ತಮಿಳುನಾಡಿನಲ್ಲಿ ರಾಷ್ಟ್ರಪತಿ ಆಳ್ವಿಕೆ ತನ್ನಿ: ಸುಬ್ರಮಣಿಯನ್ ಸ್ವಾಮಿ ಪತ್ರ
ಚೆನ್ನೈ, ಅಕ್ಟೋಬರ್ 7: ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಅನಾರೋಗ್ಯದ ಕಾರಣಕ್ಕೆ ತಮಿಳುನಾಡಿನ ಆಡಳಿತದಲ್ಲಿ ಅವ್ಯವಸ್ಥೆ ಕಾಣಿಸಿಕೊಳ್ಳಬಹುದು. ಅದ್ದರಿಂದ ರಾಷ್ಟ್ರಪತಿ ಆಳ್ವಿಕೆಯನ್ನು ತರಬೇಕು ಎಂದು ಕೇಂದ್ರ ಗೃಹ ಸಚಿವ ರಾಜ್ ನಾಥ್ ಸಿಂಗ್ ಅವರಿಗೆ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಪತ್ರ ಬರೆದಿದ್ದಾರೆ.
ಜಯಲಲಿತಾ ಅವರು ಇನ್ನೂ ಎಷ್ಟು ದಿನ ಆಸ್ಪತ್ರೆಯಲ್ಲಿ ಇರಬೇಕಾಗುತ್ತದೋ ಮತ್ತು ಅವರ ಆರೋಗ್ಯ ಸ್ಥಿತಿಯ ಬಗ್ಗೆಯೂ ಯಾವುದೇ ಮಾಹಿತಿ ಇಲ್ಲ. ಇದರಿಂದ ಆಡಳಿತದಲ್ಲಿ ಅವ್ಯವಸ್ಥೆ ಆಗಬಾರದು. ಆ ಕಾರಣಕ್ಕೆ ತಮಿಳುನಾಡಿನಲ್ಲಿ ರಾಷ್ಟ್ರಪತಿ ಆಳ್ವಿಕೆ ತರಬೇಕು ಎಂದು ಸುಬ್ರಮಣಿಯನ್ ಸ್ವಾಮಿ ಪತ್ರದಲ್ಲಿ ತಿಳಿಸಿದ್ದಾರೆ.[ಜಯಲಲಿತಾ ಅನಾರೋಗ್ಯ: ಹೈಕೋರ್ಟ್ ಗೆ ಹಾಕಿದ್ದ ಪಿಐಎಲ್ ವಜಾ]
ನಿವೃತ್ತ ಮುಖ್ಯಕಾರ್ಯದರ್ಶಿಗೆ ರಾಜ್ಯಭಾರ ನಡೆಸುವುದಕ್ಕೆ ಬಿಡಲಾಗಿದೆ. ಈ ಸಂದರ್ಭದಲ್ಲಿ ರಾಮನಾಥಪುರಂ, ತಿರುನಲ್ವೇಲಿ, ಮದುರೈ ಹಾಗೂ ಕನ್ಯಾಕುಮಾರಿಯಲ್ಲಿ ಐಎಸ್ ಐಎಸ್ ನ ಸ್ಲೀಪರ್ ಸೆಲ್ ಗಳು ಚುರುಕಾಗಿವೆ.
ದ್ರಾವಿಡಿಯನ್ ಕಳಗಂ ಸಹಾಯ ಹಾಗೂ ಸಹಕಾರದಲ್ಲಿ, ಇನ್ನೂ ಉಳಿದಿರುವ ಎಲ್ ಟಿಟಿಇ ಸದಸ್ಯರು, ಭೂಗತರಾಗಿರುವ ನಕ್ಸಲೈಟ್ಸ್ ರಾಜ್ಯದಲ್ಲಿ ದೊಡ್ಡ ಮಟ್ಟದ ಅವ್ಯವಸ್ಥೆ ಹಾಗೂ ಕಾನೂನಿಗೆ ಧಕ್ಕೆ ಉಂಟು ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಸ್ವಾಮಿ ಪತ್ರದಲ್ಲಿ ಬರೆದಿದ್ದಾರೆ.['ಅಮ್ಮ' ಹೆಸರಿನಲ್ಲಿ ರಾಜ್ಯಭಾರ ಮಾಡುತ್ತಿರುವವರು ಯಾರು?]
ವಿಧಾನಸಭೆಯನ್ನು ಅಮಾನತಿನಲ್ಲಿರಿಸಿ, ಸಂವಿಧಾನದ 356ನೇ ಪರಿಚ್ಛೇದವನ್ನು ಜಾರಿಗೊಳಿಸಬೇಕು. ಜಯಲಲಿತಾ ಅವರು ಮತ್ತೆ ಆಡಳಿತ ನಡೆಸುವವರೆಗೂ ಆರು ತಿಂಗಳ ಕಾಲ ದಕ್ಷಿಣ ಭಾಗದ ಜಿಲ್ಲೆಗಳಲ್ಲಿ ಹಾಗೂ ಚೆನ್ನೈನಲ್ಲಿ ಶಸ್ತ್ರಸಜ್ಜಿತ ಪಡೆ ಕಾಯ್ದೆಯನ್ನು ಜಾರಿಗೆ ತರಬೇಕು ಎಂದು ಹೇಳಿದ್ದಾರೆ.
ಜಯಲಲಿತಾ ಅವರು ಇನ್ನು ಕೆಲ ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪದೆಯಬೇಕಾಗುತ್ತದೆ ಎಂದು ಅಪೋಲೋ ಆಸ್ಪತ್ರೆಯವರು ಹೇಳಿರುವುದರಿಂದ ರಾಷ್ಟ್ರಪತಿ ಆಳ್ವಿಕೆ ತರುವುದು ಸಾಂವಿಧಾನಿಕ ಅಗತ್ಯವಷ್ಟೇ ಅಲ್ಲ, ತುರ್ತು ಅಗತ್ಯ ಕೂಡ ಎಂದು ಕೇಂದ್ರ ಗೃಹ ಸಚಿವರಿಗೆ ಬರೆದ ಪತ್ರದಲ್ಲಿ ಅವರು ತಿಳಿಸಿದ್ದಾರೆ.