ಶಿಢ್ಲಘಟ್ಟದ ಮಾಜಿ ಶಾಸಕ ಎಂ.ರಾಜಣ್ಣಗೆ ಜೀವ ಬೆದರಿಕೆ ಕರೆ
ಚಿಕ್ಕಬಳ್ಳಾಪುರ, ನವೆಂಬರ್ 08 : ಜೆಡಿಎಸ್ ನಾಯಕ, ಶಿಢ್ಲಘಟ್ಟದ ಮಾಜಿ ಶಾಸಕ ಎಂ.ರಾಜಣ್ಣ ಅವರಿಗೆ ಜೀವ ಬೆದರಿಕೆ ಕರೆ ಬಂದಿದೆ. ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಈ ಕುರಿತು ರಾಜಣ್ಣ ದೂರು ನೀಡಿದ್ದಾರೆ.
ನವೆಂಬರ್ 2ರಂದು ಮೊದಲ ಬಾರಿಗೆ ಅಪರಿಚಿತ ವ್ಯಕ್ತಿ ಎಂ.ರಾಜಣ್ಣ ಅವರಿಗೆ ಕರೆ ಮಾಡಿದ್ದ. ಕಾಂಗ್ರೆಸ್ ಪಕ್ಷದಿಂದ ದುಡ್ಡು ತಿಂದು ಜೆಡಿಎಸ್ ಅನ್ನು ಹಾಳು ಮಾಡಿದೆ ಎಂದು ಕೀಳು ಮಟ್ಟದ ಭಾಷೆ ಬಳಸಿ ನಿಂದಿಸಿದ್ದ.
ಕರೆ ಮಾಡಿದ ವ್ಯಕ್ತಿ ಊರು, ಹೆಸರು ಹೇಳಿರಲಿಲ್ಲ. ಆದರೆ, ನಾನು ನಿನಗೆ ಮತ ನೀಡಿದ ಮತದಾರ ಎಂದು ಹೇಳಿದ್ದ ಎಂದು ಎಂ.ರಾಜಣ್ಣ ದೂರಿನಲ್ಲಿ ತಿಳಿಸಿದ್ದಾರೆ. ಬಳಿಕ ಆ ವ್ಯಕ್ತಿಯಿಂದ ನವೆಂಬರ್ 3ರಂದು ಮತ್ತೆ ಕರೆ ಬಂದಿತ್ತು.

ಕರೆ ಮಾಡಿರುವ ವಿಚಾರವನ್ನು ಪೊಲೀಸರಿಗೆ ತಿಳಿಸಿದರೆ ಹಾಡಹಗಲೇ ಮನೆಗೆ ಬಂದು ನಿನ್ನ ತಲೆ ಕಡಿಯುತ್ತೇನೆ ಎಂದು ಅನಾಮಿಕ ವ್ಯಕ್ತಿ ಜೀವ ಬೆದರಿಕೆ ಹಾಕಿದ್ದಾನೆ. ಕರೆಗಳನ್ನು ಎಂ.ರಾಜಣ್ಣ ಅವರು ರೆಕಾರ್ಡ್ ಮಾಡಿಕೊಂಡಿದ್ದಾರೆ.
ಮಾಜಿ ಶಾಸಕ ಎ.ರಾಜಣ್ಣ ಅವರು ಚಿಕ್ಕಬಳ್ಳಾಪುರ ಎಸ್ಪಿ ಕಾರ್ತಿಕ್ ರೆಡ್ಡಿ ಅವರನ್ನು ಭೇಟಿ ಮಾಡಿ ಅನಾಮಧೇಯ ಕರೆ ಕುರಿತು ತನಿಖೆ ನಡೆಸುವಂತೆ ಕೋರಿದ್ದಾರೆ. ಕಾರ್ತಿಕ್ ರೆಡ್ಡಿ ಅವರು ಶಿಢ್ಲಘಟ್ಟ ಗ್ರಾಮಾಂತರ ಪೊಲೀಸರಿಗೆ ತನಿಖೆ ನಡೆಸಲು ಸೂಚನೆ ನೀಡಿದ್ದಾರೆ.
'ಮೂರು ತಿಂಗಳ ಹಿಂದೆ ಕೃಷ್ಣಜಯಂತಿಯಂದು ಉತ್ಸವದಲ್ಲಿ ನೃತ್ಯ ಮಾಡಿದಾಗಲೂ ಬೆದರಿಕೆ ಕರೆ ಬಂದಿತ್ತು. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದೆ. ಈಗ 2ನೇಬಾರಿಗೆ ಕರೆ ಬರುತ್ತಿದೆ' ಎಂದು ಎಂ.ರಾಜಣ್ಣ ಹೇಳಿದ್ದಾರೆ.











Click it and Unblock the Notifications