ಬಿಜೆಪಿಯತ್ತ ಹೋಲ್ ಸೇಲ್ ಗುಳೇ: ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ಸಿಗೆ ಗಂಡಾಂತರ?
Recommended Video
'Every action, there is a reaction' ಇದು ಕಳೆದ ಶುಕ್ರವಾರ (ಜೂ 14) ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರದ ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಡಾ. ಸುಧಾಕರ್ ನೀಡಿದ್ದ ಮಾರ್ಮಿಕ ಪ್ರತಿಕ್ರಿಯೆ.
ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಚಿಕ್ಕಬಳ್ಳಾಪುರದ ಶಾಸಕ ಡಾ. ಸುಧಾಕರ್, ಕಾಂಗ್ರೆಸ್ ನಲ್ಲಿ ಇದ್ದೂ ಇಲ್ಲದಂತೆ ಇರುವುದು ಗೊತ್ತಿರುವ ವಿಚಾರ. ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಸುಧಾಕರ್ ಸಿಟ್ಟನ್ನು ಶಮನಗೊಳಿಸಲು, ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಸ್ಥಾನದ ಆಫರ್ ನೀಡಲಾಗಿತ್ತು. ಕೊನೆಗೆ, ಅದೂ ಸಿಗದೇ ಇದ್ದದ್ದು ಈಗ ಇತಿಹಾಸ.
ಹಲವು ವಿಚಾರದಲ್ಲಿ ನಮ್ಮ ನಾಯಕನಿಗೆ ಅನ್ಯಾಯವಾಗಿದ್ದರೂ, ಸಹಿಸಿಕೊಂಡು ಬರಲಾಗುತ್ತಿದೆ ಎನ್ನುವುದನ್ನು ಬಹಿರಂಗವಾಗಿಯೇ ಕ್ಷೇತ್ರದ ಮುಖಂಡರು, ಕಾರ್ಯಕರ್ತರು, ಹಿರಿಯ ಮುಖಂಡರಲ್ಲಿ ಅವಲತ್ತು ತೋಡಿಕೊಂಡು ಬರುತ್ತಿದ್ದದ್ದೂ ಗೌಪ್ಯವಾಗಿ ಉಳಿದಿಲ್ಲ. ಎಲ್ಲಕ್ಕೂ ಕಾಲ ಕೂಡಿ ಬರಬೇಕು ಎಂದು ಸಿಟ್ಟಿಗೆ ತೇಪೆ ಹಾಕುವ ಕೆಲಸ ಕಾಂಗ್ರೆಸ್ಸಿನಿಂದ ನಡೆದುಕೊಂಡು ಬರುತ್ತಲೇ ಇತ್ತು.
ಈಗ, ಶಾಸಕ ಸುಧಾಕರ್ ಅವರ ತಂದೆ, ರಾಜಕೀಯವಾಗಿ ಬಹಳಷ್ಟು ಪಳಗಿರುವ ಕೇಶವ ರೆಡ್ಡಿ ಮಗನ ಪರವಾಗಿ ಆಖಾಡಕ್ಕೆ ಇಳಿದಿರುವುದು, ಚಿಕ್ಕಬಳ್ಳಾಪುರ ಕಾಂಗ್ರೆಸ್ ಘಟಕಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸುತ್ತಿದೆ. ಕೇಶವ ರೆಡ್ಡಿ, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರೂ, ಹಾಲೀ ಸದಸ್ಯರೂ ಕೂಡಾ..

ಸರಕಾರದ ವಿರುದ್ದ ನೇರಾನೇರ ವಾಕ್ ಪ್ರಹಾರ ನಡೆಸುತ್ತಿದ್ದ ಸುಧಾಕರ್
ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಸಮ್ಮಿಶ್ರ ಸರಕಾರದ ವಿರುದ್ದ ಮೊದಮೊದಲು ನೇರಾನೇರ ವಾಕ್ ಪ್ರಹಾರ ನಡೆಸುತ್ತಿದ್ದ ಸುಧಾಕರ್, ಕೆಲವು ದಿನಗಳಿಂದ ಹೆಚ್ಚೇನೂ ಪ್ರತಿಕ್ರಿಯೆ ನೀಡದೇ ಸುಮ್ಮನಾಗಿದ್ದರು. ಮಾಜಿ ಸಿಎಂ ಸಿದ್ದರಾಮಯ್ಯ ಬಣದಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದ ಸುಧಾಕರ್ ಅವರ ತಂದೆ ಕೇಶವ ರೆಡ್ಡಿ ಈಗ ಮಗನ ಪರವಾಗಿ ಆಖಾಡಕ್ಕೆ ಇಳಿದಿದ್ದು ಚಿಕ್ಕಬಳ್ಳಾಪುರದ ರಾಜಕೀಯ ಚಿತ್ರಣವನ್ನು ಬದಲಿಸುವ ಸಾಧ್ಯತೆಯಿಲ್ಲದಿಲ್ಲ.

ಕುಮಾರಸ್ವಾಮಿ ಮತ್ತು ಗೌಡ್ರ ಕುಟುಂಬದ ವಿರುದ್ದ ಪರೋಕ್ಷವಾಗಿ ಕಿಡಿ
ಕೇಶವ ರೆಡ್ಡಿ, ತಮ್ಮ ಮಗ ಬಿಜೆಪಿಗೆ ಸೇರುವ ಸಾಧ್ಯತೆಯ ಬಗ್ಗೆ ಸುಳಿವನ್ನು ನೀಡಿದ್ದಾರೆ. ಮೊದಲು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಸುಧಾಕರ್ ನಂತರ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಬಂದರೂ ಓಕೆ ಎನ್ನುವ ನಿಲುವನ್ನು ಹೊಂದಿದ್ದರು, ಅದೂ ಸಿಗದೇ ಇದ್ದಾಗ, ಕುಮಾರಸ್ವಾಮಿ ಮತ್ತು ಗೌಡ್ರ ಕುಟುಂಬದ ವಿರುದ್ದ ಪರೋಕ್ಷವಾಗಿ ಕಿಡಿಕಾರಿದ್ದು ಗೊತ್ತೇ ಇದೆ.

ಕಾರ್ಯಕರ್ತರ ಮತ್ತು ಮುಖಂಡರ ಅಭಿಪ್ರಾಯ
ನನ್ನ ಮಗ ರಾಜಕೀಯವಾಗಿ ಏಳಿಗೆ ಕಾಣಬಾರದೆಂದು ಉದ್ದೇಶಪೂರ್ವಕವಾಗಿಯೇ ಅವನನ್ನು ತುಳಿಯಲು ಪ್ರಯತ್ನಿಸುವ ಕೆಲಸ ನಡೆಯುತ್ತಿದೆ ಎಂದು ಕಾಂಗ್ರೆಸ್ - ಜೆಡಿಎಸ್ ಸರಕಾರದ ವಿರುದ್ದ ಕಿಡಿಕಾರಿರುವ ಕೇಶವ ರೆಡ್ಡಿ, ಕ್ಷೇತ್ರದ ಪ್ರತೀ ಹೋಬಳಿಗೆ ಸಂಚರಿಸಿ, ಕಾರ್ಯಕರ್ತರ ಮತ್ತು ಮುಖಂಡರ ಅಭಿಪ್ರಾಯವನ್ನು ಸಂಗ್ರಹಿಸುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಸಚಿವ ಸ್ಥಾನ ಕೊಡಲಿಲ್ಲ, ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಸಿಗಲಿಲ್ಲ
ಸಚಿವ ಸ್ಥಾನ ಕೊಡಲಿಲ್ಲ, ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಸಿಗಲಿಲ್ಲ, ಅದೆಲ್ಲಾ ಹೋಗಲಿ, ಕ್ಷೇತ್ರಕ್ಕೆ ಸಂಬಂಧಿಸಿದ ಅಭಿವೃದ್ದಿಗೆ ಅನುದಾನವನ್ನೂ ನೀಡುತ್ತಿಲ್ಲ ಎಂದು ಶಾಸಕರ ತಂದೆ ಕೇಶವ ರೆಡ್ಡಿ ನೇರವಾಗಿ ಕುಮಾರಸ್ವಾಮಿ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ. ಇಷ್ಟೆಲ್ಲಾ ಅವಮಾನವನ್ನು ಸಹಿಸಿಕೊಂಡು ಹೇಗೆ ಇರಲು ಸಾಧ್ಯ ಎಂದು ರೆಡ್ಡಿ, ಕಾರ್ಯಕರ್ತರ ಮುಂದೆ ಹೇಳಿರುವುದು, ಬಿಜೆಪಿಯತ್ತ ಒಲವೇ ಎನ್ನುವ ಅನುಮಾನ ಕಾಡುತ್ತಿದೆ.

ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಬಿಜೆಪಿಯತ್ತ ಗುಳೇ ಹೋಗುವುದರಲ್ಲಿ ಅನುಮಾನವಿಲ್ಲ
ಒಂದು ವೇಳೆ, ನಾವೆಲ್ಲಾ ಕಾಂಗ್ರೆಸ್ ಪಕ್ಷ ಬಿಟ್ಟು ಬಿಜೆಪಿ ಸೇರುವುದಾದರೆ, ತಾವೆಲ್ಲಾ ನಮ್ಮ ಬೆನ್ನ ಹಿಂದೆ ಇರುತ್ತೀರಾ ಎನ್ನುವ ಪ್ರಶ್ನೆಯನ್ನು ಬೆಂಬಲಿಗರ ಮುಂದೆ ಶಾಸಕ ಸುಧಾಕರ್ ತಂದೆ ಕೇಶವ ರೆಡ್ಡಿ ಇಟ್ಟಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ, ಕಾರ್ಯಕರ್ತರು ಮತ್ತು ಮುಖಂಡರಿಂದ ಪೂರಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಾಗಾಗಿ, ಕಾಂಗ್ರೆಸ್ ಹಿರಿಯ ಮುಖಂಡರು ಮಧ್ಯಪ್ರವೇಶಿಸದಿದ್ದರೆ, ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಬಿಜೆಪಿಯತ್ತ ಗುಳೇ ಹೋಗುವುದರಲ್ಲಿ ಅನುಮಾನವಿಲ್ಲ. ಕ್ಷೇತ್ರದ ನೂತನ ಸಂಸದರು ಬಚ್ಚೇಗೌಡ್ರು ಬೇರೆ...












Click it and Unblock the Notifications