ವಾಸನ್ ಐ ಕೇರ್ ಸ್ಥಾಪಕ ಎಎಂ ಅರುಣ್ ನಿಗೂಢ ಸಾವು
ಚೆನ್ನೈ, ನ. 16: ತಮಿಳುನಾಡು ಮೂಲದ ವಾಸನ್ ಐ ಕೇರ್ ಸ್ಥಾಪಕ ಎಎಂ ಅರುಣ್ ನಿಗೂಢವಾಗಿ ಮೃತಪಟ್ಟಿದ್ದಾರೆ. ದೇಶದ ಪ್ರತಿಷ್ಠಿತ ಕಣ್ಣಿನ ಆಸ್ಪತ್ರೆಗಳ ಜಾಲ ಎನಿಸಿಕೊಂಡಿರುವ ವಾಸನ್ ಐ ಕೇರ್ ಸ್ಥಾಪಕ ಎಎಂ ಅರುಣ್ ಅವರು ಮೃತಪಟ್ಟಿದ್ದು ಹೇಗೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಚೆನ್ನೈನ ಕಾವೇರಿ ಆಸ್ಪತ್ರೆಗೆ ಅರುಣ್ ಅವರನ್ನು ಕರೆ ತರುವ ವೇಳೆಗೆ ಅವರು ಮೃತಪಟ್ಟಿದ್ದರು ಎಂದು ವರದಿಯಾಗಿದೆ. ಕೆಲ ವರದಿಗಳ ಪ್ರಕಾರ ಆತ್ಮಹತ್ಯೆ ಎಂದು ತಿಳಿದು ಬಂದಿದ್ದರೆ, ಹೃದಯಾಘಾತದಿಂದ ಮೃತರಾಗಿದ್ದಾರೆ ಎಂದು ಕೆಲವರು ಹೇಳಿದ್ದಾರೆ.
52 ವರ್ಷ ವಯಸ್ಸಿನ ಅರುಣ್ ಅವರು ತಮಿಳುನಾಡಿನ ತಿರುಚ್ಚಿ ಮೂಲದವರಾಗಿದ್ದಾರೆ. ಇವರ ಕುಟುಂಬದವರು 60 ವರ್ಷಗಳಿಂದ ಔಷಧಾಲಯ ಉದ್ಯಮವನ್ನು ನಡೆಸಿಕೊಂಡು ಬಂದಿದ್ದರು. 1991ರಿಂದ ಉದ್ಯಮವನ್ನು ಅರುಣ್ ಕೈಗೆತ್ತಿಕೊಂಡರು. ವಾಸನ್ ಮೆಡಿಕಲ್ ಹಾಲ್ ಎಂಬ ಮೂಲ ಹೆಸರು ಹೊಂದಿದ್ದ ಸಂಸ್ಥೆ ನಂತರ ವಾಸನ್ ಐ ಕೇರ್ ಹೆಸರಿನ ಕಣ್ಣಿನ ಆಸ್ಪತ್ರೆಯಾಗಿ ಬದಲಾಗಿ ಜನಪ್ರಿಯತೆ ಗಳಿಸಿತು.

ದಕ್ಷಿಣ ಭಾರತದಲ್ಲಿ 100ಕ್ಕೂ ಅಧಿಕ ಕಡೆಗಳಲ್ಲಿ ವಾಸನ್ ಐ ಕೇರ್ ಸ್ಥಾಪನೆಯಾಗಿದೆ.
ವಿವಾದ: ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಹಾಗೂ ಅವರ ಪುತ್ರ ಕಾರ್ತಿ ಭಾಗಿಯಾಗಿರುವ ಅಕ್ರಮ ಹಣ ವಹಿವಾಟಿನ ಪ್ರಕರಣದಲ್ಲಿ ವಾಸನ್ ಐ ಕೇಸ್ ಹೆಸರು ತಗುಲಿ ಹಾಕಿಕೊಂಡಿದೆ. ವಾಸನ್ ಐ ಕೇರ್ ಮೇಲೆ ತೆರಿಗೆ ಇಲಾಖೆ ಹಾಗೂ ಜಾರಿನಿರ್ದೇಶನಾಲಯದ ಅಧಿಕಾರಿಗಳು ದಾಳಿ ಮಾಡಿದ್ದರು.
2014-15ರಲ್ಲಿ ಆದಾಯ ತೆರಿಗೆ ವಂಚನೆ ಆರೋಪ ಹೊತ್ತ ಅರುಣ್ ಹಾಗೂ ಅವರ ಪತ್ನಿ ಮೀರಾ ವಿರುದ್ಧ ಪ್ರಕರಣ ಜಾರಿಯಲ್ಲಿದ್ದು ,ಸಂಸ್ಥೆ ಮಾರಾಟದ ಮಾತುಕತೆ ಕೇಳಿ ಬಂದಿತ್ತು. ಸುಮಾರು 600ಕ್ಕೂ ಅಧಿಕ ನೇತ್ರ ತಜ್ಞರು, 6,000ಕ್ಕೂ ಅಧಿಕ ಸಿಬ್ಬಂದಿ ಹೊಂದಿರುವ ಸಂಸ್ಥೆಯ ಭವಿಷ್ಯವೂ ತೂಗುಯ್ಯಾಲೆ ಸ್ಥಿತಿಯಲ್ಲಿದೆ.












Click it and Unblock the Notifications