹಲವೆಡೆ ಮನೆ ಕುಸಿದಿವೆ. ಹಲವಾರು ವರ್ಷಗಳಿಂದ ಒಣಗಿ ಹೋಗಿದ್ದ ನದಿಗಳು ತುಂಬಿ ಹರಿಯುತ್ತಿವೆ. ವಾಯುಭಾರ ಕುಸಿತದ ಪರಿಣಾಮ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ವರುಣನ ಅರ್ಭಟ ನವೆಂಬರ್ 23ರ ಬಳಿಕ ಕಡಿಮೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಭಾನುವಾರ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಯೆಲ್ಲೊ ಅಲರ್ಟ್ ಘೋಷಣೆ ಮಾಡಲಾಗಿದೆ. ಚಿಕ್ಕಬಳ್ಳಾಪುರದಲ್ಲಿ ಈಗಾಗಲೇ ಮಳೆ ಅಪಾರವಾದ ಹಾನಿಯನ್ನು ಉಂಟು ಮಾಡಿದ್ದು ಹತ್ತಕ್ಕೂ ಹೆಚ್ಚು ಕಡೆಗಳಲ್ಲಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಮದುವೆ ಸಮಾರಂಭಗಳಿಗೂ ಮಳೆರಾಯನ ಮುನಿಸು ತಟ್ಟಿದೆ.
ಚಿಕ್ಕಬಳ್ಳಾಪುರದಲ್ಲಿ ಮದುವೆ ಶಿಫ್ಟ್
ಮದುವೆ ಸಂಭ್ರಕ್ಕೂ ಮಳೆ ಅಡ್ಡಿಯನ್ನುಂಟು ಮಾಡಿದೆ. ಕಲ್ಯಾಣ ಮಂಟಪಕ್ಕೆ ಮಳೆ ನೀರು ನುಗ್ಗಿ ನಿಗದಿಯಾದ ಮದುವೆ ನಿಂತು ಹೋಗಿದೆ. ಮಳೆಯ ಅರ್ಭಟಕ್ಕೆ ಕೊನೆಯ ಕ್ಷಣದಲ್ಲಿ ಮದುವೆ ಶಿಫ್ಟ್ ಆಗಿದೆ. ಜಿಲ್ಲೆಯ ಅಶೋಧಯ ಕಲ್ಯಾಣ ಮಂಟಪದಲ್ಲಿ ಮದುವೆ ಫಿಕ್ಸ್ ಆಗಿತ್ತು. ಮಳೆ ನೀರು ಕಲ್ಯಾಣ ಪಂಟಪಕ್ಕೆ ನುಗ್ಗಿದ್ದು ನವದಂಪತಿಗಳ ಪ್ರವೇಶಕ್ಕೂ ತೊಂದರೆಯನ್ನುಂಟು ಮಾಡಿತ್ತು. ಇನ್ನೂ ಮದುವೆಗೆ ಜನ ಬರುವುದಂತೂ ದೂರದ ಮಾತು. ಅಲ್ಲಲ್ಲಿ ರಸ್ತೆ ಸಂಪರ್ಕ ಕೂಡ ಕಡಿತಗೊಂಡಿರುವುದರಿಂದ ಮದುವೆಗೆ ಸಂಬಂಧಿಕರು ಬರಲು ಕೂಡ ತೊಂದರೆಯನ್ನುಂಟು ಮಾಡಿದೆ. ತಿಂಗಳ ಮೊದಲೇ ಫಿಕ್ಸ್ ಆಗಿದ್ದ ಮದುವೆಯನ್ನು ನಿಲ್ಲಿಸಲಾಗದೆ ಸಾಯಿಬಾಬ ದೇವಸ್ಥಾನಕ್ಕೆ ಶಿಫ್ಟ್ ಮಾಡಲಾಗಿದೆ.
ಅಪಾಯದ ಮಟ್ಟ ಮೀರಿದ ಚಿತ್ರಾವತಿ ನದಿ
ಅಪಾಯದ ಮಟ್ಟವನ್ನು ಮೀರಿ ಬಾಗೇಪಲ್ಲಿ ಚಿತ್ರಾವತಿ ನದಿ ಹರಿಯುತ್ತಿದೆ. ಮಳೆ ನಿಂತರೂ ಚಿತ್ರಾವತಿ ನದಿ ಉಕ್ಕಿ ಹರಿಯುತ್ತಿದೆ. ಹೀಗಾಗಿ ಸೇತುವೆ ಬ್ಲಾಕ್ ಮಾಡಲಾಗಿದೆ. ಸೇತುವೆ ತುಂಬಿ ನೀರೆಲ್ಲ ರಸ್ತೆ ಮೇಲೆ ಹರಿಯಲು ಆರಂಭಿಸಿದ್ದು, ರಸ್ತೆ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಸುಮಾರು 35 ವರ್ಷಗಳ ನಂತರ ಈ ಸೇತುವೆ ತುಂಬಿ ಹರಿಯುತ್ತಿದ್ದು ಈ ಭಾಗದ ಜನರಲ್ಲಿ ಆತಂಕ ಮೂಡಿಸಿದೆ. ಇಷ್ಟು ದಿನ ನೀರಿಲ್ಲದೆ ಬರಿದಾಗಿದ್ದ ಸೇತುವೆ ಅಪಾಯ ತಂದೊಡ್ಡುವ ರೀತಿಯಲ್ಲಿ ಹರಿಯುತ್ತಿದೆ. ಗೌರಿಬಿದನೂರಿನಲ್ಲಿ ಉತ್ತರ ಪಿನಾಕಿನಿ ನದಿ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ನದಿ ವ್ಯಾಪ್ತಿಯ ಕಾಲುವೆ ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ನದಿ ನಾಲೆಯ ಪಕ್ಕದಲ್ಲೇ ಇದ್ದ ಮನೆಗಳಿಗೆಲ್ಲ ನೀರು ನುಗಿದ್ದು ಧವಸ ಧಾನ್ಯ, ಮನೆಯ ಸಾಮಗ್ರಿಗಳೆಲ್ಲ ನದಿ ಪಾಲಾಗಿವೆ. ವಿಧುರಾಶ್ವತ್ಥ, ಮುದ್ದಗಾನಕುಂಟೆ ಸೇರಿದಂತೆ ಹಲವೆಡೆ ಅಪಾರ ಪ್ರಮಾಣದ ನೀರು ಹರಿದು ಕೋಟ್ಯಂತರ ರೂಪಾಯಿ ನಷ್ಟ ಸಂಭವಿಸಿದೆ. ಜಿಲ್ಲಾಡಳಿತ ಕಾಳಜಿ ಕೇಂದ್ರಗಳನ್ನು ತೆರೆದಿದ್ದು ಸಾವಿರಕ್ಕೂ ಹೆಚ್ಚು ಮಂದಿಗೆ ಆಶ್ರಯ ಒದಗಿಸಲಾಗಿದೆ.
ಜಿಲ್ಲೆಯಾದ್ಯಂತ 12 ರಸ್ತೆಗಳು ಬಂದ್
ಜಿಲ್ಲೆಯಲ್ಲಿ ಕಳೆದೆರೆಡು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು ಜಿಲ್ಲೆಯಾದ್ಯಂತ 12 ರಸ್ತೆಗಳು ಬಂದ್ ಮಾಡಲಾಗಿದೆ. ಚಿತ್ರಾವತಿ ಡ್ಯಾಂನ ಒಳಹರಿವು ಹೆಚ್ಚಾಗಿದ್ದು ರಸ್ತೆ ಸಂಚಾರ ಬಂದ್ ಮಾಡಲಾಗಿದೆ. ನದಿಗಳು ಮಳೆನೀರಿನಿಂದ ತುಂಬಿ ರಸ್ತೆ ಮೇಲೆ ಹರಿಯುತ್ತಿದ್ದು ಸಂಚಾರ ತಡೆಯಲು ಅಲ್ಲಲ್ಲಿ ಬ್ಯಾರಿಕೇಡ್ ಹಾಕಲಾಗಿದೆ. ಜೊತೆಗೆ ಚಿಕ್ಕಬಳ್ಳಾಪುರದಲ್ಲಿ ಹೊರಗಿನವರು ಒಳಪ್ರವೇಶದಂತೆ ಜಿಲ್ಲಾಡಳಿತ ಮನವಿ ಮಾಡಿದೆ. ಚಿಕ್ಕಬಳ್ಳಾಪುರ ಎಸ್ಪಿ ಮತ್ತು ಅಧಿಕಾರಿಗಳು ಚಿತ್ರಾವತಿ ಡ್ಯಾಂಗೆ ಭೇಟಿ ನೀಡಿ ಮುಜಾಗೃತ ಕ್ರಮವನ್ನು ತೆಗೆದುಕೊಂಡಿದ್ದಾರೆ.
ಅಮಾನಿ ಗೋಪಾಲಕೃಷ್ಣ ಕೆರೆ ಭರ್ತಿ
ಅಧಿಕ ಮಳೆಯಿಂದಾಗಿ ಜಿಲ್ಲೆಯ ಅಮಾನಿ ಗೋಪಾಲಕೃಷ್ಣ ಕೆರೆ ತುಂಬಿದೆ. ಕಳೆದ ನಲವತ್ತು ವರ್ಷಗಳಿಂದ ಕೆರೆ ಭರ್ತಿಯಾಗಿರಲಿಲ್ಲ. ಸದ್ಯ ಅಧಿಕ ಮಳೆಯಿಂದಾಗಿ ಕೆರೆ ತುಂಬಿ ಹರಿಯುತ್ತಿದೆ. ಕೆರೆ ತುಂಬಿ ಹರಿಯುತ್ತಿರುವುದಕ್ಕೆ ಸ್ಥಳೀಯ ಜನ ಸಂತಸ ವ್ಯಕ್ತಪಡಿಸಿದ್ದಾರೆ. ಬೃಹತ್ ಆದ ಕೆರೆ ತುಂಬಿ ಹರಿಯುತ್ತಿದ್ದು ಪ್ರವಾಸಿ ತಾಣದಂತಾಗಿದೆ. ಇದನ್ನು ಕಣ್ತುಂಬಿಕೊಳ್ಳಲು ಸ್ಥಳೀಯರು ಕೆರೆಯತ್ತ ನೂರಾರು ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.
ಇದು ಜಿಲ್ಲಾದ್ಯಂತ ಕಳೆದ ಎರಡು ದಿನಗಳಿಂದ ಆರ್ಭಟಿಸುತ್ತಿರುವ ಮಳೆಯಿಂದ ಸೃಷ್ಟಿಯಾಗಿರುವ ಪರಿಸ್ಥಿತಿ. ಕಳೆದ ಎರಡು ತಿಂಗಳಿಂದ ಜಿಲ್ಲೆಯಲ್ಲಿ ಮಳೆ ಬಿಟ್ಟೂ ಬಿಡದೆ ಸುರಿಯುತ್ತಿದೆ. ಆದರೆ ಕಳೆದ ಎರಡು ದಿನದಿಂದ ಹಗಲು ರಾತ್ರಿಯೆನ್ನದೇ ಮಳೆ ಧಾರಕಾರವಾಗಿ ಸುರಿಯುತ್ತಿದೆ. ಹೀಗಾಗಿ ಇಡೀ ಜಿಲ್ಲೆಯ ಮಡಿಲು ನೀರು ತುಂಬಿಕೊಂಡಿದೆ. ಜಿಲ್ಲೆಗೆ ಬರದನಾಡು ಎಂಬ ಕುಖ್ಯಾತಿ ಇತ್ತು. ಆದರೆ ಸದ್ಯ ಜಿಲ್ಲೆ ಮಳೆನಾಡಿನಂತಾಗಿ ಪರಿವರ್ತನೆಗೊಂಡಿದೆ. ಗುಡಿಬಂಡೆ ಅಮಾನಿ, ಬೈರಸಾಗರ ಕೆರೆ, ಶ್ರೀನಿವಾಸಸಾಗರ ಕೆರೆ, ಕಂದವಾರ ಕೆರೆ, ಕೇಶವಾರ ಕೆರೆ, ಉತ್ತರ ಪಿನಾಕಿನಿ ನದಿ ವ್ಯಾಪ್ತಿಯ ಕೆರೆಗಳು, ಪಾಪಗ್ನಿ ನದಿ ವ್ಯಾಪ್ತಿಯ ಕೆರೆಗಳು, ಜಕ್ಕಲಮಡಗು ಜಲಾಶಯ, ಯದಾರ್ಲಾಹಳ್ಳಿ ಕೆರೆ, ಮಂಚೇನಹಳ್ಳಿ ಕೆರೆ, ರಾಮಸಮುದ್ರ ಕೆರೆ, ಹೊಸದಾಗಿ ಗೋಪಾಲಕೃಷ್ಣ ಅಮಾನಿ ಬೈರಸಾಗರ ಕೆರೆ ಹೀಗೆ ಜಿಲ್ಲೆಯ ಬಹುತೇಕ ಪ್ರಮುಖ ಕೆರೆಗಳೆಲ್ಲ ಅಪಾಯ ಮಟ್ಟ ಮೀರಿ ಕೋಡಿ ಹರಿಯುತ್ತಿವೆ.