Pradeep Eshwar: ವಿಜಯೇಂದ್ರ, ಯತ್ನಾಳ್, ಅಶೋಕ್ ಕಾಂಗ್ರೆಸ್ಗೆ ಬರ್ತಾರೆ
ಬಿಜೆಪಿಯಲ್ಲಿ ಬಣ ಬಡಿದಾಟ ಹಾಗೂ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರ ಜೋರಾಗಿರುವ ಹೊತ್ತಲ್ಲೇ ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅವರು ಹೊಸ ಬಾಂಬ್ ಸಿಡಿಸಿದ್ದಾರೆ. ಬಿಜೆಪಿಯ ಪ್ರಮುಖ ನಾಯಕರೆಲ್ಲ ಕಾಂಗ್ರೆಸ್ಗೆ ಬರಲಿದ್ದಾರೆ ಎನ್ನುವ ಸುಳಿವು ನೀಡುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ. ಹಾಗಾದ್ರೆ ಯಾರೆಲ್ಲ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಬರ್ತಾರೆ ಅನ್ನೋದನ್ನ ಪ್ರದೀಪ್ ಈಶ್ವರ್ ಅವರೇ ಪಟ್ಟಿ ಕೊಟ್ಟಿದ್ದಾರೆ ನೋಡಿ.
ಈ ಬಗ್ಗೆ ಮಾಧ್ಯಮಗಳ ಮುಂದೆ ಮಾತನಾಡಿರುವ ಪ್ರದೀಪ್ ಈಶ್ವರ್ ಅವರು ಪ್ರಮುಖವಾಗಿ ನಾಲ್ಕು ಮಂದಿ ಬಿಜೆಪಿ ನಾಯಕರ ಹೆಸರನ್ನು ಉಲ್ಲೇಖಿಸಿದ್ದಾರೆ. ವಿಪಕ್ಷ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಸಿ.ಟಿ.ರವಿ ಅವರು ಕಾಂಗ್ರೆಸ್ ಪಕ್ಷಕ್ಕೆ ಬರುತ್ತಾರೆ ಎನ್ನುವ ವಿಶ್ವಾಸ ನನಗಿದೆ ಎಂದು ಪ್ರದೀಪ್ ಈಶ್ವರ್ ಹೇಳಿದ್ದಾರೆ. ಇದು ರಾಜ್ಯ ರಾಜಕಾರಣದಲ್ಲಿ ಸಂಚಲನವೇ ಸೃಷ್ಟಿಸಿದೆ.

ನಾನು ನಮ್ಮ ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರದ ಬಗ್ಗೆ ಮಾತನಾಡುವುದಿಲ್ಲ. ಸಿಟಿ ರವಿ ಅವರು. ಅಶೋಕಣ್ಣ, ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ವಿಜಯೇಂದ್ರ ಅವರು ಕೂಡ ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಬರಬೇಕು. ಅವರು ನಮ್ಮ ಪಕ್ಷಕ್ಕೆ ಬಂದರೆ ಬಿಜೆಪಿಯವರಿಗಿಂತ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತೇವೆ. ಹಾಗಾಗಿ ಅವರೆಲ್ಲರೂ ಕಾಂಗ್ರೆಸ್ ಪಕ್ಷಕ್ಕೆ ಬರಲಿ ಎನ್ನುವುದು ನನ್ನ ಬಯಕೆ ಎಂದು ಶಾಸಕ ಪ್ರದೀಪ್ ಹೇಳಿದ್ದಾರೆ.
ನನ್ನ ಯೋಗ್ಯತೆ ಕಸ ಗುಡಿಸುವುದು: ಇತ್ತೀಚೆಗೆ ಡಿಕೆ ಶಿವಕುಮಾರ್ ಅವರು ಈಶ ಫೌಂಡೇಶನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿಚಾರವಾಗಿ ಬಿಜೆಪಿ ನಾಯಕರಿಂದ ಟೀಕೆ ವ್ಯಕ್ತವಾಗುತ್ತಿರುವ ಬಗ್ಗೆಯೂ ಪ್ರದೀಪ್ ಈಶ್ವರ್ ಮಾತನಾಡಿದ್ದಾರೆ. "ನಾನು ಕಾಂಗ್ರೆಸ್ನಲ್ಲಿ ಒಬ್ಬ ಸಾಮಾನ್ಯ ಕಾರ್ಯಕರ್ತ. ನನ್ನ ಯೋಗ್ಯತೆ ಏನಿದ್ದರೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯಲ್ಲಿ (ಕೆಪಿಸಿಸಿ) ಕಸ ಗುಡಿಸುವುದು. ಹಾಗಾಗಿ ಒಬ್ಬ ಕಸ ಗುಡಿಸುವ ವ್ಯಕ್ತಿಯು ಕೆಪಿಸಿಸಿ ದೇವರಾದ ಡಿಕೆ ಶಿವಕುಮಾರ್ ಅವರ ಬಗ್ಗೆ ಮಾತನಾಡಬಾರದು. ಬೇಕಾದರೆ ಬಿಜೆಪಿ ನಾಯಕರಾದ ಆರ್.ಅಶೋಕ್, ಬಸನಗೌಡ ಪಾಟೀಲ್ ಯತ್ನಾಳ್, ಸಿ.ಟಿ ರವಿ ಅವರು ನನ್ನ ಲೆವೆಲ್ನವರು. ಬೇಕಾದ್ರೆ ಅವರ ಬಗ್ಗೆ ನಾನು ಮಾತನಾಡುತ್ತೇನೆ ಎಂದೂ ಟಾಂಗ್ ಕೊಟ್ಟಿದ್ದಾರೆ.

ಪ್ರದೀಪ್ ಈಶ್ವರ್ಗೆ ಭೇಷ್ ಎಂದಿದ್ದ ಸಿಎಂ: ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಮೊದಲ ಬಾರಿಗೆ ಶಾಸಕರಾಗಿದ್ದ ಪ್ರದೀಪ್ ಈಶ್ವರ್ ಅವರನ್ನು ಸಿಎಂ ಸಿದ್ದರಾಮಯ್ಯ ಅವರು ಹೊಗಳಿ ಕೊಂಡಾಡಿದ್ದಾರೆ. ತಾಲ್ಲೂಕು ಮಟ್ಟದ ಅಧಿಕಾರಿಗಳ ತಂಡ ಕಟ್ಟಿಕೊಂಡು, ಗ್ರಾಮಗಳಿಗೆ ತೆರಳಿ ಜನರ ಅಹವಾಲುಗಳನ್ನು ಆಲಿಸಿ, ಸ್ಥಳದಲ್ಲೇ ಹಾಗೂ ಕಾಲಮಿತಿಯಲ್ಲಿ ಪರಿಹರಿಸುವ ಕಾರ್ಯ ಕೈಗೆತ್ತಿಕೊಂಡಿರುವ ಶಾಸಕ ಪ್ರದೀಪ್ ಈಶ್ವರ್ ಅವರ ವಿನೂತನ ಪ್ರಯತ್ನಕ್ಕೆ ಶುಭ ಹಾರೈಕೆಗಳು ಎಂದು ಬೆನ್ನುತಟ್ಟಿದ್ದರು.
"ನಮ್ಮ ಊರಿಗೆ ನಮ್ಮ ಶಾಸಕರು" ಕಾರ್ಯಕ್ರಮದಂತಹ ಜನಪರ ಕಾರ್ಯಗಳಿಗೆ ನನ್ನ ಹಾಗೂ ನಮ್ಮ ಸರ್ಕಾರದ ಬೆಂಬಲ ಸದಾಕಾಲ ಇರಲಿದೆ ಎಂಬ ವಿಶ್ವಾಸವನ್ನು ಅವರಲ್ಲಿ ತುಂಬಿದ್ದೇನೆ ಎಂದಿದ್ದರು. ಈವರೆಗೆ ಸುಮಾರು 50 ಹಳ್ಳಿಗಳಿಗೆ ತೆರಳಿ ರಸ್ತೆ, ಚರಂಡಿ, ಬಸ್ ವ್ಯವಸ್ಥೆ, ವಿದ್ಯುತ್ ಸಂಪರ್ಕ, ಪಿಂಚಣಿ, ನಿವೇಶನ ಹೀಗೆ ಸಾರ್ವಜನಿಕರ ನಿತ್ಯ ಬದುಕಿಗೆ ತೊಡಕಾಗಿದ್ದ ಹಲವು ಸಮಸ್ಯೆಗಳನ್ನು ಆಲಿಸಿ ಪ್ರದೀಪ್ ಈಶ್ವರ್ ಅವರು ಪರಿಹರಿಸಿದ್ದಾರೆ. ಈ ಕಾರ್ಯಕ್ರಮ ಇನ್ನಷ್ಟು ಜನರನ್ನು ತಲುಪುವ ಮೂಲಕ ಜನರ ಜೀವನಮಟ್ಟ ಸುಧಾರಿಸಲು ನೆರವಾಗಲಿ ಎಂದು ಆಶಿಸಿದ್ದರು.












Click it and Unblock the Notifications