Pradeep Eshwar: ಗೆಲುವಿನ ಬೆನ್ನಲ್ಲೇ ಮನೆ ಮನೆಗೆ ಭೇಟಿ ನೀಡಿ ಜನರ ಕಷ್ಟ ಕೇಳುತ್ತಿರುವ ಪ್ರದೀಪ್ ಈಶ್ವರ್
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಬಿಜೆಪಿ ಮಾಜಿ ಸಚಿವ ಸುಧಾಕರ್ ಅವರನ್ನು ಸೋಲಿಸುವ ಮೂಲಕ ಸಾಕಷ್ಟು ಸದ್ದು ಮಾಡಿದ್ದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್. ತಮ್ಮ ಮಾತುಗಳಿಂದಲೇ ಕ್ಷೇತ್ರದ ಜನಮನ ಗೆದ್ದಿರುವ ಅವರು ಗೆಲುವಿನ ಬಳಿಕವೂ ಕ್ಷೇತ್ರದ ಜನರ ಜೊತೆ ಬೆರೆಯುತ್ತಿದ್ದಾರೆ.
ಬಹುತೇಕ ಶಾಸಕರು ಬೆಂಗಳೂರಿನಲ್ಲಿ ಬೀಡು ಬಿಟ್ಟಿದ್ದು, ಸಚಿವ ಸ್ಥಾನಕ್ಕೆ ಲಾಬಿ ಮಾಡುತ್ತಿದ್ದಾರೆ, ಇನ್ನೂ ಕೆಲವು ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸಲು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್ ತಮ್ಮನ್ನು ಗೆಲ್ಲಿಸಿದ ಕ್ಷೇತ್ರದ ಜನರನ್ನು ಭೇಟಿ ಮಾಡುತ್ತಿದ್ದಾರೆ. ಮನೆ ಮನೆಗೆ ತೆರಳುತ್ತಿರುವ ಅವರು ಜನರ ಕಷ್ಟಗಳನ್ನು ಕೇಳುತ್ತಿದ್ದಾರೆ.

ಕ್ಷೇತ್ರದ ಜನತೆಯೇ ನನಗೆ ತಂದೆ ತಾಯಿ ಎಂದು ಹೇಳಿಕೊಂಡಿದ್ದ ಅವರು ಈಗ ಅದರಂತೆಯೇ ನಡೆದುಕೊಳ್ಳುತ್ತಿದ್ದಾರೆ. ಗೆದ್ದ ಬಳಿಕ ಕ್ಷೇತ್ರದ ಜನರ ಮನೆ ಮನೆಗೆ ಭೇಟಿ ಮಾಡಿ ಧನ್ಯವಾದ ತಿಳಿಸುತ್ತೇನೆ ಎಂದು ಅವರು ಹೇಳಿಕೊಂಡಿದ್ದರು. ಅದರಂತೆ ಈಗ ನಡೆದುಕೊಳ್ಳುತ್ತಿದ್ದಾರೆ. ನಮಸ್ತೆ ಚಿಕ್ಕಬಳ್ಳಾಪುರ ಹೆಸರಿನಲ್ಲಿ ಮತದಾರರನ್ನು ಭೇಟಿ ಮಾಡುತ್ತಿದ್ದಾರೆ.
ಪ್ರತಿ ದಿನ ಅಭಿವೃದ್ಧಿಗಾಗಿ ಕೆಲಸ ಮಾಡುತ್ತೇನೆ
ಮನೆ ಮನೆ ಭೇಟಿ ವೇಳೆ ಹಲವಾರು ಜನ ತಮ್ಮ ಸಮಸ್ಯೆಗಳನ್ನು ಹೊಸ ಶಾಸಕರ ಬಳಿ ಹೇಳಿಕೊಂಡಿದ್ದಾರೆ. ಮಹಿಳೆಯೊಬ್ಬರು ಸಾಲ ಪಡೆದು ಬಡ್ಡಿ ಕಟ್ಟಲಾಗದೆ ಒದ್ದಾಡುತ್ತಿದ್ದನ್ನು ಗಮನಿಸಿದ ಅವರು, ಬಡ್ಡಿ ಕಟ್ಟದಂತೆ ಸೂಚನೆ ನೀಡಿದರು. ಬಡ್ಡಿ ಕಟ್ಟುವಂತೆ ಕಿರುಕುಳ ನೀಡಿದರೆ, ಕೇಸು ದಾಖಲಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ವೃದ್ಧೆಯೊಬ್ಬರಿಗೆ ಸ್ಥಳದಲ್ಲೇ ಬಿಪಿ ಪರೀಕ್ಷೆ ಮಾಡಿಸಿ, ಸೂಕ್ತ ಔಷಧಿ ತೆಗೆದುಕೊಳ್ಳುವಂತೆ ಹಣ ಕೂಡ ನೀಡಿದರು. ಬಡವರ ಮನೆ ಬಾಗಿಲಿಗೆ ಹೋಗಿ ಅವರನ್ನು ಮಾತನಾಡಿಸಿ, ಸಮಸ್ಯೆ ಆಲಿಸುವುದು ಕ್ಷೇತ್ರದ ಜನರಿಗೆ ಕೂಡ ಹೊಸ ವಿಚಾರವಾಗಿದೆ. ಈ ನಡೆಯಿಂದ ಪ್ರದೀಪ್ ಈಶ್ವರ್ ಮತ್ತಷ್ಟು ಜನಪ್ರಿಯತೆ ಗಳಿಸಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅವರು, "ನಾಲ್ಕು ವರ್ಷ ಸುಮ್ಮನಿದ್ದು ಚುನಾವಣೆಗೆ ಒಂದು ವರ್ಷ ಇದೆ ಎಂದಾಗ ಓಡಾಡುವ ಶಾಸಕ ನಾನಲ್ಲ, ಪ್ರತಿ ದಿನ ನನ್ನ ಕ್ಷೇತ್ರದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತೇನೆ. ಮನೆ ಮನೆ ಬಾಗಿಲಿಗೂ ಹೋಗಿ ಜನರನ್ನು ಭೇಟಿ ಮಾಡುತ್ತೇನೆ" ಎಂದು ಹೇಳಿದರು.
ಪರಿಶ್ರಮ ಅಕಾಡೆಮಿ ಮೂಲಕ ಮುನ್ನಲೆಗೆ ಬಂದ ಪ್ರದೀಪ್ ಈಶ್ವರ್ ಸಿದ್ದರಾಮಯ್ಯ ಅವರ ಆಪ್ತ ಬಣದಲ್ಲಿ ಗುರುತಿಸಿಕೊಂಡಿದ್ದರು. ಸುಧಾಕರ್ ವಿರುದ್ಧ ಇವರನ್ನು ಕಾಂಗ್ರೆಸ್ ನಿಲ್ಲಿಸಿದಾಗ ಸುಧಾಕರ್ ಸುಲಭವಾಗಿ ಗೆಲ್ಲುತ್ತಾರೆ ಎಂದು ಹೇಳಲಾಗಿತ್ತು, ಆದರೆ ಪ್ರದೀಪ್ ಈಶ್ವರ್ ತಮ್ಮ ಮಾತಿನ ಮೂಲಕವೇ ಜನರ ಮನ ಗೆದ್ದು, ಸುಧಾಕರ್ ಅವರಿಗೆ ಆಘಾತ ನೀಡಿದ್ದರು.












Click it and Unblock the Notifications