ಭೋಗ ನಂದೀಶ್ವರ ದೇವಾಲಯದಲ್ಲಿ ಕುಮಾರಸ್ವಾಮಿ ಮುಂದೆ ನಡೆದ ವಿಸ್ಮಯ
ಚಿಕ್ಕಬಳ್ಳಾಪುರ, ನ 26: ಉಪಚುನಾವಣೆ ನಡೆಯುತ್ತಿರುವ ಹದಿನೈದು ಅಸೆಂಬ್ಲಿ ಕ್ಷೇತ್ರಗಳಲ್ಲಿ ಒಂದಾಗಿರುವ ಚಿಕ್ಕಬಳ್ಳಾಪುರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ತಮ್ಮ ಪಕ್ಷದ ಅಭ್ಯರ್ಥಿ ಪರವಾಗಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ.
ಕ್ಷೇತ್ರದ ವ್ಯಾಪ್ತಿಯಲ್ಲಿನ ಹಲವು ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿರುವ ಕುಮಾರಸ್ವಾಮಿ, ನಗರದ ಬಿ.ಬಿ.ರಸ್ತೆ ಜೂನಿಯರ್ ಕಾಲೇಜಿನಿಂದ ವಾಪಸಂದ್ರದವರೆಗೆ ರೋಡ್ ಶೋ ನಡೆಸಿದ್ದಾರೆ.
ರೋಡ್ ಶೋ ವೇಳೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕ್ರೇನ್ ನಲ್ಲಿ ಭಾರೀ ಸೇಬಿನ ಹಾರವನ್ನು ಜೆಡಿಎಸ್ ಕಾರ್ಯಕರ್ತರು ಕುಮಾರಸ್ವಾಮಿಯವರಿಗೆ 'ಸಮರ್ಪಿಸಿದ್ದಾರೆ'.
ಚುನಾವಣಾ ಪ್ರಚಾರಕ್ಕೆ ಮುನ್ನ, ಕುಮಾರಸ್ವಾಮಿ, ಜಿಲ್ಲೆಯ ಇತಿಹಾಸ ಪ್ರಸಿದ್ದ ನಂದಿ ಗ್ರಾಮದಲ್ಲಿರುವ ಭೋಗ ನಂದೀಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದ್ದಾರೆ. ಪೂಜೆಯ ವೇಳೆ, ಜೆಡಿಎಸ್ಸಿಗೆ ಶುಭಸೂಚನೆಯೊಂದು ಸಿಕ್ಕಿದೆ.

ಹೆಚ್.ಡಿ.ಕುಮಾರಸ್ವಾಮಿಗೆ ಅದ್ದೂರಿ ಸ್ವಾಗತ
ಚಿಕ್ಕಬಳ್ಳಾಪುರಕ್ಕೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಕಾರ್ಯಕರ್ತರು ಮತ್ತು ಮುಖಂಡರು ಅದ್ದೂರಿಯಾಗಿ ಬರಮಾಡಿಕೊಂಡರು. ನೇರವಾಗಿ, ಐತಿಹಾಸಿಕ ಭೋಗ ನಂದೀಶ್ವರ ದೇವಾಲಯಕ್ಕೆ ಆಗಮಿಸಿದ ಎಚ್ಡಿಕೆ ವಿಶೇಶ ಪೂಜೆಯನ್ನು ಸಲ್ಲಿಸಿದರು. ಆ ವೇಳೆ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ. ಪಕ್ಷದ ಅಭ್ಯರ್ಥಿ ರಾಧಾಕೃಷ್ಣ, ಶಾಸಕರಾದ ನಿಸರ್ಗ ನಾರಾಯಣಸ್ವಾಮಿ, ಜೆ.ಕೆ ಕೃಷ್ಣಾರೆಡ್ಡಿ, ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಹಾಜರಿದ್ದರು.

ಭೋಗ ನಂದೀಶ್ವರ ದೇವಾಲಯ
ದೇವಾಲಯದ ಅರ್ಚಕರು ಮಾಜಿ ಮುಖ್ಯಮಂತ್ರಿಗಳನ್ನು ಸ್ವಾಗತಿಸಿ ವಿಶೇಷ ಪೂಜೆ ಸಲ್ಲಿಸಿದರು. ನಂದೀಶ್ವರನಿಗೆ ವಿಶೇಷ ಪೂಜೆ ಸಲ್ಲಿಸುತ್ತಿದ್ದ ವೇಳೆ, ಬಲಭಾಗದಿಂದ ಹೂವು ಬಿದ್ದಿದೆ. ಪೂಜೆಯ ನಡುವೆಯೇ ಹೂವು ಬಿದ್ದಕೂಡಲೇ, ಕುಮಾರಸ್ವಾಮಿ ದೇವರಿಗೆ ಕೈಮುಗಿದಿದ್ದಾರೆ.

ಶುಭಸೂಚನೆಯೆಂದು ಕಣ್ಸನ್ನೆ
ಪೂಜೆ ಮುಗಿದ ಬಳಿಕ, ಪಕ್ಕದಲೇ ನಿಂತಿದ್ದ ಜೆಡಿಎಸ್ ಅಭ್ಯರ್ಥಿಯನ್ನು ನೋಡುತ್ತಾ ಕುಮಾರಸ್ವಾಮಿ, ಇದೊಂದು ಶುಭಸೂಚನೆಯೆಂದು ಕಣ್ಸನ್ನೆ ಮಾಡಿದ್ದಾರೆ. ಪೂಜೆಯ ಬಳಿಕ, ಬಲಭಾಗದಲ್ಲಿ ಬಿದ್ದ ಹೂವನ್ನು ಕುಮಾರಸ್ವಾಮಿಗೆ ಅರ್ಚಕರು ಪ್ರಸಾದದ ರೂಪದಲ್ಲಿ ನೀಡಿದ್ದಾರೆ.

ಬಲಭಾಗದಿಂದ ಹೂವು ಬಿದ್ದಿರುವುದು
ಬಲಭಾಗದಿಂದ ಹೂವು ಬಿದ್ದಿರುವುದು ವಿಸ್ಮಯ ಮತ್ತು ಅದೃಷ್ಟದ ಸಂಕೇತ. ಇದೊಂದು ಶುಭಸೂಚನೆ, ನಮ್ಮ ಅಭ್ಯರ್ಥಿ ರಾಧಾಕೃಷ್ಣ ಅವರ ಗೆಲುವು ನಿಶ್ಚಿತವೆಂದು ಜೆಡಿಎಸ್ ಕಾರ್ಯಕರ್ತರು ಮಾತನಾಡಿಕೊಳ್ಳುತ್ತಿದ್ದಾರೆ. ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ, ಕುಮಾರಸ್ವಾಮಿ ಪ್ರಚಾರಕ್ಕೆ ತೆರಳಿದ್ದಾರೆ.

ರೈತರ ಸಾಲ ಮನ್ನಾ ಮಾಡುವ ಉದ್ದೇಶದಿಂದ ಎಲ್ಲವನ್ನು ಸಹಿಸಿಕೊಂಡು ಬಂದೆ
"ರೈತರ ಸಾಲ ಮನ್ನಾ ಮಾಡುವ ಉದ್ದೇಶದಿಂದ ಎಲ್ಲವನ್ನು ಸಹಿಸಿಕೊಂಡು ಬಂದೆ. ಅಧಿಕಾರ ನಶ್ವರ, ಆದರೆ ಪ್ರತಿ ಬಾರಿಯು ಕೂಡ ಅಧಿಕಾರಕ್ಕೆ ಬರುವ ಸಲುವಾಗಿ ಕುರಿ, ಮೇಕೆ, ಆಡುಗಳನ್ನು ಖರೀದಿಸುವ ರೀತಿಯಲ್ಲಿ ಶಾಸಕರನ್ನು ಬಿಜೆಪಿಯವರು ಖರೀದಿ ಮಾಡಿದರು" ಎಂದು ಕುಮಾರಸ್ವಾಮಿ, ಚುನಾವಣಾ ಪ್ರಚಾರದ ವೇಳೆ ಆಕ್ರೋಶ ವ್ಯಕ್ತಪಡಿಸಿದರು.












Click it and Unblock the Notifications