Chikkaballapur: ದಪ್ಪರ್ತಿಯ ದೇವಸ್ಥಾನದಲ್ಲಿ ಕಳ್ಳತನ: ಹುಂಡಿ ಹಣ ದೋಚಿ ಪರಾರಿಯಾದ ಕಳ್ಳರು- ದೃಶ್ಯ ಸೆರೆ
ಗುಡಿಬಂಡೆ ಅಕ್ಟೋಬರ್ 2: ಗುಡಿಬಂಡೆ ತಾಲೂಕಿನ ದಪ್ಪರ್ತಿ ಗ್ರಾಮದ ವೇಣುಗೋಪಾಲ ಸ್ವಾಮಿ ದೇವಸ್ಥಾನದಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಸುಮಾರು 8ರಿಂದ 9 ಲಕ್ಷ ಮೌಲ್ಯದ ಬೆಳ್ಳಿ, ಬಂಗಾರ, ಹುಂಡಿ ಹಣ ಸಿಸಿಕ್ಯಾಮರ ಡಿವಿಆರ್ ದೋಚಿ ಪರಾರಿಯಾಗಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಮಂಗಳವಾರ ರಾತ್ರಿ 1-30 ರ ಸಮಯದಲ್ಲಿ ದೇವಸ್ಥಾನದ ಬಾಗಿಲು ಮುರಿದು ದೇವಸ್ಥಾನದಲ್ಲಿ ಅಳವಡಿಸಿದ್ದ ಸಿಸಿ ಟಿವಿಗಳನ್ನು ಬೇರೆ ಕಡೆಗೆ ತಿರುಗಿಸಿದ್ದಾರೆ ಕಳ್ಳರು. ಬಳಿಕ ಅದರ ವೈರ್ಗಳನ್ನು ಕಟ್ ಮಾಡಿ ಡಿವಿಆರ್ನ್ನು ಕದ್ದು, ದೇವಾಲಯ ಒಳಗೆ ಬಿರುವನಲ್ಲಿದ್ದ 2.75 ಕೆ.ಜಿ ಬೆಳ್ಳಿ ಕವಚ, 1 ಕೆಜಿ ಬೆಳ್ಳಿಯ ಪೂಜೆ ಸಾಮಾನು, 15 ಗ್ರಾಂ ಚಿನ್ನದ ತಾಳಿ ಮತ್ತು ಹುಂಡಿಯಲ್ಲಿದ್ದ ಸುಮಾರು 50 ಸಾವಿರ ಹಣ ಕಳವು ಮಾಡಿದ್ದಾರೆ. ಒಟ್ಟಾರೆ ಕಳ್ಳತನವಾದ ಹಣವನ್ನು ಸುಮಾರು 8 ರಿಂದ 9 ಲಕ್ಷ ಎಂದು ಅಂದಾಜಿಸಲಾಗಿದೆ.\

ಬುಧವಾರ ಬೆಳಿಗ್ಗೆ ಸುಮಾರು 6 ಗಂಟೆ ಸಮಯದಲ್ಲಿ ದಪ್ಪರ್ತಿ ಗ್ರಾಮದ ವೆಂಕಟರೆಡ್ಡಿ ಕಸವನ್ನು ತಿಪ್ಪಗೆ ಹಾಕಲು ಹೋಗಿದ್ದಾಗ ದೇವಸ್ಥಾನದ ಕಾಂಪೌಂಡ್ಗೆ ಏಣಿಯನ್ನು ಹಾಕಿರುವುದು ಗಮನಿಸಿ ದೇವಸ್ಥಾನದ ಬಾಗಿಲು ಕಡೆ ನೋಡಿದಾಗ ಬಾಗಿಲು ತೆಗೆದಿರುವುದು ಗಮನಿಸಿದ ಅವರು ಕೂಡಲೇ ದೇವಾಲಯದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಮುರಳಿಗೆ ದೂರವಾಣಿ ಮೂಲಕ ಮಾಹಿತಿ ತಿಳಿಸಿದ್ದಾರೆ.
ಮಾಹಿತಿ ತಿಳಿದ ದೇವಾಲಯದ ಅರ್ಚಕರು, ಗ್ರಾಮಸ್ಥರು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ನೋಡಿದಾಗ ಬಾಗಿಲು ತೆರೆದಿದ್ದು ಒಳಗೆ ಹೋಗಿ ನೋಡಿದಾಗ ದೇವಾಲಯದಲ್ಲಿ ಕಳ್ಳತನವಾಗಿರುವುದು ದೃಡಪಟ್ಟಿರುತ್ತದೆ. ದೇವಾಲಯದ ಅರ್ಚಕ ವರ್ಲಕೊಂಡ ಕೆ.ವಿ.ವೆಂಕಟನರಸಿಂಹಾಚಾರ್ ಬೆಳಿಗ್ಗೆ 9-00 ಗಂಟೆಯಲ್ಲಿ ಪೂಜೆ ಮುಗಿಸಿ ಎಂದಿನಂತೆ ದೇವಾಲಯದ ಬಾಗಿಲುಗಳನ್ನು ಹಾಕಿಕೊಂಡು ಹೋಗಿರುತ್ತಾರೆ. ಬುಧವಾರ ಬೆಳಿಗ್ಗೆ ಕಳ್ಳತನವಾಗಿರುವ ಬಗ್ಗೆ ಮಾಹಿತಿ ತಿಳಿದುಬಂದಿದೆ.
ಸ್ಥಳಕ್ಕೆ ಗುಡಿಬಂಡೆ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ ಪೆಕ್ಟರ್ ನಯಾಜ್ ಬೇಗ್, ಸಬ್ ಇನ್ಸ್ ಪೆಕ್ಟರ್ ಗಣೇಶ್, ಬೆರಳಚ್ಚು ತಜ್ಞರು ಮತ್ತು ಶ್ವಾನದಳ, ಗುಡಿಬಂಡೆ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications