ಚುನಾವಣೆ ಪ್ರಚಾರಕ್ಕೂ ತಟ್ಟಿದ ಬಿಸಿಲಿನ ಬಿಸಿ: ಬೆಳಗ್ಗೆ, ಸಂಜೆ ಸಮಾವೇಶ ನಡೆಸಲು ಚಿಂತನೆ!
ಚಿಕ್ಕಬಳ್ಳಾಪುರ ಮಾರ್ಚ್ 31: ಒಂದೆಡೆ ಲೋಕಸಭಾ ಚುನಾವಣೆ ಕಾವು ಹೆಚ್ಚಾಗುತ್ತಿದ್ದರೆ, ಇನ್ನೊಂದೆಡೆ ಬೇಸಿಗೆ ತಾಪ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದು ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗಳ ಹಾಗೂ ರಾಜಕೀಯ ಮುಖಂಡರ ತಲೆಬಿಸಿ ಹೆಚ್ಚು ಮಾಡಿದೆ.
ಬೇಸಿಗೆ ಮಧ್ಯದಲ್ಲಿಯೇ ಲೋಕಸಭಾ ಚುನಾವಣೆ ಘೋಷಣೆಯಾಗಿದೆ. ಬಿಸಿಲಿನ ತಾಪಮಾನ ಜನರನ್ನು ವಿಲಿವಿಲಿ ಒದ್ದಾಡುವಂತೆ ಮಾಡಿದೆ. ಈ ನಡುವೆ ಹವಾಮಾನ ಇಲಾಖೆ ರಾಜ್ಯದಲ್ಲಿ ಬಿಸಿಲಿನ ತಾಪ ಇನ್ನೂ ಹೆಚ್ಚಾಗುವ ಮುನ್ಸೂಚನೆ ನೀಡಿದೆ. ಇದೇ ಪರಿಸ್ಥಿತಿ ಮುಂದುವರಿದರೆ, ಪ್ರಚಾರ ನಡೆಸುವುದು ಹೇಗೆ? ಜನರನ್ನು ಸೇರಿಸಿ ಸಮಾವೇಶ ಮಾಡುವುದಾದರೂ ಹೇಗೆ? ಬಂದ ಜನರಿಗೆ ನೀರು, ನೆರಳಿನ ವ್ಯವಸ್ಥೆ ಮಾಡುವುದಕ್ಕಾಗಿಯೇ ಲಕ್ಷಾಂತರ ರೂ. ಖರ್ಚಾದರೆ ಹೇಗೆ ಎಂಬ ಪ್ರಶ್ನೆಗಳು ಚುನಾವಣೆಯಲ್ಲಿ ಸ್ಪರ್ಧೆ ನಡೆಸಲು ಯೋಜನೆ ಹಾಕಿಕೊಂಡಿರುವ ಅಭ್ಯರ್ಥಿಗಳನ್ನು ಕಾಡುತ್ತಿವೆ.

ಬಿಸಿಲಿನ ಬೇಗೆಗೆ ಬಸವಳಿದ ಜನರು, ಹವಾಮಾನ ಇಲಾಖೆ ಎಚ್ಚರಿಕೆಯಿಂದ ಮತ್ತಷ್ಟು ಹೆದರಿಕೊಂಡಿದ್ದಾರೆ. ಏನೇ ಕೆಲಸ ಇದ್ದರೂ ಮಧ್ಯಾಹ್ನ ಮನೆ ಬಿಟ್ಟು ಹೊರ ಬರಲು ಹಿಂದೇಟು ಹಾಕುತ್ತಿದ್ದಾರೆ. ಇದು ರಾಜಕೀಯ ಪಕ್ಷಗಳಿಗೆ ಹಾಗೂ ಅಭ್ಯರ್ಥಿಗಳಿಗೆ ಮತ್ತಷ್ಟು ತಲೆನೋವಾಗಿ ಪರಿಣಮಿಸಿದೆ.
ಸಂಪರ್ಕಕೂ ಸಿಗದ ಜನರು: ಇನ್ನೇನು ನಾಮಪತ್ರ ಸಲ್ಲಿಕೆ ದಿನವೂ ಸನಿಹದಲ್ಲಿದೆ. ಅಷ್ಟರಲ್ಲಿ ಕ್ಷೇತ್ರದಾದ್ಯಂತ ಓಡಾಡಿ ಜನಸಂಪರ್ಕ ಮಾಡಬೇಕೆಂದರೂ ಅಭ್ಯರ್ಥಿಗಳಿಗೆ ಜನರು ಸಿಗುತ್ತಿಲ್ಲ. ತಾಲೂಕು, ಹೋಬಳಿ ಹಾಗೂ ಗ್ರಾಮ ಮಟ್ಟಕ್ಕೆ ಹೋಗಿ ಸಮುದಾಯ ಭವನವೋ ಇಲ್ಲವೇ ಮುಖಂಡರ ಮನೆಗೆ ಬರುವಂತೆ ಜನರನ್ನು ಕರೆದರೂ ನಿರೀಕ್ಷಿತ ಪ್ರಮಾಣದಲ್ಲಿ ಜನ ಬರುತ್ತಿಲ್ಲ. ಹೀಗಾಗಿ ಪಕ್ಷದ ಪದಾಧಿಕಾರಿಗಳು ಹಾಗೂ ಮುಖಂಡರನ್ನಷ್ಟೇ ಭೇಟಿ ಮಾಡಿ ವಾಪಸ್ಸಾಗಬೇಕಾಗಿದೆ ಎಂಬುದು ಅಭ್ಯರ್ಥಿಗಳ ಅಳಲು.
ಪ್ರಚಾರ ನಡೆಸುವುದಾದರೂ ಹೇಗೆ?:
ನಾಮಪತ್ರ ಸಲ್ಲಿಕೆಯಾದ ನಂತರ ಪ್ರಚಾರಕ್ಕೆ ಅಧಿಕೃತ ಚಾಲನೆ ಸಿಗಲಿದೆ. ಆಗ ರಾಜ್ಯ, ರಾಷ್ಟ್ರ ಮಟ್ಟದ ನಾಯಕರು ಅಭ್ಯರ್ಥಿ ಪರ ಪ್ರಚಾರಕ್ಕೆ ಆಗಮಿಸುತ್ತಾರೆ. ಆದರೆ, ಬಿಸಿಲಿನ ತಾಪ ಇದೇ ರೀತಿ ಮುಂದುಮದರೆ ನಾಯಕರ ಪ್ರಚಾರ ಸಭೆಗಳಿಗೆ ಜನರನ್ನು ಕರೆ ತರುವುದೇ ದೊಡ್ಡ ಸಮಸ್ಯೆಯಾಗಲಿದೆ. ಅಲ್ಲದೇ ಅಭ್ಯರ್ಥಿಗಳು ಸಹ ಕ್ಷೇತ್ರದಲ್ಲಿ ಓಡಾಡಿ ಪ್ರಚಾರ ಮಾಡಬೇಕೆಂದರೆ ಜನ ಸಿಗದಿರುವುದು ಚಿಂತೆಗೆ ದೂಡಿದೆ.

ಸಂಜೆಗೆ ಹೆಚ್ಚು ಪ್ರಚಾರ: ರಾಜ್ಯ ಮತ್ತು ರಾಷ್ಟ್ರ ಮಟ್ಟದ ನಾಯಕರ ಚುನಾವಣೆ ಪ್ರಚಾರ ಸಮಾವೇಶಗಳಿಗೆ ಬೆಳಗ್ಗೆ ಇಲ್ಲವೇ ಸಂಜೆ ಸಮಯ ಹೊಂದಿಸಿ ಕೊಡುವಂತೆ ಅಭ್ಯರ್ಥಿಗಳು ಪಕ್ಷದ ನಾಯಕರ ಬಳಿ ದುಂಬಾಲು ಬಿದ್ದಿದ್ದಾರೆ. ಏಕೆಂದರೆ, ಮಧ್ಯಾಹ್ನವಾದರೆ, ಬಿಸಿಲಿನ ತಾಪಕ್ಕೆ ಜನರು ಬರುವುದಿಲ್ಲ. ಆಗ ಪ್ರಚಾರ ಸಮಾವೇಶಗಳು ವಿಫಲವಾಗುವ ಸಾಧ್ಯತೆ ಹೆಚ್ಚಾಗಿದೆ ಎನ್ನುವ ಆತಂಕ ಅಭ್ಯರ್ಥಿಗಳಲ್ಲಿದೆ. ಇನ್ನು ಅಭ್ಯರ್ಥಿಗಳು ಸಹ ಬೆಳಗ್ಗೆ ಹಾಗೂ ಸಂಜೆಗೆ ಪ್ರಚಾರ ಸಭೆ ನಡೆಸಲು ಸಮಯ ಹೊಂದಾಣಿಕೆ ಮಾಡಲು ಹೆಣಗಾಡುತ್ತಿದ್ದಾರೆ.
ಒಟ್ಟಿನಲ್ಲಿ ಬೇಸಿಗೆ ತಾಪ ಜನಸಾಮಾನ್ಯರಷ್ಟೇ ಅಲ್ಲದೇ ಚುನಾವಣೆ ಕಣದಲ್ಲಿರುವ ಅಭ್ಯರ್ಥಿಗಳ ಬೆವರು ಇಳಿಯುವಂತೆ ಮಾಡುತ್ತಿರುವುದಂತೂ ಸತ್ಯ.
ಬಿಸಿಲಿನ ತಾಪ ತಡೆಗೆ ಮಾರ್ಗಸೂಚಿ
ಬಿಸಿಲಿನ ತಾಪ 37-38 ಡಿಗ್ರಿ ಸೆಲ್ಸಿಯಸ್ಗೆ ಹೆಚ್ಚಾಗಿದೆ. ಮುಂದಿನ ಎರಡೂರು ದಿನ 2 ರಿಂದ 3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿ ಉಷ್ಣಮಾರುತ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಈ ಮಧ್ಯೆ ಆರೋಗ್ಯ ಇಲಾಖೆ ಬಿಸಿಲಿನ ತಾಪ ಕುರಿತು ಕೆಲ ಮಾರ್ಗಸೂಚಿಗಳನ್ನು ಹೊರಡಿಸಿದೆ. ಬಿಸಿಲಿನಿಂದ ರಕ್ಷಿಸಿಕೊಳ್ಳಲು ಹೆಚ್ಚು ನೀರು ಸೇವನೆ, ಹೊರ ಬರುವಾಗ ಕಪ್ಪು ಕನ್ನಡಕ, ಟೋಪಿ ಹಾಕಿಕೊಳ್ಳುವಂತಹ ಕೆಲ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಜನರಲ್ಲಿ ಮನವಿ ಮಾಡಿದೆ. ಇಲ್ಲವಾದರೆ, ಹೀಟ್ ಸ್ಟೋಕ್ ಆಗುವ ಸಾಧ್ಯತೆಯಿದೆ ಎಂದು ಸಹ ಎಚ್ಚರಿಸಿದೆ.

ಬಿಸಿಲಿನ ತಾಪ ಹೆಚ್ಚಾಗಿರುವುದು ಪ್ರಚಾರಕ್ಕೆ ಸ್ವಲ್ಪ ಮಟ್ಟಿನ ಅಡ್ಡಿಯಾಗುತ್ತಿದೆ. ಆದಾಗ್ಯೂ ನಿತ್ಯ ಪ್ರಚಾರ, ನಾಯಕರ ಸಮಾವೇಶಗಳನ್ನು ಬೆಳಗ್ಗೆ ಇಲ್ಲವೇ ಸಂಜೆ ನಿಗದಿ ಮಾಡುವಂತೆ ಪಕ್ಷದಲ್ಲಿ ಚರ್ಚೆಗಳು ನಡೆದಿವೆ. ಅನಿವಾರ್ಯ ಪರಿಸ್ಥಿತಿಯಲ್ಲಿ ಪೆಂಡಾಲ್ ಹಾಕುವ ಚಿಂತನೆ ನಡೆದಿದೆ ಎಂದು ರಾಜಕೀಯ ಪಕ್ಷಗಳ ಪಕ್ಷದ ನಾಯಕರುಗಳ ಅಭಿಪ್ರಾಯವಾಗಿದೆ.












Click it and Unblock the Notifications